ಮಳೆಯೋ ಮಳೆ- ಜನ ತತ್ತರ; ಅಧಿಕಾರಿಗಳು ನಿರುತ್ತರ
ಬೆಂಗಳೂರು, ಜೂನ್ 1: ನಿನ್ನೆ ರಾತ್ರಿ ಸಾಕಷ್ಟು ಕಷ್ಟ, ಕಸಿವಿಸಿ ಅನುಭವಿಸಿದ್ದ ಬೆಂಗಳೂರು ಜನ ಬೆಳಗಾನೆದ್ದು ಅಬ್ಬಾ ಎಂಥಾ ಮಾಯದಂಥ ಮಳೆ ಬಂತಪ್ಪಾ ಎಂದು ಆಹ್ಲಾದರಾಗಿದ್ದಾರೆ. ಆದರೆ ತೀವ್ರ ಸಂಕಷ್ಟಕ್ಕೊಳಗಾದ ಜನ ಮಳೆಗೆ ಹಿಡಿಶಾಪ ಹಾಕುತ್ತಾ ಮಳೆರಾಯ ಮಾಡಿಟ್ಟುಹೋದ ಫಜೀತಿಯನ್ನು ಸರಿಪಡಿಸಿಕೊಳ್ಳುತ್ತಿದ್ದಾರೆ. (ಗಮನಿಸಿ: ಸುದ್ದಿ ಆಗಾಗ update ಆಗುತ್ತಿರುತ್ತದೆ)
ಈ ಬಾರಿ ಬೇಗನೇ ವಕ್ಕರಿಸಿದ್ದ ಬೇಸಿಗೆ ಕಡುಕಷ್ಟ ಕೊಟ್ಟು ಬಂದಷ್ಟೇ ವೇಗದಲ್ಲಿ ಮಾಯವಾಯಿತಲ್ಲಾ. ಸದ್ಯ ಆ ಬಿಸಿಲ ರಗಳೆ ತಪ್ಪಿತಲ್ಲ ಎಂದು ಮಂದಿ cool coll ಆಗಿದ್ದಾರೆ. ಮನೆಯಲ್ಲಿ ನಲ್ಲಿ ತಿರುಗಿಸಿದರೆ ಮಂಜಿನಂತ ನೀರು ಬರುತ್ತಿದೆ.
ಮೊನ್ನೆ ಸ್ವಲ್ಪ ಜೋರಾಗಿಯೇ ಮಳೆ ಬಂದಾಗ ಬೆಸ್ಕಾಂ ಸಾರಥಿ ಮಣಿವಣ್ಣನ್ ಅವರು ಇದೇನಾ cloud burst ಅಂದರೆ ಅಂತ ತಮ್ಮ ಫೇಸ್ ಬುಕ್ ನಲ್ಲಿ ಉದ್ಘಾರ ತೆಗೆದಿದ್ದರು. ಇನ್ನು ನಿನ್ನೆ ರಾತ್ರಿಯ ಮಳೆ ಕಂಡು ಏನನ್ನುತ್ತಾರೋ ನೋಡಬೇಕು. ಏಕೆಂದರೆ ಸಂಜೆ 6-7 ಗಂಟೆಗೆ ಶುರುವಾದ ಮಳೆ ರಾತ್ರಿ ಒಂದಾದರೂ ಇನ್ನೂ ಸುರಿಯುತ್ತಲೇ ಇತ್ತು.

ಬೆಂಗಳೂರು ಮಳೆ ಇಷ್ಟಕ್ಕೇ ನಿಂತಿಲ್ಲ. ಇಂದು ಬೆಳಗ್ಗೆಯೂ ಹನಿ ಪ್ರೋಕ್ಷಣೆಯಾಗುತ್ತಿದೆ. ಅಷ್ಟೇ ಅಲ್ಲ. ಇನ್ನೂ ಒಂದೆರಡು ದಿನ ಇದೇ ಥರ ಮಳೆಯಾಗುತ್ತದೆ ಎನ್ನುತ್ತಾರೆ ಹವಾಮಾನ ತಜ್ಞರು. ಆ ಮೇಲೆ ಇದ್ದೇ ಇದೆ, ಈ ಬಾರಿ ಭರ್ಜರಿ ಮುಂಗಾರು ಎಂದೂ ತಜ್ಞರು ಘೋಷಿಸಿದ್ದಾರೆ.
ಮಳೆಯಿಂದ ಜನಜೀವನ ತತ್ತರಗೊಂಡಿದ್ದಾರೆ. ಮೊದಲೇ ಡೆಂಗ್ಯೂ ಮಹಾಮಾರಿ ರಾಜ್ಯದಲ್ಲಿದೆ. ಈಗ ಮಳೆಯಿಂದಾಗಿ ರೋಗರುಜಿನಗಳು ಮತ್ತಷ್ಟು ಕಾಡಲಾರಂಭಿಸುತ್ತದೆ. ಈಗಲೇ ಎಚ್ಚೆತ್ತುಕೊಂಡು ಮುಂಜಾಗ್ರತೆ ವಹಿಸಿ.
ಮಳೆಯಿಂದ ತೊಂದರೆ ಅನುಭವಿಸಿದವರಿಗೆ ಸಾಂತ್ವನ ಹೇಳುತ್ತಾ... ಮನೆ ಬಿಟ್ಟು ಹೊರಬನ್ನಿ. ಶಾಲಾ ಮಕ್ಕಳು ಆಗಲೇ ಶಾಲಾಗೂಡು ಸೇರಿಕೊಂಡಿವೆ. ದೊಡ್ಡವರು ನಾಲ್ಕು ಹೆಜ್ಜೆ ಹಾಕಿ. ಮೈಮನ ಪುಳಕಿತವಾಗುತ್ತದೆ. ರಾಜಧಾನಿ ಬೆಂಗಳೂರು ಹೆಸರಿಗೆ ತಕ್ಕಂತೆ ಒಳ್ಳೆ ಫ್ರಿಜ್ ಥರ ಆಗಿದೆ. ಸಾಧ್ಯವಾದರೆ ಸಂತ್ರಸ್ತ ಜನರತ್ತ ನೆರವಿನ ಹಸ್ತ ಚಾಚಿ.
ಧರ್ಮರಾಯನ ಮುನಿಸೋ!?:
ನಗರದ ಸುತ್ತಮುತ್ತ ಯಾವುದೇ ನದಿ ಇಲ್ಲದಿದ್ದರೂ ತಕ್ಷಣ ನೀವು ಸೀದಾ ಮೆಜಿಸ್ಟಿಕ್ ಗೆ ಹೋದರೆ ಅಲ್ಲಿ ಪುಟ್ಟ ನದಿಯನ್ನು ಕಾಣಬಹುದು. ಧರ್ಮಾಂಬುಧಿ ಕೆರೆಯಂಗಳವಾದ ಮೆಜಿಸ್ಟಿಕ್ ಬಸ್ ಸ್ಟಾಂಡ್ ಜಲಾವೃತವಾಗಿದೆ. ಮಳೆಕೊಯ್ಲು ಎಂದೆಲ್ಲಾ ಬೊಗಳೆ ಬಿಡುವ ಸರಕಾರಿ ಮಂದಿಯನ್ನು ಈಗ ಮೆಜಿಸ್ಟಿಕ್ ನಲ್ಲಿ ತಂದು ಬಿಡಬೇಕು. ಯಾವುದೇ ಹೊಸ ನಿರ್ಮಾಣಗಳಾದರೂ ಮಳೆ ಕೊಯ್ಲು ಕಡ್ಡಾಯ ಎನ್ನುವ ಈ ಅಧಿಕಾರಿಗಳು ಮೆಜಿಸ್ಟಿಕ್ ಅನ್ನು ರಾಡಿ ಮಾಡಿಟ್ಟಿದ್ದಾರೆ.
ಮಳೆಕೊಯ್ಲು ಮಾತೇ ಇಲ್ಲ ಇಲ್ಲಿ. ಮೆಟ್ರೋ ರೈಲು/ಮೆಜಿಸ್ಟಿಕ್ ಬಸ್ ಕಾಮಗಾರಿ ನಡೆಸುತ್ತಿರುವ ಮಂದಿ ಮಳೆ ಬಂದರೆ ಗತಿಯೇನು ಎಂಬುದರ ಬಗ್ಗೆ ಆಲೋಚನೆಯನ್ನೇ ಮಾಡಿಲ್ಲ. ಮಳೆಕೊಯ್ಲು ಇಂಜಿನಿಯರ್ ಏನಾದರೂ ಇಲ್ಲಿ ನಿಂತಿರುವ ಮಳೆ ನೀರನ್ನು ನೋಡಿದರೆ ವಿಶ್ವೇಶ್ವರಯ್ಯನವರಂತೆ ಖಂಡಿತಾ what a waste? ಎಂದು ಉದ್ಘರಿಸುತ್ತಾರೆ. ಆ ಪಾಟಿ ನೀರು ಪೋಲಾಗುತ್ತಿದೆ.
ಕಳೆದೆರಡು ವರ್ಷಗಳಿಂದ ಬರ ಅನುಭವಿಸಿರುವ ಅಧಿಕಾರಿಗಳು ಅಮೂಲ್ಯ ಮಳೆ ನೀರನ್ನು ಇನ್ನಾದರೂ ಸರಿಯಾಗಿ ಕೊಯ್ಲು ಮಾಡಿ, ಉಳಿಸಿಕೊಳ್ಳಲಿ. ಆ ಧರ್ಮರಾಯನೇ ಇವರಿಗೆ ಸದ್ಭುದ್ದಿ ನೀಡಲಿ ಎಂದು ಆಶಿಸೋಣ. ಮಳೆ ಬಂದಾಗ ಬಸ್ ನಿಲ್ದಾಣಗಳು ಹೀಗೆ ಕೆರೆಗಳಂತಾಗುವುದು ಸಹಜ. ಏಕೆಂದರೆ ಬಹುತೇಕ ಕಡೆಗಳಲ್ಲಿ ಬಸ್ ನಿಲ್ದಾಣಗಳು ನಿರ್ಮಾಣವಾಗಿರುವುದು ಕೆರೆಯಂಗಳದಲ್ಲೇ.
ಇದರ ಹೊರತಾಗಿ ಹೇಳುವುದಾದರೆ ಸಂಚಾರ ಅಸ್ತವ್ಯಸ್ಥ. ವೀಕೆಂಡ್ ನೆಪದಲ್ಲಿ ಪರ ಊರುಗಳಿಗೆ ತೆರಳಬೇಕಾದವರು ಪರದಾಡುತ್ತಿದ್ದಾರೆ. ಕಲ್ಲೆಸೆದತ ಅಂತದಲ್ಲಿರುವ ಬಿನ್ನಿ ಮಿಲ್ ಬಳಿ ಬಿಎಂಟಿಸಿ ಬಸ್ಸುಗಳು ನೀರಿನಲ್ಲಿ ಮುಳುಗಿವೆ. ಆ ಪ್ರದೇಶ ಈ ಪ್ರದೇಶ ಅಂತಿಲ್ಲ. ಇಡೀ ರಾಜಧಾನಿಯಲ್ಲಿ ನಿನ್ನೆ ರಾತ್ರಿ ಮಳೆಯಾಗದ ಪ್ರದೇಶವೇ ಇಲ್ಲ. ಮಳೆಯಿಂದ ಸಂಕಷ್ಟಕ್ಕೆ ಒಳಗಾಗದ ಜನರಿಲ್ಲ.
ಬೆಂಗಳೂರಿನಲ್ಲಷ್ಟೇ ಅಲ್ಲ ರಾಜ್ಯದ ಹಲವೆಡೆಯೂ ಮಳೆ:
ಒಂದು ವಾರದಿಂದ ರಾಜ್ಯದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದ್ದು ಶುಕ್ರವಾರ ಭರ್ಜರಿ ಮಳೆಯಾಗಿದೆ. ಎಂದಿನಂತೆ ಜನಜೀವನ ಅಸ್ತವ್ಯಸ್ತಗೊಂಡಿದ್ದರೂ ರೈತಾಪಿ ಜನ ಖುಷಿಯಾಗಿದ್ದಾರೆ. ಉಳುಮೆ ಮಾಡಲು ಹೊಲಗಳತ್ತ ದಾಪುಗಾಲು ಹಾಕುತ್ತಿದ್ದು ಮುಂಗಾರು ಪೂರ್ವ ಸಿದ್ಧತೆ ನಡೆಸುತ್ತಿದ್ದಾರೆ. ರೈತಾಪಿ ಜನ ಸಂತಸ ಕಾಣಲಿ.












Click it and Unblock the Notifications