ಮೈಸೂರು: ಲಂಚಕ್ಕೆ ರೋಸಿದ ಹಿರಿಯಜೀವ ನೇಣಿಗೆ ಶರಣು

ಆದರೆ ಈ ಲಂಚಲೋಕದಲ್ಲಿ ಇಂತಹ ಸಾವಿಗೆ ಬೆಲೆಯೆಲ್ಲಿದೆ, ಇದಕ್ಕೆ ಮರುಕಪಡುವಷ್ಟು ವ್ಯವಧಾನ ಯಾರಿಗಿದೆ? ಮೇಷ್ಟ್ರೇ We are sorry.
ಭ್ರಷ್ಟಾಚಾರದ ವಿರುದ್ಧ ನೀತಿಪಾಠ ಹೇಳಿಕೊಟ್ಟು ಸಾಕಾಗಿ ಇನ್ನು ಈ ಜಗತ್ತು ಬದಲಾಗದು ಎಂದು ಪರಿಭಾವಿಸಿ ನಿರಾಶೆಯ ಮಡುವಿನಲ್ಲಿ ನೇಣಿಗೆ ಶರಣಾದರಾ, ಮೇಷ್ಟ್ರು? ಇಲ್ಲ ಇಲ್ಲ. ಈ ಭ್ರಷ್ಟ ವ್ಯವಸ್ಥೆಯೇ ಪ್ರಾಮಾಣಿಕ ಹಿರಿಯನನ್ನು ಉಳಿಸಿಕೊಳ್ಳಲು ಸೋತಿದೆ.
ಮೈಸೂರು ವಿಶ್ವವಿದ್ಯಾಲಯದ ಸಂಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಯುಬಿ ಅಶೋಕ್ ಕುಮಾರ್ (56) ಅವರೇ ಈ ಭ್ರಷ್ಟಾಚಾರದಿಂದ ರೋಸಿಹೋಗಿ ಆತ್ಮಹತ್ಯೆ ಮಾಡಿಕೊಂಡವರು. ಮೃತರಿಗೆ ಪತ್ನಿ ಚೆಲುವಾಂಬಿಕ, ಪುತ್ರಿಯರಾದ ಅರ್ಚನಾ ಮತ್ತು ಅನುಶ್ರೀ ಇದ್ದಾರೆ.
ಸರಸ್ವತಿಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಒಬ್ಬರೆ ಇದ್ದಾಗ ಪತ್ನಿಯ ಸೀರೆಯಿಂದ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ. ಸಾವಿಗೂ ಮುನ್ನ ರಾಷ್ಟ್ರಪತಿ ಹಾಗೂ SSPSE ಟ್ರಸ್ಟ್ನ ಅಧ್ಯಕ್ಷರಿಗೆ ಅಂತಿಮ ಪತ್ರ ಬರೆದಿಟ್ಟಿದ್ದು, ವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂಲತಃ ದಾವಣಗೆರೆ ಜಿಲ್ಲೆಯ ಚನ್ನಗಿರಿಯವರಾದ ಅಶೋಕ್, ವೃತ್ತಿಯಿಂದ ಪ್ರಾಧ್ಯಾಪಕರು. ಪ್ರವೃತ್ತಿಯಿಂದ ಸಕ್ರಿಯ ಸಾಮಾಜಿಕ ಕಾರ್ಯಕರ್ತರಾಗಿದ್ದರು.
ಪತ್ರಸಾರ, ಜೀವಸಾರ: ದೇಶದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಭ್ರಷ್ಟಾಚಾರ, ಜಾತೀಯತೆ, ಅತ್ಯಾಚಾರ, ನೀತಿಹೀನ ರಾಜಕೀಯ ವ್ಯವಸ್ಥೆಗಳು ಭರವಸೆಯನ್ನು ನುಂಗಿ ನೀರು ಕುಡಿದಿವೆ. ಬದುಕನ್ನು ಅಸಹನೀಯಗೊಳಿಸಿವೆ. ಕುಲಪತಿಯಂತಹ ಹುದ್ದೆಗಳಿಗೆ ವಿಶ್ವವಿದ್ಯಾನಿಲಯಗಳಲ್ಲಿ ಕೋಟ್ಯಂತರ ರೂ. ವಹಿವಾಟು ನಡೆಯುತ್ತಿದೆ. ಇಂತಹ ವ್ಯವಸ್ಥೆ ನಡುವೆ ವಿದ್ಯಾರ್ಥಿಗಳಿಗೆ ಯಾವ ಸಮಾಜಶಾಸ್ತ್ರ ಬೋಧಿಸಲಿ? ಇದು ಪ್ರೊ. ಅಶೋಕ್ ಕುಮಾರ್ ಅವರು ತಮ್ಮ ಅಂತಿಮ ಪತ್ರದಲ್ಲಿ ರಾಷ್ಟ್ರಪತಿಗಳ ಮುಂದಿಟ್ಟಿರುವ ಪ್ರಶ್ನೆ.
ಅಶೋಕ್, ವಿದ್ಯಾರ್ಥಿಗಳಿಗೆ ಸದಾ ವಿವೇಕಾನಂದರ ಜೀವನ ಪಾಠವನ್ನು ಬೋಧಿಸುತ್ತಿದ್ದರು. ವಿವೇಕ ಅಡ್ವೆಂಚರಸ್, ರಾಮಕೃಷ್ಣ ಆಶ್ರಮ, ಭಾರತ ವಿಕಾಸ ಪರಿಷತ್, ಗಿರಿಜನ ಕಲ್ಯಾಣಕ್ಕೆ ಸಂಬಂಧಿಸಿದ ಟ್ರಸ್ಟ್ ಜತೆ ಒಡನಾಟ ಹೊಂದಿದ್ದರು. ದೀನ-ದಲಿತರ ಸೇವೆ, ರಾಮಕೃಷ್ಣ ಪರಮಹಂಸರ ಅಧ್ಯಾತ್ಮ ಅವರ ಕಾಳಜಿಯಾಗಿತ್ತು.












Click it and Unblock the Notifications