ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ; ಮತ್ತೆ ಎದ್ದ ಕೂಗು
ಬೆಳಗಾವಿ, ಡಿಸೆಂಬರ್ 21: "ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣವಾದಾಗ ಜನರು ಹೆಚ್ಚಿನ ಆಶಾಭಾವನೆ ಹೊಂದಿದ್ದರು. ಆಡಳಿತಾತ್ಮಕ ಶಕ್ತಿ ಕೇಂದ್ರವಾಗಿ ಉತ್ತರ ಕರ್ನಾಟಕ ಅಭಿವೃದ್ಧಿ ಆಗುತ್ತದೆ ಎಂಬ ನಿರೀಕ್ಷೆ ಇತ್ತು. ನೂರಾರು ಕೋಟಿ ಖರ್ಚು ಮಾಡಿ ಕಟ್ಟಿದ ಸುವರ್ಣಸೌಧ ಶಕ್ತಿ ಕೇಂದ್ರವಾಗಿ ಹೊರ ಹೊಮ್ಮಲಿಲ್ಲ ಏಕೆ?" ಎಂದು ಅಶೋಕ್ ಪೂಜಾರಿ ಪ್ರಶ್ನೆ ಮಾಡಿದರು.
ಉತ್ತರ ಕರ್ನಾಟಕ ವಿಕಾಸ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಅಶೋಕ್ ಪೂಜಾರಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂಬ ಬೇಡಿಕೆಯನ್ನು ಪುನಃ ಮುಂದಿಟ್ಟಿದ್ದಾರೆ. "ಉತ್ತರ ಕರ್ನಾಟಕ ನೈಜ ಅಭಿವೃದ್ಧಿ ಆಗದಿದ್ದರೆ ಪ್ರತ್ಯೇಕ ರಾಜ್ಯ ಹೋರಾಟ ಮಾಡುವುದಾಗಿ" ಎಚ್ಚರಿಕೆ ನೀಡಿದ್ದಾರೆ.

"ಮುಂದಿನ 15 ದಿನಗಳಲ್ಲಿ ಉತ್ತರ ಕರ್ನಾಟಕ ಸಂಘಟನೆಗಳ ಸಭೆ ಕರೆಯುತ್ತೇವೆ. ಸಭೆಯಲ್ಲಿ ಮುಂದಿನ ಹೋರಾಟ ರೂಪರೇಷೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಸುವರ್ಣ ಸೌಧವನ್ನು ಆಡಳಿತಾತ್ಮಕ ಶಕ್ತಿ ಕೇಂದ್ರವಾಗಿ ಪರಿವರ್ತನೆ ಮಾಡಲು ಏಕೆ ಈ ಉದಾಸೀನತೆ?" ಎಂದು ಪ್ರಶ್ನಿಸಿದರು.
"ನಮ್ಮ ಭಾಗದ ಜನಪ್ರತಿನಿಧಿಗಳಿಂದ ನಮಗೆ ಸೂಕ್ತ ಬೆಂಬಲ ಸಿಗಲಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ಉತ್ತರ ಕರ್ನಾಟಕ ಹಿಂದುಳಿದಿದೆ. ಬೆಂಗಳೂರಿನ ವಿಧಾನಸೌಧ ರೀತಿ ಸುವರ್ಣಸೌಧ ಆಡಳಿತಾತ್ಮಕ ಶಕ್ತಿ ಕೇಂದ್ರವಾಗಬೇಕು" ಎಂದು ಅಶೋಕ್ ಪೂಜಾರಿ ಹೇಳಿದರು.
"ರಾಜ್ಯ ಮಟ್ಟದ ಇಲಾಖೆಗಳು ಸುವರ್ಣಸೌಧದಲ್ಲಿ ಕಾರ್ಯನಿರ್ವಹಿಸಬೇಕು. ಬೇಡಿಕೆ ಈಡೇರದಿದ್ದರೆ ಉತ್ತರ ಕರ್ನಾಟಕ ಸಂಘಟನೆಗಳೆಲ್ಲವೂ ಒಗ್ಗೂಡಿ ಹೋರಾಟ ಮಾಡುತ್ತೇವೆ. ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಿ ಇಲ್ಲ, ಪ್ರತ್ಯೇಕ ರಾಜ್ಯ ಕೊಡಿ" ಎಂದು ಅಶೋಕ್ ಪೂಜಾರಿ ಬೇಡಿಕೆ ಇಟ್ಟರು.
"ಸರ್ಕಾರ ಉತ್ತರ ಕರ್ನಾಟಕದ ವಿಚಾರದಲ್ಲಿ ಉದಾಸೀನತೆ ಮಾಡಿದರೆ ಅನಿವಾರ್ಯವಾಗಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡಬೇಕಾಗುತ್ತದೆ" ಎಂದು ಅಶೋಕ್ ಪೂಜಾರಿ ತಿಳಿಸಿದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂಬುದು ಹಲವು ವರ್ಷಗಳ ಕೂಗು. ಕರ್ನಾಟಕ ಸರ್ಕಾರ ಅಖಂಡ ಕರ್ನಾಟಕ ನಮ್ಮ ಆದ್ಯತೆ ಎಂದು ಹೇಳುತ್ತಲೇ ಬಂದಿದೆ.












Click it and Unblock the Notifications