ಕಡಪ ಸಂಸದ ಜಗನ್ ನನ್ನು ಬೆಂಬಿಡದ ಸಂಖ್ಯೆ 9
ಚಂಚಲಗುಡ ಜೈಲುವಾಸಿಯಾಗಿರುವ ವೈಎಸ್ ಜಗನ್ ಮೋಹನ್ ರೆಡ್ಡಿಯನ್ನು ಐದು ದಿನಗಳ ಕಾಲ ವಿಚಾರಣೆ ನಡೆಸಿದ ಸಿಬಿಐ ತಂಡಕ್ಕೆ ಸಿಕ್ಕ ಉತ್ತರಗಳು ತೃಪ್ತಿ ತಂದ ಹಾಗೆ ಕಾಣಿಸುತ್ತಿಲ್ಲ.
ಜಗನ್ ಒಡೆತನಕ್ಕೆ ಜಗತಿ ಪಬ್ಲಿಕೇಷನ್, ಇಂದಿರಾ ಟೆಲಿವಿಷನ್ ಹಾಗೂ ಜನನಿ ಇನ್ಫ್ರಾಸ್ಟಕ್ಚರ್ ಪ್ರೈ ಲಿಗೆ ಬಂಡವಾಳ ಹೂಡಿಕೆ ಹಣ ಎಲ್ಲಿಂದ ಬಂತು? ಸಂಸ್ಥೆಗಳನ್ನು ನಿರ್ವಹಿಸಲು ಎಷ್ಟು ಹಣ ವ್ಯಯಿಸುತ್ತಿದ್ದೀರಾ? ಮುಂತಾದ ಪ್ರಶ್ನೆಗಳನ್ನು ಸಿಬಿಐ ತಂಡ ಕೇಳಿದೆ.
ಈ ನಡುವೆ ಉಪಚುನಾವಣೆ ಪ್ರಚಾರದಲ್ಲಿ ತೊಡಗಿರುವ ವೈಎಸ್ ಆರ್ ಪಕ್ಷದ ನಾಯಕಿ, ಜಗನ್ ಅವರ ಅಮ್ಮ ವೈಎಸ್ ವಿಜಯಮ್ಮ ಅವರು ಮುಖ್ಯ ಚುನಾವಣಾಧಿಕಾರಿ ವೈಎಸ್ ಖುರೇಶಿಗೆ ಪತ್ರ ಬರೆದು ಪ್ರಜಾಪ್ರಭುತ್ವ, ಸಾರ್ವಜನಿಕ ಹಿತಾಸಕ್ತಿ ಎಂಬ ಆಧಾರದ ಮೇಲೆ ಜಗನ್ ಜೈಲಿನಿಂದ ಹೊರಕ್ಕೆ ಬರುವಂತೆ ಮಾಡಿ ಎಂದು ಮನವಿ ಸಲ್ಲಿಸಿದ್ದರು.
ಈಗ ಖುರೇಶಿ ಅವರ ಸ್ಥಾನಕ್ಕೆ ಸುಂದರಂ ಸಂಪಂತ್ ಅವರು ಬಂದು ಕೂತಿದ್ದಾರೆ. ಜೂ.10ರಿಂದ ಸಂಪಂತ್ ಅಧಿಕಾರವಧಿ ಆರಂಭವಾಗಲಿದ್ದು, ಜೂ.12ರಿಂದ ಆಂಧ್ರದಲ್ಲಿ ಉಪ ಚುನಾವಣೆ ಆರಂಭವಾಗಲಿದೆ.
ಜಗನ್ ಕಾಡುತ್ತಿರುವ ಒಂಭತ್ತು: ವೈಎಸ್ ಜಗನ್ ಮೋಹನ್ ರೆಡ್ಡಿ ಜೀವನದಲ್ಲಿ 9 ಸಂಖ್ಯೆ ಅನೇಕ ರೀತಿಯಲ್ಲಿ ಕಾಡುತ್ತಿದೆ. ವೈಎಸ್ ರಾಜಶೇಖರ ರೆಡ್ಡಿ ಅವರು 2009 ರಲ್ಲಿ ಸೆಪ್ಟೆಂಬರ್(9ನೇ ತಿಂಗಳು) ತಿಂಗಳಿನಲ್ಲಿ ದುರಂತ ಸಾವನ್ನಪ್ಪಿದರು. ಸಾಕ್ಷಿ ಪತ್ರಿಕೆ ಆಸ್ತಿ ಮುಟ್ಟುಗೋಲು ಆದೇಶ ಹೊರಬಿದ್ದಿದ್ದು ಮೇ 18ರಂದು(1+8=9)
ಜಗನ್ ಮೋಹನ್ ಬಂಧನವಾಗಿದ್ದು ಮೇ 27ರಂದು(2+7=9). ಚಂಚಲಗೂಡ ಜೈಲು ಸೇರಿದ ಜಗನ್ ರೆಡ್ಡಿ ಅವರಿಗೆ ಸಿಕ್ಕಿದ ಖೈದಿ ಸಂಖ್ಯೆ ಕೂಡಾ 9ರ ಲಿಂಕ್ ಹೊಂದಿದೆ. 6093(6+0+9+3=18)..ಕಾಂಗ್ರೆಸ್ ಸರ್ಕಾರಕ್ಕೆ ಭೀತಿ ನೀಡುತ್ತಿರುವ ವೈಎಸ್ ಆರ್ ಪಕ್ಷದ ಜಗನ್ ಮೋಹನ್ ರೆಡ್ಡಿಗೆ ಆಧಾರವಾಗಿರುವುದು ಕೂಡಾ 18 ಸ್ಥಾನ(ಸಂಸದ ಸ್ಥಾನಗಳು). ಸಾಕ್ಷಿ ಸಂಸ್ಥೆ ಕಟ್ಟಡ 8ನೇ ಅಂತಸ್ತಿನ ಮೇಲೆ ಏರುವುದಿಲ್ಲ ಎಂಬುದು ಗಮನಾರ್ಹ.