ಕಾಗೇರಿಯವರೆ, ಈ ಸರಕಾರಿ ಶಾಲೆಗೊಮ್ಮೆ ಭೇಟಿ ನೀಡಿ
ಯಾದಗಿರಿ, ಜೂ. 7 : ನಮ್ಮ ಕ್ಯಾಮರಾ ಕಣ್ಣಿಗೆ ದುರಂತ ಸರಕಾರಿ ಶಾಲೆಯೊಂದು ಸಿಕ್ಕಿದೆ ಕಣ್ರೀ. ನೋಡಲು ಥೇಟ್ ಚಹಾ ಹೋಟೆಲ್ ತರಹವಿದ್ದು, ಒಂದೇ ಕೋಣೆಯಲ್ಲಿ 5 ತರಗತಿ, ಸುಮಾರು 50 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು! ಇದು ಯಾವುದೇ ಕುಗ್ರಾಮದಲ್ಲಿ ನಡೆಯುವ ಶಾಲೆಯಲ್ಲ. ಯಾದಗಿರಿ ಜಿಲ್ಲಾ ಕೇಂದ್ರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದರ ದುರಂತ ಕಥೆ!

ಕಳೆದ 3 ವರ್ಷಗಳಿಂದ ರಾಜೀವ್ ಗಾಂಧಿ ನಗರದ ಹನುಮಾನ್ ದೇವಸ್ಥಾನದ ಜಾಗದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಡೆಯುತ್ತಾ ಬಂದಿದೆ. ಇಬ್ಬರೇ ಶಿಕ್ಷಕಿಯರು 1ರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಬೋಧಿಸುತ್ತಿದ್ದಾರೆ. ಶಾಲೆಯ ಕಟ್ಟಡದಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಜಾಗದ ಅಭಾವ ಇರುವ ಕಾರಣ ಆ ಮಕ್ಕಳೆಲ್ಲಾ ಶಾಲೆಯ ಮುಂದೆ ಇರುವ ಬೇವಿನ ಮರದ ಕೇಳಗೆ ಕುಳಿತು ಪಾಠ ಕಲಿಯುತ್ತಿದ್ದಾರೆ.
"ಮಳೆಗಾಲ ಬಂದರ ಸಾಲಿ ಒಳಗ ನೀರೇ ನೀರು, ನಮಗ ಕುಂದ್ರಾಕ ಜಾಗನೇ ಇರೋದಿಲ್ಲ. ಬ್ಯಾಸಿಗಿ ಗಾಲದಾಗ ನಾವು ಎಲ್ಲಿ ಕುಂದ್ರಬೇಕು ಎಂಬುದು ತಿಳೀದಂಗ ಆತೈತಿ ಸರ್" ಅಂತ ಶಾಲೆಯ ಕೆಲ ವಿದ್ಯಾರ್ಥಿಗಳು ನಾವು ವರದಿಗೆ ತೆರಳಿದಾಗ ತಮ್ಮ ಮನದಾಳದ ಮಾತುಗಳನ್ನು ಮುಂದೆ ತೋಡಿದರು.
ರಾಜೀವ್ ಗಾಂಧಿ ನಗರದ ಸರಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ 4.20 ಲಕ್ಷ ರು. ಅನುದಾನ ಸಿಕ್ಕಿದೆ. ಇನ್ನೇನು ಬೇಸ್ಮೆಂಟ್ ಹಾಕಿ ಕಟ್ಟಡ ನಿರ್ಮಾಣ ಮಾಡುವ ಮೊದಲೇ ಆ ಏರಿಯಾದ ಕೆಲ ಜನ ನಮಗೆ ತೊಂದರೆಯಾಗುತ್ತೆ ಅಂತ ಇಲ್ಲದು-ಸಲ್ಲದು ನೆಪಕಟ್ಟಿ ಕೋರ್ಟ್ಗೆ ಕೇಸ್ ಹಾಕಿದರಂತೆ. ಈಗ ಬಡಮಕ್ಕಳ ಪರ ನ್ಯಾಯದೇವತೆ ನ್ಯಾಯ ಒಲಿದಿದ್ದಾಳೆ.
