ಬೆಂಗಳೂರಲ್ಲಿ ಸಿಕ್ತು 3 ಕೆಜಿ ಚಿನ್ನದ ಬಿಸ್ಕತ್, 41 ಲಕ್ಷ ಹಣ
ಬೆಂಗಳೂರು, ಆ.21 : ಆಟೋದಲ್ಲಿ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದ್ದ ಮೂರು ಕೆಜಿ ಚಿನ್ನದ ಬಿಸ್ಕತ್ ಮತ್ತು 41 ಲಕ್ಷ ರೂಪಾಯಿಗಳನ್ನು ಬೆಂಗಳೂರು ಪೊಲೀಸರು ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ. ಗುರುವಾರ ಮುಂಜಾನೆ ಎರಡು ಗಂಟೆ ವೇಳೆಗೆ ವಾಹನ ತಪಾಸಣೆ ನಡೆಸುವಾಗ ಚಿನ್ನಸಾಗಣೆ ಮಾಡುತ್ತಿದ್ದವರು ಸಿಕ್ಕಿಬಿದ್ದಿದ್ದಾರೆ.
ಬಂಧಿತ ಆರೋಪಿಗಳನ್ನು ಕೊಯಮತ್ತೂರು ಮೂಲದ ನಟರಾಜು, ಬಾಲ ಮತ್ತು ರಾಮ್ ಕುಮಾರ್ ಎಂದು ಗುರುತಿಸಲಾಗಿದೆ. ಹೈಗ್ರೌಂಡ್ಸ್ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಸೂಟ್ಕೇಸ್ನಲ್ಲಿ ಚಿನ್ನದ ಬಿಸ್ಕೆಟ್ ಮತ್ತು ಬ್ಯಾಗ್ನಲ್ಲಿ ಹಣವನ್ನು ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಮುಂಜಾನೆ ಎರಡು ಗಂಟೆಯ ವೇಳೆಗೆ ಹೈಗ್ರೌಂಡ್ಸ್ ಠಾಣೆ ಪೊಲೀಸರು, ಜೆಡಿಎಸ್ ಕಚೇರಿ ರಸ್ತೆಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕರ್ನಾಟಕದ ನೋಂದಣಿ ಸಂಖ್ಯೆಯ ಆಟೋದಲ್ಲಿ ಮೂವರು ಆಗಮಿಸಿದರು. ಅವರ ಬಳಿ ಇದ್ದ ಬ್ಯಾಗ್ ಸೂಟ್ ಕೇಸ್ ಪರಿಶೀಲನೆ ನಡೆಸಿದಾಗ ಚಿನ್ನ ಮತ್ತು ನಗದು ಪತ್ತೆಯಾಗಿದೆ. [ಮುಂಬೈ: ಚಿನ್ನದ ಅಂಗಿ ತೊಟ್ಟ ಉದ್ಯಮಿ ಪಂಕಜ]
ಸೂಟ್ಕೇಸ್ನಲ್ಲಿ ಮೂರು ಕೆಜಿ ಚಿನ್ನದ ಬಿಸ್ಕತ್ಗಳು ಮತ್ತು ಬ್ಯಾಗ್ನಲ್ಲಿ 41 ಲಕ್ಷ ರೂ. ಹಣ ಪತ್ತೆಯಾಗಿದೆ. ಹಣ ಮತ್ತು ಚಿನ್ನವನ್ನು ಎಲ್ಲಿಂದ ತರಲಾಗುತ್ತಿತ್ತು ಎಂಬ ಬಗ್ಗೆ ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡಿದ ಕಾರಣ, ಮೂವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. [ಇಂದಿನ ಚಿನ್ನದ ದರ ನೋಡಿ]
ಈ ಕುರಿತು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿನ್ನ ಮತ್ತು ಹಣವನ್ನು ಯಾರಿಗೆ ಸೇರಿದ್ದು ಎಂಬ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.












Click it and Unblock the Notifications