ಐತಿಹಾಸಿಕ ಹಾಸನಾಂಬೆ ದರ್ಶನ ದಿನಾಂಕ ಪ್ರಕಟ

ದೇವಾಲಯದ ಬಾಗಿಲನ್ನು ತೆರೆದು ಭಕ್ತರಿಗೆ ದೇವಿಯ ದರ್ಶನಕ್ಕೆ 15 ದಿನಗಳ ಕಾಲ ಅವಕಾಶ ಕಲ್ಪಿಸಲಾಗಿದ್ದು, ನ.15 ರಂದು ಬಾಗಿಲು ಮುಚ್ಚಲಾಗುವುದು. ನ.1 ರಂದು ಮಧ್ಯಾಹ್ನ 12.30 ಕ್ಕೆ ಧಾರ್ಮಿಕ ವಿಧಿವಿಧಾನದಂತೆ ದೇವಾಲಯ ಬಾಗಿಲು ತೆಗೆದು ಅಂದು ರಾತ್ರಿ 9ರವರೆಗೆ ಭಕ್ತಾಧಿಗಳಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ದೇಗುಲ ಸಮಿತಿಯ ಪ್ರಸನ್ನ ಕೃಷ್ಣಮೂರ್ತಿ ಅವರು ಹೇಳಿದ್ದಾರೆ.
ನ.2 ರಿಂದ ಬೆಳಗ್ಗೆ 6 ಗಂಟೆಯಿಂದ ಸಂಜೆ 4.30ರ ವರೆಗೆ ಹಾಗೂ ರಾತ್ರಿ 10.30 ರಿಂದ ರಾತ್ರಿ 12ರವರೆಗೆ ದೇವಿಯ ದರ್ಶನಕ್ಕೆ ನ.14ರವರೆಗೆ ಅವಕಾಶ ಕಲ್ಪಿಸಲಾಗಿದೆ. ನ.15 ರಂದು ಮಧ್ಯಾಹ್ನ 12.30 ಕ್ಕೆ ಬಾಗಿಲನ್ನು ಮುಚ್ಚಲಾಗುವುದು. ಈ ವಿಶೇಷ ಸಂದರ್ಭದಲ್ಲಿ ದೇವಸ್ಥಾನ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗುವುದು. ಈ ಬಾರಿ ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಪ್ರವೇಶಕ್ಕೆ ಆದ್ಯತೆ ನೀಡಲಾಗುವುದು.
ಹಾಸನಾಂಬೆ ವಿಶೇಷ: ಆಶ್ಲೇಷ ಪೌರ್ಣಿಮೆಯ ಪ್ರಥಮ ಗುರುವಾರ ದಂದು ಸಂಪ್ರದಾಯದಂತೆ ದೇವಾಲಯದ ಬಾಗಿಲು ತೆರೆಯಲಿದೆ. ಕೃಷ್ಣಪ್ಪ ನಾಯಕ ಎಂಬ ಪಾಳೇಗಾರ 12ನೇ ಶತಮಾನದಲ್ಲಿ ನಿರ್ಮಿಸಿದ ದೇವಸ್ಥಾನದ ವಿಶೇಷತೆ ಎಂದರೆ, ವರ್ಷ ಕಳೆದರೂ ಹಚ್ಚಿಟ್ಟ ದೀಪ ನಂದದೆ ಪ್ರಜ್ವಲ್ವಿಸುತ್ತಾ ಇರುತ್ತದೆ. ಪವಿತ್ರ ದೀಪದ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ.
ಸಿಟಿ ರವಿಗೆ ಸಚಿವ ಸ್ಥಾನ: ತಾಯಿ ಹಾಸನಾಂಬೆಯ ಕೃಪೆಯಿಂದ ಹಾಗೂ ನನ್ನ ನಿಷ್ಠೆಯನ್ನು ವರಿಷ್ಠರು ಗಮನಿಸಿ ಸಚಿವ ಸ್ಥಾನ ನೀಡುತ್ತಾರೆ ಎಂಬ ವಿಶ್ವಾಸವನ್ನು ಬಿಜೆಪಿ ಶಾಸಕ ಸಿ.ಟಿ ರವಿ ವ್ಯಕ್ತಪಡಿಸಿದರು. ರಾಜ್ಯ ಸಚಿವ ಸಂಪುಟಕ್ಕೆ ನಾನು ಸೇರ್ಪಡೆಯಾಗಲು ಯಾರೂ ಅಡ್ಡಗಾಲು ಹಾಕುತ್ತಿಲ್ಲ ಎಂದು 2010ರಲ್ಲಿ ಹೇಳಿದ್ದರು. ಅದರಂತೆ ಸಿಟಿ ರವಿ ಸಚಿವರಾಗಿದ್ದಾರೆ.
ದರ್ಶನಕ್ಕೆ ಬರುವ ಭಕ್ತಾದಿಗಳಿಂದ ಕಾಣಿಕೆ ರೂಪದಲ್ಲಿ ಯಾವುದೇ ರೀತಿಯ ನಿಧಿ ಸಂಗ್ರಹಿಸುತ್ತಿರಲಿಲ್ಲ. ಕಳೆದ ವರ್ಷದಿಂದ ಅರ್ಚನೆ ಮತ್ತು ಇನ್ನಿತರ ಪೂಜೆಗಳಿಗೆ ಇಂತಿಷ್ಟು ಎಂದು ನಿಗದಿಪಡಿಸಿ ಹಣ ಪಡೆಯುತ್ತಿರುವುದು ಅರ್ಚಕ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ, ಈ ಬಾರಿ ಅ.25 ರೊಳಗೆ ದಾನಿಗಳು ತಮ್ಮ ಹೆಸರನ್ನು ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡು ಹಾಸನಾಂಬೆ ದೇಗುಲಕ್ಕೆ ದಾನ ನೀಡಬಹುದಾಗಿದೆ.











Click it and Unblock the Notifications