ಆ ಪ್ರಕರಣಕ್ಕೆ ಕೋರ್ಟ್ನಿಂದ ತಡೆಯಾಜ್ಞೆ ಆಗಿ 1 ವರ್ಷ ಕಳೆದರು ಕಟ್ಟಡ ಮಾತ್ರ ಇನ್ನೂ ನಿರ್ಮಾಣ ಆಗಿಲ್ಲ. ಬೇಸ್ಮೆಂಟ್ ಹಾಕುವುದಕ್ಕೆ 1.40 ಲಕ್ಷ ರು. ಖರ್ಚು ಆಗಿದೆ. ಇನ್ನೂ ಉಳಿದದ್ದು 2.80 ಲಕ್ಷ ರು. ಮಾತ್ರ. ಇನ್ನೂ ಯಾಕೆ ಕಟ್ಟಡ ನಿರ್ಮಾಣಕ್ಕೆ ವಿಳಂಬ ಅಂತ ಕೆಲವರನ್ನು ಪ್ರಶ್ನಿಸಿದಾಗ, ಪುರಸಭೆಯಲ್ಲಿ ವಾರ್ಡನ್ ಮಿಟಿಂಗ್ ಮಾಡಿ ಈ ಶಾಲೆಯ ಬಗ್ಗೆ ಪುರಸಭೆಯಲ್ಲಿ ಚರ್ಚಿಸಿ ನಂತರ ಕೆಲಸ ಪ್ರಾರಂಭವಾಗುತ್ತದೆ ಅಂತ ಕೆಲ ಮೂಲಗಳಿಂದ ತಿಳಿದುಬಂದಿದೆ.
ಶಿಕ್ಷಣಕ್ಕೆ ತಾತ್ಸಾರ : ಈ ತರಹದ ದುರದೃಷ್ಟಕರ ವ್ಯವಸ್ಥೆ ಇರುವಾಗ ಈ ಭಾಗ ಪ್ರಥಮ ಬರುವುದು ಯಾವಾಗ? ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆ ಕಾವು ಯಾದಗಿರಿ ಉಷ್ಣತಾಪಮಾನವನ್ನೇ ಮೀರಿಸಿದೆ. ರಾಜಕಾರಣಿಗಳ ದಂಡು ಕಡು ಬಿಸಿಲು ಲೆಕ್ಕಿಸದೆ ಎಸಿ ಕಾರಿನಿಂದ ನಾಯಕರು ಬಿಜೆಪಿ ಅಭ್ಯರ್ಥಿಗಳ ಪರ ಭರದಿಂದ ಮತಯಾಚನೆ ನಡೆಸಿದ್ದಾರೆ.
ಪ್ರತಿ ಬಾರಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಕೊನೆ ಸ್ಥಾನ ಭದ್ರಗೊಳಿಸುಕೊಳ್ಳುತ್ತಿರುವ ಯಾದಗಿರಿ, ಗುಲ್ಬರ್ಗ, ಬೀದರ್ ಜಿಲ್ಲೆಗಳ ಶಿಕ್ಷಣದ ಅಭಿವೃದ್ಧಿ ಬಗ್ಗೆ ಒಮ್ಮೆಯಾದರೂ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಕಾಗೇರಿ ಸಾಹೇಬ್ರು ತಲೆಕೆಡಿಸಿಕೊಂಡಿದ್ದಾರಾ? ಆಯಾ ಜಿಲ್ಲೆಗಳಿಗೆ ಭೇಟಿ ನೀಡಿ ಸಂಬಂಧಿತ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರಾ? ಸಮಸ್ಯೆಗೆ ಮೂಲ ಕಾರಣ ಹುಡುಕಿ ಪರ್ಯಾಯ ಕಲ್ಪಿಸಲು ಮುಂದಾಗಿದ್ದಾರಾ?












Click it and Unblock the Notifications