ಬಿಡಿಎ ಹೊಸ ಲೇಔಟ್: 50 ಸಾವಿರ ಸೈಟುಗಳ ನಿರ್ಮಾಣ
ಬೆಂಗಳೂರು, ಜುಲೈ 01: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದಲ್ಲಿ ಹೊಸ ಲೇಔಟ್ಗಳ ನಿರ್ಮಾಣಕ್ಕೆ ತಯಾರಿ ನಡೆಸಿದೆ. ಒಟ್ಟು 50 ಸಾವಿರ ಸೈಟಗಳು ನಿರ್ಮಾಣಗೊಳ್ಳಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.
ಪೆರಿಫೆರಲ್ ರಿಂಗ್ ರೋಡ್ (ಪಿಆರ್ಆರ್) ಬೆಂಗಳೂರು ನಗರದ ಮಹತ್ವದ ಯೋಜನೆಗಳಲ್ಲಿ ಒಂದು. ಈ ರಸ್ತೆ ಹಾದು ಹೋಗುವ ಭಾಗದಲ್ಲಿ 6 ಲೇಔಟ್ಗಳ ನಿರ್ಮಾಣಕ್ಕೆ ಬಿಡಿಎ ಚಿಂತನೆ ನಡೆಸಿದ್ದು, ಇದಕ್ಕೆ ಸುಮಾರು 3,500 ಎಕರೆ ಭೂಮಿ ಬೇಕಾಗಲಿದೆ.

ಬೆಂಗಳೂರು ನಗರದ ಹೊರವಲಯದ ಸುತ್ತ ನಿರ್ಮಾಣಗೊಳ್ಳುವ ಸುಮಾರು 73 ಕಿ. ಮೀ. ಪಿಆರ್ಆರ್ ಯೋಜನೆ ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಪ್ರದೇಶದಲ್ಲಿ ಹೊಸ ಲೇಔಟ್ ನಿರ್ಮಾಣ ಮಾಡಿ ನಿವೇಶನ ಮಾರಾಟ ಮಾಡುವುದು ಬಿಡಿಎ ಯೋಜನೆಯಾಗಿದೆ.
3 ತಾಲೂಕುಗಳ ವ್ಯಾಪ್ತಿ: ಪೆರಿಫೆರಲ್ ರಿಂಗ್ ರೋಡ್ 8 ಪಥದ ರಸ್ತೆಯಾಗಿದ್ದು ಆಕ್ಸೆಸ್ ಕಂಟ್ರೋಲ್ ಹೈವೇಯಾಗಿರಲಿದೆ. ಈ ರಸ್ತೆ ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ ಮತ್ತು ಆನೇಕಲ್ ತಾಲೂಕುಗಳ ಮೂಲಕ ಹಾದು ಹೋಗಲಿದೆ.
ಬಿಡಿಎ ಸೈಟುಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಆದ್ದರಿಂದ ಹೊಸ ಲೇಔಟ್ ನಿರ್ಮಾಣ ಮಾಡಿ 50 ಸಾವಿರ ಸೈಟುಗಳನ್ನು ನಿರ್ಮಾಣ ಮಾಡಲು ಯೋಜಿಸಲಾಗಿದೆ. ಎರಡು ತಿಂಗಳ ಹಿಂದೆ ಇದಕ್ಕೆ ಪ್ರಸ್ತಾವನೆ ಸಿದ್ಧಗೊಳಿಸಲಾಗಿದ್ದು, ಭೂಮಿ ಗುರುತಿಸಿದ ಬಳಿಕ ಮುಂದಿನ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೊಸ ಲೇಔಟ್ ನಿರ್ಮಾಣಕ್ಕೆ ಭೂ ಸ್ವಾಧೀನ ಮಾಡಿಕೊಂಡ ಮೇಲೆ ಮಾಲೀಕರಿಗೆ 40:60 ನಿಯಮದಂತೆ ಪರಿಹಾರ ನೀಡಲಾಗುತ್ತದೆ. ಈ ನಿಯಮದ ಅನುಸಾರ ಭೂಮಿ ನೀಡಿದ ಮಾಲೀಕರಿಗೆ ಅಭಿವೃದ್ಧಿಪಡಿಸಲಾದ ಶೇ 40ರಷ್ಟು ಭೂಮಿಯನ್ನು ಅದೇ ಲೇಔಟ್ನಲ್ಲಿ ನೀಡಲಾಗುತ್ತದೆ. ಶೇ 60ರಷ್ಟು ಭೂಮಿಯನ್ನು ಬಿಡಿಎ ಪಡೆಯಲಿದೆ.
