ಕಾಂಗ್ರೆಸ್ ತೊರೆದ ಪ್ರಭಾಕರ ಕೋರೆ ಪುತ್ರ ಅಮಿತ್
ಅಮಿತ್ ಕೋರೆ ಅವರು ತಮ್ಮ ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಫ್ಯಾಕ್ಸ್ ಮೂಲಕ ಕಳುಹಿಸಿದ್ದಾರೆ. ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರೂ ಆಗಿರುವ ಅಮಿತ್ ಕೋರೆ ಕಳೆದ ವರ್ಷ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. [ಕಾಂಗ್ರೆಸ್ ಸೇರಿದ ಕೋರೆ ಪುತ್ರ]
ರಾಜಕೀಯವಾಗಿ ಪ್ರಭಾಕರ ಕೋರೆ ಮತ್ತು ಚಿಕ್ಕೋಡಿ ಸಂಸದ ಪ್ರಕಾಶ್ ಹುಕ್ಕೇರಿ ಕುಟುಂಬದ ನಡುವೆ ವೈರತ್ವವಿದೆ. ಸದ್ಯ ನಡೆಯುತ್ತಿರುವ ಚಿಕ್ಕೋಡಿ-ಸದಲಗಾ ಉಪ ಚುನಾವಣೆಯಲ್ಲಿ ಪ್ರಕಾಶ್ ಹುಕ್ಕೇರಿ ಪುತ್ರ ಗಣೇಶ ಹುಕ್ಕೇರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಆದ್ದರಿಂದ ಅಮಿತ್ ಕೋರೆ ಅವರು ಪಕ್ಷದ ಪ್ರಾಥಮಿಕ ಸದಸ್ವತ್ವಕ್ಕೆ ರಾಜೀನಾಮೆ ನೀಡಿರಬಹುದು ಎಂದು ಅಂದಾಜಿಸಲಾಗಿದೆ.
ಕೆಲವು ದಿನಗಳಿಂದ ಅಮಿತ್ ಕೋರೆ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡದೆ ದೂರ ಉಳಿದಿದ್ದರು. ಸದ್ಯ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಪರ ಪ್ರಚಾರ ನಡೆಸುವುದಿಲ್ಲ. ಕಾಂಗ್ರೆಸ್ ಬಿಡಬೇಕು ಎಂದು ಮೊದಲೇ ನಿರ್ಧಾರ ಮಾಡಿದ್ದೆ. ಅದರಂತೆ ಈಗ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಅಮಿತ್ ಕೋರೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
2013ರ ಅಕ್ಟೋಬರ್ನಲ್ಲಿ ಕಾಂಗ್ರೆಸ್ ಸೇರಿದ ಅಮಿತ್ ಕೋರೆ ಅವರು, ರಾಜಕೀಯದಲ್ಲಿ ನನ್ನ ತಂದೆಯ ತತ್ತ್ವ ಸಿದ್ಧಾಂತಗಳೇ ಬೇರೆ. ನನ್ನ ಸಿದ್ಧಾಂತಗಳೇ ಬೇರೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಆ ಪಕ್ಷವನ್ನು ಸೇರಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದರು.