ಅಸ್ಸಾಂ ನಿವಾಸಿಗಳ ರಕ್ಷಣೆಗೆ ನಿಂತ ಆರ್ಎಸ್ಎಸ್

ಸಾವಿರಾರು ಸಂಖ್ಯೆಯಲ್ಲಿ ಇಲ್ಲಿ ವಾಸವಿದ್ದ ಅಸ್ಸಾಂ ನಿವಾಸಿಗಳು ಬೆದರಿಕೆಯ ಕರೆಗಳಿಗೆ, ಸಂದೇಶಗಳಿಗೆ ಹೆದರಿ ನಗರ ತೊರೆಯುತ್ತಿರುವುದು ತಿಳಿಯುತ್ತಿದ್ದಂತೆ 250ಕ್ಕೂ ಹೆಚ್ಚು ಸಮವಸ್ತ್ರಧಾರಿ ಆರ್ಎಸ್ಎಸ್ ಮತ್ತು ವಿಎಚ್ಪಿ ಕಾರ್ಯಕರ್ತರು ನಗರ ರೈಲ್ವೆ ನಿಲ್ದಾಣಕ್ಕೆ ನುಗ್ಗಿ ಈಶಾನ್ಯ ಭಾರತದ ನಾಗರಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.
ಯಾವುದೇ ಬೆದರಿಕೆಯ ಕರೆಗಳಿಗೆ ಹೆದರಬೇಡಿ, ನಿಮ್ಮೊಂದಿಗೆ ನಾವಿದ್ದೇವೆ, ನಿಮ್ಮ ರಕ್ಷಣೆ ನಮ್ಮ ಹೊಣೆ ಎಂದು ಹೇಳಿದ ಕಾರ್ಯಕರ್ತರು ಹೆದರಿದ ಹುಲ್ಲೆಯಂತಾಗಿದ್ದ ಸಾವಿರಾರು ಜನರಿಗೆ ಅಭಯ ನೀಡಿದರು. ಆರ್ಎಸ್ಎಸ್ ಕರ್ನಾಟಕ ಪ್ರಾಂತ ಶಾರೀರಿಕ್ ಪ್ರಮುಖ ಚಂದ್ರಶೇಖರ ಜಾಗಿರದಾರ್ ಮತ್ತು ವಿಎಚ್ಪಿ ಜಂಟಿ ಪ್ರಧಾನ ಕಾರ್ಯದರ್ಶಿ ಕರುಣಾಕರ ರೈ ಅವರು ಅಸ್ಸಾಂ ಜನತೆಯನ್ನು ಭೇಟಿ ಮಾಡಿದರು.
ಅಸ್ಸಾಂನಲ್ಲಿ ಕಳೆದ ಅನೇಕ ದಿನಗಳಿಂದ ಕೋಮುದಳ್ಳುರಿ ಹೊತ್ತಿ ಉರಿಯುತ್ತಿದೆ. ಅಲ್ಲಿ ಅಲ್ಪಸಂಖ್ಯಾತರ ಮೇಲೆ ಆಗುತ್ತಿರುವ ದಬ್ಬಾಳಿಕೆ, ಹಿಂಸೆಗೆ ಪ್ರತಿಯಾಗಿ ಕರ್ನಾಟಕದಲ್ಲಿರುವ ಅಸ್ಸಾಂ ಜನರ ಮೇಲೆಯೂ ದಾಳಿ ಮಾಡಲಾಗುವುದು, ಮುಸ್ಲಿಂರ ಹಬ್ಬ ರಂಜಾನ್ (ಆಗಸ್ಟ್ 20) ನಂತರ ಇಲ್ಲಿನ ಅಸ್ಸಾಂನ ಜನತೆಯನ್ನು ಕೊಂದುಹಾಕಲಾಗುವುದು ಎಂಬ ಸಂದೇಶ ಎಸ್ಎಮ್ಎಸ್ ಮೂಲಕ ರವಾನೆಯಾಗುತ್ತಿದೆ.
ಅಸ್ಸಾಂನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಪ್ರತಿಭಟಿಸಿ ಮುಂಬೈನಲ್ಲಿ ಆಗಸ್ಟ್ 11ರಂದು ಭಾರೀ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಭೆ ಹಿಂಸೆಗೆ ತಿರುಗಿ ಭಾರೀ ಆಸ್ತಿಪಾಸ್ತಿಗೆ ಹಾನಿಯಾಗಿತ್ತು. ದಂಗೆಕೋರರನ್ನು ಚೆದುರಿಸಲು ಪೊಲೀಸರು ನಡೆಸಿದ ಗೋಲಿಬಾರ್ನಲ್ಲಿ ಇಬ್ಬರು ಹತ್ಯೆಗೀಡಾಗಿದ್ದರು.












Click it and Unblock the Notifications