ಯಡಿಯೂರಪ್ಪ ಆದರ್ಶ ನಾಯಕರಲ್ಲ : ಈಶ್ವರಪ್ಪ

ನಾನೇನಾದರೂ ಅವರ ಸ್ಥಾನದಲ್ಲಿದ್ದರೆ (ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದರೆ) ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಎಂದು ಯಡಿಯೂರಪ್ಪನವರನ್ನು ಬೆಂಗಳೂರಿನಲ್ಲಿ ಕೆಣಕಿದ್ದ ಈಶ್ವರಪ್ಪ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ರಾಜಕಾರಣಿಗಳೆಲ್ಲ ಆದರ್ಶ ರಾಜಕಾರಣಿಗಳಲ್ಲ ಎಂದು ಮಂಗಳೂರಿನಲ್ಲಿ ಹೇಳಿ ಯಡಿಯೂರಪ್ಪನವರ ಗಾಯದ ಮೇಲೆ ಉಪ್ಪು ಸುರಿದಿದ್ದಾರೆ.
ಮಂಗಳೂರಿನಲ್ಲಿ ಮೇ 21ರಂದು ನೆಹರೂ ಮೈದಾನದಲ್ಲಿ, ವಿವಿಧ ರಾಷ್ಟ್ರೀಯ ಸಮಸ್ಯೆಗಳ ಕುರಿತು ಆಯೋಜಿಸಲಾಗಿದ್ದ 'ಯುವ ಜಾಗೃತಿ ಸಮಾವೇಶ'ದಲ್ಲಿ ಯುವಜನತೆಯನ್ನು ಉದ್ದೇಶಿಸಿ ಈಶ್ವರಪ್ಪ ಮಾತನಾಡುತ್ತಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ಈಶ್ವರಪ್ಪ ಮತ್ತೆ ಯಡಿಯೂರಪ್ಪನವರ ಕಾಲೆಳೆಯಲು ಮರೆಯಲಿಲ್ಲ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲ ಪಕ್ಷಗಳ ನಾಯಕರ ವಿರುದ್ಧ ಭಷ್ಟಾಚಾರದ ಆರೋಪ ಹೊರಿಸಲಾಗಿದೆ. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಎಸ್ಎಮ್ ಕೃಷ್ಣ, ಧರಂ ಸಿಂಗ್ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಈ ನಾಯಕರಾರೂ ಯುವ ಜನತೆಗೆ ಆದರ್ಶ ನಾಯಕರಲ್ಲ. ಭ್ರಷ್ಟಾಚಾರದಿಂದ ಸಂಪೂರ್ಣ ಮುಕ್ತರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಮಾತ್ರ ಆದರ್ಶ ನಾಯಕ ಎಂದರು.
ಯಾವ ಪಕ್ಷವೂ ಭ್ರಷ್ಟಾಚಾರ ಮಾಡಿರೆಂದು ನಾಯಕರಿಗೆ ಹೇಳುವುದಿಲ್ಲ. ಯಾರ ಮೇಲಾದರೂ ಭ್ರಷ್ಟಾಚಾರದ ಆರೋಪ ಹೊರಿಸಲಾಗಿದ್ದರೆ ಅದಕ್ಕೆ ಅವರೇ ಕಾರಣರು, ಪಕ್ಷವಲ್ಲ ಎಂದು ನೇರವಾಗಿ ಯಡಿಯೂರಪ್ಪನವರನ್ನು ಈಶ್ವರಪ್ಪ ತಿವಿದರು. ಈಶ್ವರಪ್ಪನವರ ಅನುಕಂಪದ ಮಾತುಗಳು ತಮಗೆ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದ ಯಡಿಯೂರಪ್ಪನವರಿಗೆ ಈಶ್ವರಪ್ಪ ಮರುತಿರುಗೇಟು ನೀಡಿದ್ದಾರೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ಯಡಿಯೂರಪ್ಪನವರು ಗಟ್ಟಿ ವ್ಯಕ್ತಿತ್ವದವರು, ಎಲ್ಲ ಅಡೆತಡೆ ಮೀರಿ ಜಯಶಾಲಿಯಾಗಿ ಬರುತ್ತಾರೆ ಎಂದು ಈಶ್ವರಪ್ಪ ನೀಡಿದ್ದ ಹೇಳಿಕೆ ವಿರುದ್ಧ ಕೆಂಡ ಕಾರಿದ್ದ ಯಡಿಯೂರಪ್ಪ, ಅವರ ಅನುಕಂಪದ ನುಡಿಗಳ ಅಗತ್ಯವಿಲ್ಲ. ಅನುಕಂಪವಿದ್ದಿದ್ದರೆ ಹೈಕಮಾಂಡಿಗೆ ತಮ್ಮ ವಿರುದ್ಧ ದೂರು ಯಾಕೆ ನೀಡುತ್ತಿದ್ದರು. ಇವು ಬರೀ ಢಂಬಾಚಾರದ ಮಾತುಗಳು ಎಂದು ಆಕ್ರೋಶದ ನುಡಿಗಳನ್ನು ಆಡಿದ್ದರು.












Click it and Unblock the Notifications