ಬೆಂಗಳೂರು ನಗರದಲ್ಲಿ ಆಸ್ತಿ ಇದೆಯೇ?, ನಿಮಗೆ ಸಿಹಿಸುದ್ದಿ
ಬೆಂಗಳೂರು, ನವೆಂಬರ್ 30; ಬೆಂಗಳೂರು ನಗರದಲ್ಲಿ ಆಸ್ತಿ ಹೊಂದಿರುವ ಮಾಲೀಕರಿಗೆ ಕರ್ನಾಟಕ ಸರ್ಕಾರ ಸಿಹಿಸುದ್ದಿಯನ್ನು ನೀಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಸ್ತಿ ಮಾಲೀಕರ ಮನೆ ಬಾಗಿಲಿಗೆ ಮಹತ್ವದ ದಾಖಲೆಗಳನ್ನು ತಲುಪಿಸಲುವ ಯೋಜನೆ ರೂಪಿಸಿದೆ.
ಬಿಬಿಎಂಪಿ ಮತ್ತು ಬಿಡಿಎ ವ್ಯಾಪ್ತಿಯ ಆಸ್ತಿಗಳ ದಾಖಲೆ ಮತ್ತು ಪತ್ರಗಳನ್ನು ಡಿಜಿಟಲೀಕರಣ ಮಾಡಲಾಗುತ್ತದೆ. ಡಿಜಿಟಲ್ ಸ್ವತ್ತಿನ ಪತ್ರವನ್ನು ಆಸ್ತಿ ಹೊಂದಿರುವ ಮಾಲೀಕರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲು ಯೋಜನೆ ಸಿದ್ಧಪಡಿಸಲಾಗಿದೆ.

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಹೆಚ್ಚಿನ ತೆರಿಗೆ ಸಂಗ್ರಹದ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದಲ್ಲಿ ಇರುವವರು ಅವರ ಕ್ಷೇತ್ರಗಳನ್ನು ಆರ್ಥಿಕವಾಗಿ ಸದೃಢ ಮಾಡಬೇಕು" ಎಂದು ಸೂಚನೆ ನೀಡಿದರು. ಈ ಮೂಲಕ ಪರೋಕ್ಷವಾಗಿ ಆಸ್ತಿ ತೆರಿಗೆ ಹೆಚ್ಚಳ ವಾಗುವ ಸೂಚನೆ ನೀಡಿದರೇ? ಕಾದು ನೋಡಬೇಕಿದೆ.
ಮನೆ ಬಾಗಿಲಿಗೆ ಡಿಜಿಟಲ್ ಸ್ವತ್ತಿನ ಪತ್ರ; ಬೆಂಗಳೂರಿನಲ್ಲಿ ಮಾತನಾಡಿದ ಡಿ. ಕೆ. ಶಿವಕುಮಾರ್, "ಬಿಡಿಎ, ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಪತ್ರ ಪತ್ತು ದಾಖಲೆಗಳನ್ನು ಡಿಜಿಟಲೀಕರಣ ಕೆಲವೇ ದಿನಗಳಲ್ಲಿ ಸ್ವತ್ತಿನ ಪತ್ರಗಳನ್ನು ಉಚಿತವಾಗಿ ಮಾಲೀಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ" ಎಂದು ಹೇಳಿದರು.
"ಕಾಂಗ್ರೆಸ್ ಸರ್ಕಾರ 20 ವರ್ಷಗಳ ಹಿಂದೆ ಭೂಮಿ ತಂತ್ರಾಶದ ಮೂಲಕ ಪಹಣಿ ನೀಡುವ ಯೋಜನೆ ಜಾರಿಗೆ ತಂದಿತ್ತು. ಪ್ರಸ್ತುತ ಆಸ್ತಿ ಮೌಲ್ಯವನ್ನು ನಿಖರವಾಗಿ ಲೆಕ್ಕಾಚಾರ ಮಾಡಲು ಡ್ರೋನ್ ಸೇರಿದಂತೆ ಅನೇಕ ತಂತ್ರಜ್ಞಾನ ಬಳಸಿ ನಿಖರವಾಗಿ ಲೆಕ್ಕ ಹಾಕಲಾಗುವುದು" ಎಂದರು.
"ಒಂದಷ್ಟು ಜನರು ಒಂದು ಅಂತಸ್ತಿನ ಕಟ್ಟಡ ಕಟ್ಟಲು ಅನುಮತಿ ಪಡೆದುಕೊಂಡು ನಾಲ್ಕು ಅಂತಸ್ತಿನ ಕಟ್ಟಡ ಕಟ್ಟಿರುತ್ತಾರೆ. ಇಂತಹ ಕಟ್ಟಡಗಳನ್ನು ಗುರುತಿಸಬೇಕು. ರಾಜಕೀಯ ಒತ್ತಡಗಳಿಗೆ ಅಧಿಕಾರಿಗಳು ಒಳಗಾಗಬಾರದು. ಆಸ್ತಿ ಮೌಲ್ಯವನ್ನು ಸರಿಯಾಗಿ ಗುರುತಿಸಿ, ತೆರಿಗೆ ಸಂಗ್ರಹ ಮಾಡಬೇಕು" ಎಂದು ತಿಳಿಸಿದರು.
"ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಳ ಸೇರಿದಂತೆ ಸಂಸ್ಥೆಗಳ ಬಲವರ್ಧನೆಗಾಗಿ ನಾನು, ಬೈರತಿ ಸುರೇಶ್, ರಹೀಂ ಖಾನ್ ಸೇರಿ ಸಭೆ ನಡೆಸಿ ಸೂಕ್ತ ತೀರ್ಮಾನಕ್ಕೆ ಬರಲಿದ್ದೇವೆ. ಸ್ಥಳೀಯ ಸಂಸ್ಥೆಗಳು ಹೆಚ್ಚಿನ ತೆರಿಗೆ ಸಂಗ್ರಹದ ಮೂಲಕ ಅವರ ಕ್ಷೇತ್ರಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಕ್ರಮ ಕೈಗೊಳ್ಳಬೇಕು" ಎಂದರು.
ಸಿಬ್ಬಂದಿಗಳ ಅಸಮಾಧಾನ; ಸರ್ಕಾರ ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳ ಡಿಜಿಟಲೀಕರಣ, ಆಸ್ತಿ ತೆರಿಗೆ ವಿಮರ್ಶೆ ಪ್ರಕ್ರಿಯೆಗೆ ಸಿಬ್ಬಂದಿಗೆ ಗುರಿಯನ್ನು ನಿಗದಿಪಡಿಸಿದೆ. ಕಂದಾಯ ಸಿಬ್ಬಂದಿ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿನಿತ್ಯ 25 ಆಸ್ತಿಗಳಿಗೆ ಈ ಪ್ರಕ್ರಿಯೆ ಮುಗಿಸಬೇಕು ಎಂದು ಕಂದಾಯ ನಿರೀಕ್ಷಕ, ತೆರಿಗೆ ನಿರೀಕ್ಷಕರಿಗೆ ಗುರಿ ನೀಡಲಾಗಿದೆ. ಆದರೆ ಲೋಕಸಭೆ ಚುನಾವಣೆ ಮತದಾರರ ಪಟ್ಟಿ ಪರಿಷ್ಕರಣೆ, ಪದವೀಧರ, ಶಿಕ್ಷಕರ ಕ್ಷೇತ್ರಗಳ ಮತದಾರರ ಪಟ್ಟಿ ತಯಾರಿ ಕಾರ್ಯದ ನಡುವೆ ಆಸ್ತಿಗಳಿಗೆ ಗುರಿ ನೀಡುವುದು ಸರಿಯಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 'ಎ' ಹಾಗೂ 'ಬಿ' ಖಾತೆಗಳನ್ನು ಹೊಂದಿರುವ ಆಸ್ತಿಗಳ ವಿಮರ್ಶೆ, ನಕ್ಷೆ ಉಲ್ಲಂಘನೆ, ಸ್ವಯಂ ಘೋಷಿತ ತೆರಿಗೆಯಲ್ಲಿನ ವ್ಯತ್ಯಾಸಗಳನ್ನು ತಪಾಸಣೆ ಮಾಡಿ ಡಿಜಿಟಲೀಕರಣ ಮಾಡುವುದಕ್ಕೆ ಕಾಲಾವಶ ಬೇಕಿದೆ. ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಿರುವುದರಿಂದ ಆಸ್ತಿ ತೆರಿಗೆ ಪ್ರಕ್ರಿಯೆ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ ಎಂದು ಕಂದಾಯ ವಿಭಾಗದ ಸಿಬ್ಬಂದಿ ತಿಳಿಸಿದ್ದಾರೆ.
ಈ ಹಿಂದೆ ಚುನಾವಣಾ ಸಮಯ, ಮತದಾರರ ಪಟ್ಟಿ ಪರಿಷ್ಕರಣೆ ಮುಂತಾದ ಕಾರ್ಯಗಳ ಸಂದರ್ಭದಲ್ಲಿ ಆಸ್ತಿ ತೆರಿಗೆ ಪ್ರಕ್ರಿಯೆಗೆ ವಿರಾಮ ನೀಡಲಾಗುತ್ತಿತ್ತು. ಆದರೆ ಈ ಬಾರಿ ಪ್ರತಿನಿತ್ಯ ಇಷ್ಟು ಗುರಿ ಎಂದು ನಿಗದಿಗೊಳಿಸಿ ಸಿಬ್ಬಂದಿ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದು ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications