ಡಿ.26ಕ್ಕೆ ಯಡಿಯೂರಪ್ಪರಿಂದ ವಿಧಾನಸೌಧ ಚಲೋ

ಕೆಎಸ್ ಈಶ್ವರಪ್ಪ ದೊಡ್ಡ ವ್ಯಕ್ತಿ. ನಾನು ದೊಡ್ಡ ವ್ಯಕ್ತಿಗಳ ಬಗ್ಗೆ ಮಾತನಾಡುವುದನ್ನು ಬಿಟ್ಟಿದ್ದೇನೆ. ಬಜೆಟ್ ಮಂಡನೆ ಜಗದೀಶ್ ಶೆಟ್ಟರ್ ಅವರಿಗೆ ಬಿಟ್ಟಿದ್ದು, ಕೆಜೆಪಿಯಿಂದ ಬಿಜೆಪಿ ಸರ್ಕಾರಕ್ಕೆ ಹಾನಿ ಇಲ್ಲ ಎಂದು ಯಡಿಯೂರಪ್ಪ ಹೇಳಿದರು.
ವಿಧಾನಸೌಧ ಚಲೋ: ಕಳೆದ ಹಲವಾರು ತಿಂಗಳಿನಿಂದ ಭಾಗ್ಯಲಕ್ಷ್ಮಿ ಬಾಂದ್, ವಿಧವಾ, ನಿವೃತ್ತಿ ವೇತನ, ಹಾಲಿಗೆ 2 ರು ಪ್ರೋತ್ಸಾಹ ಧನ ಎಲ್ಲವನ್ನೂ ಕೊಟ್ಟಿಲ್ಲ. ಜನರು ತೊಂದರೆಯಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿದ್ದಾರೆ. ಸರ್ಕಾರ ಸ್ಪಂದಿಸುತ್ತಿಲ್ಲ.
ಬಾಕಿ ಉಳಿಸಿಕೊಂಡಿರುವ ಬಾಂಡ್ ಹಾಗೂ ಪ್ರೋತ್ಸಾಹ ಧನವನ್ನು ಇದೇ ಡಿ.26 ರೊಳಗೆ ಬಿಡುಗಡೆ ಮಾಡದಿದ್ದಲ್ಲಿ ಫಲಾನುಭವಿಗಳೊಂದಿಗೆ ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಬಿಎಸ್ ಯಡಿಯೂರಪ್ಪ ಎಚ್ಚರಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ 3,21,154 ಬಾಂಡ್ ಬಿಡುಗಡೆ ಮಾಡಿದ್ದೆ. ಸದಾನಂದ ಗೌಡರು 9,784 ಬಾಂಡ್ ವಿತರಿಸಿದ್ದಾರೆ. ಈಗ ಕೇವಲ 1,009 ಬಾಂಡ್ ಗಳನ್ನು ಮಾತ್ರ ವಿತರಿಸಲಾಗಿದೆ ಎಂದು ಅಂಕಿ ಅಂಶ ಸಮೇತ ಸರ್ಕಾರದ ಆಡಳಿತ ವೈಫಲ್ಯವನ್ನು ವಿವರಿಸಿದರು.
ಮೋದಿ ಗೆಲುವಿನಿಂದ ಪಾಠ ಕಲಿಯಬೇಕು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಸೇರಿದಂತೆ ಬಿಜೆಪಿ ನಾಯಕರು ಗುಜರಾತ್ ಗೆ ಕಾಲಿಟ್ಟಿದ್ದರೆ ಮೋದಿಗೆ ಗೆಲುವು ಸಾಧ್ಯವಾಗುತ್ತಿರಲಿಲ್ಲ.
ಮೋದಿ ಫೋಟೋ ಇದ್ದರೂ ಸಾಕು ಗೆಲುವು ನಿಶ್ಚಿಯವಾಗಿತ್ತು. ಬಿಜೆಪಿ ನಾಯಕರು ಕಡಿದು ಕಟ್ಟೆ ಹಾಕಿದ್ದು ಏನು ಇಲ್ಲ. ಈಗ ಗೆದ್ದ ಮೇಲೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ ಅಷ್ಟೇ ಎಂದು ಯಡಿಯೂರಪ್ಪ ಹೇಳಿದರು. ಡಿ.28 ರಿಂದ ಬೀದರ್ ನ ಬಸವ ಕಲ್ಯಾಣದಿಂದ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಹೇಳಿದರು.
ಮುಂಬರುವ ಚುನಾವಣೆಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಕೆಜೆಪಿ ಸ್ಪರ್ಧೆಗೆ ನಿಲ್ಲಲಿದೆ. ಯಾವ ಪಕ್ಷದ ಜೊತೆಗೂ ನಾವು ಹೊಂದಾಣಿಕೆ ಮಾಡಲು ಯತ್ನಿಸಿಲ್ಲ. ಸ್ವತಂತ್ರವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.
ಕೆಜೆಪಿ ಪದಾಧಿಕಾರಿಗಳು: ಉಪಾಧ್ಯಕ್ಷರಾಗಿ ಬಿಸಿ ಬಣಕಾರ್, ಕೆ ಶ್ರೀನಿವಾಸ್, ಜಬ್ಬರ್ ಖಾನ್ ಹೊನ್ನಾಳಿ, ಗುರುಪಾದಪ್ಪ ನಾಗಮಾರಪಲ್ಲಿ, ವಿಜಯ್ ಸಂಕೇಶ್ವರ್, ಸುಭಾಷ್ ಕಲ್ಲೂರು, ಪ್ರಸನ್ನ ಕುಮಾರ್, ಎಂ ನಾಗರಾಜ್, ಅಶೋಕ್ ಠಾಕ್ರೆ,
ಪ್ರಧಾನ ಕಾರ್ಯದರ್ಶಿಯಾಗಿ ರಾಜೇಂದ್ರ ಕೋಗಲೆ, ಶಂಕರ್ ಪಾಟೀಲ್, ಕಾರ್ಯದರ್ಶಿಯಾಗಿ ಜಗದೀಶ್ ಡಿಕೆ ಸಯ್ಯದ್, ಮಾಧ್ಯಮ ಪ್ರಚಾರಕರಾಗಿ ಬಿ.ಆರ್ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ ಎಂದು ಕೆಜೆಪಿ ಪ್ರಕಟಿಸಿದೆ.












Click it and Unblock the Notifications