'ಬೆಳಗಾವಿ' ಟಿಕೆಟ್ ಮಂಗಳಾ ಅಂಗಡಿಗೆ ಮಿಸ್, ಜಗದೀಶ್ ಶೆಟ್ಟರ್ಗೆ ಫಿಕ್ಸ್: ಆಕಾಂಕ್ಷಿ ಹೇಳಿದ್ದೇನು?
ಬೆಂಗಳೂರು, ಮಾರ್ಚ್ 15: ಲೋಕಸಭಾ ಚುನಾವಣೆಗೆ ಎರಡು ಕ್ಷೇತ್ರಗಳ ಟಿಕೆಟ್ ಮಿಸ್ ಮಾಡಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಲೋಕಸಭಾ ಟಿಕೆಟ್ (Belagavi Lok Sabha) ಸಿಗುವುದು ಬಹುತೇಕ ಖಚಿತವಾಗಿದೆ. ಇದರಿಂದ ಹಾಲಿ ಸಂಸದೆ ಮಂಗಳಾ ಸುರೇಶ್ ಅಂಗಡಿಯವರಿಗೆ (Mangala Suresh Angadi) ಬಿಜೆಪಿ ಶಾಕ್ ನೀಡಿದೆ.
ಬಿಜೆಪಿಯ ಎರಡನೇ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದ್ದನ್ನು ಕಂಡು ಜಗದೀಶ್ ಶೆಟ್ಟರ್ ಅವರು ಅಸಮಾಧಾನಗೊಂಡಿದ್ದರು. ಗುರುವಾರ ರಾಯಚೂರಿಗೆ ತೆರಳುವ ಪ್ರವಾಸ ರದ್ದುಗೊಳಿಸಿ ಆಪ್ತರೊಂದಿಗೆ ಹುಬ್ಬಳ್ಳಿಯಲ್ಲಿ ಸಮಾಲೋಚನೆ ನಡೆಸಿದ್ದರು. ಬಳಿಕ ಬೆಂಗಳೂರಿಗೆ ಆಗಮಿಸಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು.

ಇತ್ತ ಎರಡನೇ ಪಟ್ಟಿಯಲ್ಲಿ ಬೆಳಗಾವಿಯಿಂದ ತಮ್ಮ ಹೆಸರು ಬರಲಿಲ್ಲ ಎಂದು ಕೇಂದ್ರ ಬಿಜೆಪಿ ಹೈಕಮಾಂಡ್ ಭೇಟಿ ಮಾಡಲು ಕ್ಷೇತ್ರ ಆಕಾಂಕ್ಷಿ ಮಂಗಳಾ ಅಂಗಡಿಯವರು ದೆಹಲಿಗೆ ದೌಡಾಯಿಸಿದ್ದರು.
ಶೆಟ್ಟರ್ ಸಂತೈಸಿದ ಅಮಿತ್ ಶಾ
ಬೆಂಗಳೂರಲ್ಲಿ ಶೆಟ್ಟರ್-ಯಡಿಯೂರಪ್ಪ ಭೇಟಿ ವೇಳೆ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಇದ್ದರು. ಮಾತುಕತೆ ವೇಳೆ ಅಮಿತ್ ಶಾಗೆ ಕರೆ ಮಾಡಿ ನಾಯಕರು ಕೆಲ ಕಾಲ ಮಾತನಾಡಿದರು. ದೂರವಾಣಿ ಮೂಲಕ ಅಸಮಾಧಾನಿತ ಜಗದೀಶ ಶೆಟ್ಟರ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು.
ಹಾವೇರಿ ಮತ್ತು ಧಾರವಾಡ ಟಿಕೆಟ್ ಆಕಾಂಕ್ಷಿಯಾಗಿದ್ದ ಜಗದೀಶ್ ಶೆಟ್ಟರ್ ಬೆಳಗಾವಿ ಕ್ಷೇತ್ರದಿಂದ ಕಣಕ್ಕಿಳಿಯಲು ಒಪ್ಪಿದ್ದಾರೆ ಎನ್ನಲಾಗಿದೆ. ಇದೀಗ ಬಿಜೆಪಿ ನಾಯಕರು ಶೆಟ್ಟರ್ ಅವರಿಗೆ ಬೆಳಗಾವಿ ಟಿಕೆಟ್ ನೀಡಲು ಮನಸ್ಸು ಮಾಡಿದ್ದಾರೆ. ಇದರಿಂದ ಹಾಲಿ ಸಂಸದೇ ಮಂಗಳಾ ಅಂಗಡಿಗೆ ಟಿಕೆಟ್ ಕೈ ತಪ್ಪಲಿದೆ.

