ಚೆಲ್ವನ ಕಾಮನಬಿಲ್ಲಿಗೆ ಜೋತುಬಿದ್ದ 16 ಯುವತಿಯರು
ಚಕ್ರವರ್ತಿ ಎಂ ತಮಿಳ್ಸೆಲ್ವನ್ ಎಂಬ 27ರ ವಯಸ್ಸಿನ ತಮಿಳುನಾಡಿನ ಚೆಲುವನೇ ಕನಸಿನ ಮದುವೆಯ ಮಂಟಪ ಕಟ್ಟಿದ್ದು. ಆ ಮಂಟಪದಲ್ಲಿ ಮದುವೆಯಾಗಲು ಸಿಂಗರಿಸಿಕೊಂಡು ಬಂದು ಬಂಗಾರದಂತಹ ಬದುಕನ್ನು ಹಾಳು ಮಾಡಿಕೊಂಡ ಯುವತಿಯರೆಲ್ಲ ವಿದ್ಯಾವಂತರು. ಕೆಲವರು ಮಾಹಿತಿ ತಂತ್ರಜ್ಞಾನದಲ್ಲಿದ್ದರೆ, ಕೆಲವರು ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ತಮಿಳ್ಸೆಲ್ವನ್ ಮದುವೆ ಸಂಬಂಧ ಬೆಸೆಯುವ ಅಂತರ್ಜಾಲ ತಾಣದಲ್ಲಿ, ತಾನೊಬ್ಬ ಅತೀ ಶ್ರೀಮಂತನಾಗಿದ್ದು, ತನ್ನ ಪಾಲಕರು ವೈದ್ಯರಾಗಿದ್ದು, ಅನೇಕ ಆಸ್ಪತ್ರೆಗಳನ್ನು ತೆರೆದಿದ್ದಾರೆ. ತಾನು ಕೂಡ ಉತ್ತಮ ಕಂಪನಿಯಲ್ಲಿ ಅತ್ಯುತ್ತಮ ಹುದ್ದೆಯಲ್ಲಿದ್ದುದಾಗಿ ತನ್ನ ಪ್ರೊಫೈಲಿನಲ್ಲಿ ಬರೆದುಕೊಂಡಿದ್ದ. ಕರ್ನಾಟಕ, ತಮಿಳುನಾಡು, ಕೇರಳ, ದುಬೈ ಮುಂತಾದೆಡೆಗಳಲ್ಲಿ ವಾಸವಿರುವ ಯುವತಿಯರು ಈತನ ಪ್ರೊಫೈಲಿಗೆ ಮರುಳಾಗಿದ್ದಾರೆ.
ಆತನನ್ನು ಮದುವೆಯಗಲು ಇಚ್ಛಿಸಿದ ಯುವತಿಯರೊಂದಿಗೆ ಗೆಳೆತನ ಬೆಳೆಸಿದ ಸೆಲ್ವನ್ ಕೆಲವರ ಅಶ್ಲೀಲ ಚಿತ್ರಗಳನ್ನು ತೆಗೆದುಕೊಂಡು ಬ್ಲಾಕ್ ಮೇಲ್ ಮಾಡಲು ಶುರು ಮಾಡಿದ್ದಾನೆ. ಕೆಲವರಿಗೆ ತನ್ನ ಬ್ಯಾಂಕ್ ಖಾತೆಯಲ್ಲಿ ಹಣ ಹಾಕಲು ಪುಸಲಾಯಿಸಿದ್ದರೆ, ಕೆಲ ಯುವತಿಯರಿಂದ ಆಭರಣಗಳನ್ನು ಕಿತ್ತುಕೊಂಡಿದ್ದಾನೆ. ಆತನ ವಂಚನೆ ಬಯಲಾಗುವ ಹೊತ್ತಿಗೆ ಕಾಲ ಮಿಂಚಿಹೋಗಿತ್ತು.
ಆತ ಬೀಸಿರುವ ಜಾಲದ ಅಗಾಧತೆ ಯಾವ ಮಟ್ಟದ್ದಿತ್ತೆಂದರೆ ಒಬ್ಬಿಬ್ಬರಲ್ಲ ಹದಿನಾರು ಯುವತಿಯರು ಆತನಿಗೆ ಮರುಳಾಗಿ ತಮ್ಮ ಬದುಕನ್ನು ಹಾಳುಮಾಡಿಕೊಂಡಿದ್ದಾರೆ. ತಮಿಳ್ಸೆಲ್ವನ್ ಜೊತೆ ಪೆರುಮಾಳ್ ಎಂಬಾತ ಕೂಡ ಸೇರಿಕೊಂಡಿದ್ದು, ಅವರಿಬ್ಬರನ್ನು ಬಂಧಿಸಲು ತಮಿಳುನಾಡು ಪೊಲೀಸರು ಬಲೆ ಬೀಸಿದ್ದಾರೆ.
ಅಂತರ್ಜಾಲದ ವಂಚನೆಯ ಸುಳಿಯಲ್ಲಿ ಯುವತಿಯರು ಸಿಲುಕುವುದು ಹೊಸದೇನಲ್ಲ. ಇಲ್ಲಿ ಅನೇಕ ಮದುವೆಗಳೂ ಆಗಿದ್ದರೆ, ಅನೇಕ ಲಗ್ನಗಳು ಮುರಿದುಬಿದ್ದಿವೆ. ಈ ವಂಚನೆಯ ಬಗ್ಗೆ ಅರಿವಿದ್ದರೂ ವಿದ್ಯಾವಂತೆಯಾಗಿರುವ ಯುವತಿಯರು ವಂಚಿತರಾಗಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.