ಜನರಿಗೆ ಹೊರೆಯಾಗದಂತೆ ಈ ಹೊಸ ಲೇಔಟ್ ಸೈಟುಗಳ ಬೆಲೆಗಳನ್ನು ನಿಗದಿ ಮಾಡಲಾಗುತ್ತದೆ. ಸೈಟುಗಳು ಬೇಗನೇ ಮಾರಾಟವಾದರೆ ಬಿಡಿಎಗೆ ಸಹ ಆದಾಯ ಬರಲಿದ್ದು, ಬೇರೆ ಬೇರೆ ಯೋಜನೆಗಳನ್ನು ಮುಂದುವರೆಸಲು ಅನುಕೂಲವಾಗಲಿದೆ ಎಂಬುದು ನಿರೀಕ್ಷೆಯಾಗಿದೆ.
ಪ್ರಸ್ತುತ ಬಿಡಿಎ ಡಾ. ಶಿವರಾಮ ಕಾರಂತ ಬಡಾವಣೆಯಲ್ಲಿ 34,000 ಸೈಟುಗಳನ್ನು ನಿರ್ಮಾಣ ಮಾಡಿದೆ. ಇವುಗಳಲ್ಲಿ 10 ಸಾವಿರ ಸೈಟುಗಳನ್ನು ಜನರಿಗೆ ಹಂಚಿಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆ ನಡೆಸಲು ಎಲ್ಲಾ ತಯಾರಿ ನಡೆದಿದ್ದು, ಕರ್ನಾಟಕ ಹೈಕೋರ್ಟ್ ಅಂತಿಮ ಒಪ್ಪಿಗೆಗಾಗಿ ಬಿಡಿಎ ಕಾಯುತ್ತಿದೆ.
ಪೆರಿಫೆರಲ್ ರಿಂಗ್ ರೋಡ್ (ಪಿಆರ್ಆರ್) ಯೋಜನೆಗಾಗಿ ತುಮಕೂರು ರಸ್ತೆಯಿಂದ ಹೊಸೂರು ರಸ್ತೆ ತನಕ 1,810 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 2005ರಲ್ಲಿ ಪ್ರಾಥಮಿಕ ಮತ್ತು 2007ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಸಂತ್ರಸ್ತ ರೈತರಿಗೆ ಪರಿಹಾರ ಘೋಷಣೆ ಮಾಡದೇ ಯೋಜನೆಗೆ ಟೆಂಡರ್ ಕರೆಯಬಾರದು ಎಂದು ರೈತರು 2024ರ ಫೆಬ್ರವರಿಯಲ್ಲಿ ಬಿಡಿಎ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದರು.
2013ರಲ್ಲಿ ಕೇಂದ್ರ ಸರ್ಕಾರ ಪುನರ್ವಸತಿ ಮತ್ತು ಪರಿಹಾರ ಕಾಯ್ದೆಯನ್ನು ಜಾರಿ ಮಾಡಿತ್ತು. ಅದರ ಆಧಾರದ ಮೇಲೆಯೇ ಪರಿಹಾರ ನೀಡಬೇಕು ಇಲ್ಲವೇ ಯೋಜನೆ ರದ್ದುಗೊಳಿಸಬೇಕು ಎಂಬುದು ರೈತರ ಬೇಡಿಕೆಯಾಗಿದೆ. ಈ ಕುರಿತು ರೈತರ ಜೊತೆ ಬಿಡಿಎ ನಡೆಸಿದ ಮಾತುಕತೆ ಸಹ ವಿಫಲವಾಗಿದೆ.
2007ರಲ್ಲಿ ಮೊದಲು ಪ್ರಸ್ತಾಪಿಸಿದ್ದ ಪಿಆರ್ಆರ್ ಯೋಜನೆ ಜಾರಿಗೆ ಬಂದಿಲ್ಲ. ಬಿಜೆಪಿ ಸರ್ಕಾರವಿದ್ದಾಗ ಯೋಜನೆ ಜಾರಿಗೊಳಿಸಲು ಪ್ರಯತ್ನ ನಡೆಸಲಾಗಿತ್ತು. ಕಾಂಗ್ರೆಸ್ ಸರ್ಕಾರ ಈ ಯೋಜನೆ ಜಾರಿಗೊಳಿಸುವುದಾಗಿ ಹೇಳಿದ್ದು, ಈ ರಸ್ತೆ ಹಾದು ಹೋಗುವ ಪ್ರದೇಶದಲ್ಲಿ ಬಿಡಿಎ ಹೊಸ ಲೇಔಟ್ಗಳ ನಿರ್ಮಾಣ ಮಾಡಲಿದೆ.












Click it and Unblock the Notifications