ಆಕಾಂಕ್ಷಿ ಮಂಗಳಾ ಅಂಗಡಿ ಹೇಳಿದ್ದೇನು?
ಹೈಕಮಾಂಡ್ ಸೂಚನೆ ಮೇರೆಗೆ ಬೆಳಗಾವಿಯಿಂದ ಕಣಕ್ಕಿಳಿಯಲು ಜಗದೀಶ್ ಶೆಟ್ಟರ್ ತಯಾರಿ ಆರಂಭಿಸಿದ್ದಾರೆ. ಶೆಟ್ಟರ್ ಅವರಿಗೆ ಟಿಕೆಟ್ ಫಿಕ್ಸ್ ಆಗಿದ್ದರ ಬಗ್ಗೆ ಸ್ವತಃ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಂಗಳಾ ಅಂಗಡಿ ಮಾಹಿತಿ ನೀಡಿದ್ದಾರೆ.
ದೆಹಲಿಯಿಂದ ವಾಪಾಸು ಬೆಳಗಾವಿ ಬಂದ ಬಳಿಕ ಸುದ್ದಿಗಾರರಿಗೆ ಈ ಕುರಿತು ಪ್ರತಿಕ್ರಿಯಿಸಿದ ಮಂಗಳಾ ಅಂಗಡಿಯವರು, ಎರಡನೇ ಲಿಸ್ಟ್ನಲ್ಲಿ ನಮ್ಮ ಕುಟುಂಬದ ಹೆಸರು ಬರಲಿಲ್ಲ. ಈ ಸಂಬಂಧ ನಾವು ಹೈಕಮಾಂಡ್ ಭೇಟಿಗೆ ತೆರಳಿದ್ದೆವು. ಅಷ್ಟರಲ್ಲಾಗಲೇ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಿರುವುದು ಖಚಿತವಾಗಿದೆ ಎಂದರು.
ಬೆಳಗಾವಿಯಲ್ಲಿ ಬಿಜೆಪಿ ಗೆಲ್ಲಿಸಲು ಶ್ರಮ
ಹಾವೇರಿ ಮತ್ತು ಧಾರವಾಡ ಟಿಕೆಟ್ ಕೇಳಿದ್ದ ಜಗದೀಶ್ ಶೆಟ್ಟರ್ ಮೊದಲು ಬೆಳಗಾವಿಯಿಂದ ಬೇಡ ಎಂದು ಹೇಳಿದ್ದರು. ಆದರೆ ವರಿಷ್ಠರು ನೀವೇ ಈ ಕ್ಷೇತ್ರವನ್ನು ಅವರಿಗೆ ಸೂಚಿಸಿದ್ದಾರೆ. ಶೆಟ್ಟರ್ ಅವರ ಜೊತೆ ನಿಂತ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲು ಶ್ರಮಿಸುವುದಾಗಿ ಅವರು ಹೇಳಿದ್ದಾರೆ.
ವಿಧಾನಸಭಾ ಕ್ಷೇತ್ರದ ಟಿಕೆಟ್ ಸಿಗದಂತೆ ಮಾಡಿದ್ದ ಶಕ್ತಿಗಳೇ ಈ ಭಾರಿಯೂ ಜಗದೀಶ್ ಶೆಟ್ಟರ್ ಅವರಿಗೆ ಲೋಕಸಭಾ ಟಿಕೆಟ್ ಸಿಗದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದವು. ಆದರೆ ಇದೆಲ್ಲ ಮೀರಿ ಬೆಳಗಾವಿ ಲೋಕಸಭಾ ಆಖಾಡಕ್ಕೆ ಧುಮುಕಲು ಶೆಟ್ಟರ್ ವೇದಿಕೆ ಸಿದ್ಧಮಾಡಿಕೊಳ್ಳುವಲ್ಲಿ ಸಫಲರಾಗುವ ಮೂಲಕ ಹುನ್ನಾರದ ಶಕ್ತಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.
ಬಿಜೆಪಿ-ಕಾಂಗ್ರೆಸ್ ಮಧ್ಯೆ ಹಣಾಹಣಿ
ಬೆಳಗಾವಿ ಕ್ಷೇತ್ರದಿಂದ ಈ ಬಾರಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಗೆ ಟಿಕೆಟ್ ಸಿಗುವುದ ಬಹುತೇಕ ಅಂತಿಮವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಘೋಷಣೆಯ ಮುದ್ರೆ ಒತ್ತುವುದು ಬಾಕಿ ಇದೆ. ಸದ್ಯದ ಬೆಳವಣಿಗೆ ನೋಡಿದರೆ ಈ ಬಾರಿ ಬೆಳಗಾವಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಉಂಟಾಗುವುದು ಖಚಿತವಾಗಿದೆ.












Click it and Unblock the Notifications