ಬೆಳಗಾವಿ-ಗೋವಾ ಸಂಪರ್ಕ ರಸ್ತೆ ಕಾಮಗಾರಿ, ಅಪ್ಡೇಟ್ ಸತೀಶ ಜಾರಕಿಹೊಳಿ
ಬೆಳಗಾವಿ, ಮೇ 19: ಬೆಳಗಾವಿ-ಗೋವಾ ಸಂಪರ್ಕಿಸುವ ರಸ್ತೆ ಕಾಮಗಾರಿಯನ್ನು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪರಿಶೀಲನೆ ನಡೆಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾಹನದಲ್ಲಿ ಗೋವಾ ರಾಜ್ಯದ ಗಡಿಭಾಗದವರಗೆ ಸಂಚರಿಸಿ, ರಸ್ತೆ ಕಾಮಗಾರಿ ಪರಿಶೀಲಿಸಿದರು, ರಸ್ತೆ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಖಾನಾಪುರ-ಜಾಂಬೋಟಿ ಮಾರ್ಗದ ಅಂದಾಜು 50 ಕೋಟಿ ಅಧಿಕ ವೆಚ್ಚದ ಬೆಳಗಾವಿ-ಗೋವಾ ರಸ್ತೆ ದುರಸ್ತಿ ಕಾಮಗಾರಿಯನ್ನು ಸಚಿವ ಸತೀಶ್ ಜಾರಕಿಹೊಳಿ ಪರಿಶೀಲಿಸಿದರು. ಸಚಿವರು ಮಾತನಾಡಿ, "ಜಾಂಬೋಟಿ ಮಾರ್ಗದ ಬೆಳಗಾವಿ-ಗೋವಾ ರಸ್ತೆ ನಿರ್ಮಾಣಕ್ಕೆ ಕಳೆದ 10 ವರ್ಷಗಳಿಂದ ಬೇಡಿಕೆ ಇತ್ತು. ಅದರಂತೆ ಕೇಂದ್ರ ಸರ್ಕಾರದ ಮಂಜೂರಾತಿ ಪಡೆದುಕೊಂಡರು ನಿಗದಿಪಡಿಸಿದ ಕಾಲಾವಧಿಯಲ್ಲಿ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ" ಎಂದರು.

"ಸುಮಾರು 50 ಕಿ. ಮೀ. ಕ್ಕಿಂತ ಹೆಚ್ಚು ರಸ್ತೆ ದುರಸ್ತಿ ಮಾಡಲಾಗಿದೆ. ಪ್ರಯಾಣಿಕರಿಗೆ ಗೋವಾ ರಾಜ್ಯಕ್ಕೆ ಹೋಗಲು ಸುಲಭದ ರಸ್ತೆ ಇದಾಗಿದೆ. ರಾಜ್ಯ ಸರ್ಕಾರದ ಹಲವಾರು ಸಾಧನೆಗಳಲ್ಲಿ ಇದು ಕೂಡ ಒಂದಾಗಿದೆ" ಎಂದು ಸಚಿವರು ಹೇಳಿದರು.
"ಈ ಮೊದಲು ರಸ್ತೆ ಬಹಳಷ್ಟು ಹಾಳಾಗಿತ್ತು. ಜನರು ಮಳೆಗಾಲದಲ್ಲಿ ಭಯದ ವಾತಾವರಣದಲ್ಲಿ ಸಂಚರಿಸುತ್ತಿದ್ದರು. ಅಪಾಯದ ರಸ್ತೆ ಆಗಿರುವುದರಿಂದ ಅಪಘಾತ ಸಂಭವಿಸಿದರೆ ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸಲು ಸಾಧ್ಯವಾಗುತ್ತಿರಲಿಲ್ಲ. ಇವೆಲ್ಲವುಗಳನ್ನು ಗಮನಿಸಿ, ಸಾರ್ವಜನಿಕರಿಗೆ ಪ್ರಯಾಣಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಅತಿ ಕಡಿಮೆ ಅವಧಿಯಲ್ಲಿ ರಸ್ತೆ ದುರಸ್ತಿ ಮಾಡಲಾಗಿದೆ. ಅದೇ ರೀತಿಯಲ್ಲಿ ಪ್ರಯಾಣಿಕರು ಸಹ ವೇಗದ ಮಿತಿಯಲ್ಲಿ ಸಂಚರಿಸಬೇಕು" ಎಂದು ಸಚಿವರು ಹೇಳಿದರು.
"ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅತೀ ವೇಗವಾಗಿ ಸಂಚರಿಸುವ ಪ್ರಯಾಣಿಕರಿಗೆ ಪೊಲೀಸ್ ಇಲಾಖೆಯಿಂದ ದಂಡ ವಿಧಿಸಲು ಸೂಚಿಸಲಾಗುವುದು. ಮಳೆಗಾಲ ಆರಂಭವಾಗುವ ಮುನ್ನ ಜಿಲ್ಲೆಯಲ್ಲಿ ಹಲವಾರು ರಸ್ತೆ ದುರಸ್ಥಿ, ಗುಂಡಿ ಮುಚ್ಚುವ ಕಾರ್ಯ, ನೂತನ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಜಿಲ್ಲೆಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆಗಳ ದುರಸ್ತಿ, ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು" ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
2024ರ ಫೆಬ್ರವರಿಯಲ್ಲಿ ಬೆಳಗಾವಿ-ಗೋವಾ ರಸ್ತೆ ದುರಸ್ತಿಯನ್ನು ಕೈಗೊಳ್ಳಲಾಗಿತ್ತು. 11 ತಿಂಗಳಿನಲ್ಲಿ ಈ ಬೆಳಗಾವಿ-ಚೋರ್ಲಾ ಘಾಟ್-ಗೋವಾ ರಸ್ತೆ ದುರಸ್ತಿಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದರು. ವ್ಯಾಪಾರ, ಪ್ರವಾಸೋದ್ಯಮ ಮತ್ತು ಉದ್ಯಮವನ್ನು ಉತ್ತೇಜಿಸಲು ಈ ರಸ್ತೆ ಪ್ರಮುಖವಾಗಿದೆ ಎಂದು ಅಂದಾಜಿಸಲಾಗಿದೆ.
ಪ್ರತಿನಿತ್ಯ ನೂರಾರು ವಾಹನಗಳು ಸಂಚಾರವನ್ನು ನಡೆಸುವ ರಸ್ತೆ ಇದಾಗಿದೆ. ಈ ರಸ್ತೆ ಕಾಮಗಾರಿಯ ಕಾರಣ ಕರ್ನಾಟಕ-ಗೋವಾ ನಡುವೆ ಸಂಚಾರ ನಡೆಸುವ ಜನರು ಕಿರಿಕಿರಿ ಅನುಭವಿಸುತ್ತಿದ್ದರು. ಈಗ ಕಾಮಗಾರಿ ಪೂರ್ಣಗೊಂಡಿದ್ದು, ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.
ಖಾನಾಪುರ-ಜಾಂಬೋಟಿ ರಸ್ತೆ ಅರಣ್ಯ ಪ್ರದೇಶಗಳ ಮೂಲಕ ಹಾದು ಹೋಗಿದೆ. ಮಳೆಯ ಕಾರಣದಿಂದ ಕಾಮಗಾರಿ ತಡವಾಗಿತ್ತು. ಇದರಿಂದಾಗಿ ವಾಹನ ಸವಾರರಿಗೆ ತೊಂದರೆ ಆಗಿತ್ತು. ಈ ರಸ್ತೆ ಯೋಜನೆಯನ್ನು ಬೇಗ ಪೂರ್ಣಗೊಳಿಸುವ ಕುರಿತು ಕೇಂದ್ರ ರಸ್ತೆ ಸಾರಿಗೆ ಖಾತೆ ಸಚಿವರ ಜೊತೆಗೂ ಸಮಾಲೋಚನೆ ನಡೆಸಲಾಗಿತ್ತು.












Click it and Unblock the Notifications