ರಾಜ್ಯಸಭೆಗೆ ಸಚಿನ್ ಏಕೆ? ಕೋರ್ಟಿನಲ್ಲಿ ಪ್ರಶ್ನೆ
ಮಧುರೈ ಕೇಸ್ : ಸಚಿನ್ ತೆಂಡೂಲ್ಕರ್ ವಿರುದ್ಧ ಈ ಹಿಂದೆ ದಾಖಲಾಗಿದ್ದ ಕೇಸ್ ವಿಚಾರಣೆ ನಡೆದಿಲ್ಲ. ತನಿಖೆ ಪೂರ್ಣಗೊಂಡಿಲ್ಲ. ಈಗ ಏಕಾಏಕಿ ಮೇಲ್ಮನೆ ಆಯ್ಕೆ ಮಾಡುವುದು ಸರಿಯಿಲ್ಲ. ಈ ಕುರಿತು ವಿವರಣೆ ನೀಡುವಂತೆ ಪ್ರಧಾನ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರಿಗೆ ಹೈಕೋರ್ಟ್ ಆದೇಶಿಸಬೇಕು ಎಂದು ಅರ್ಜಿದಾರ ಅಡ್ವೋಕೇಟ್ ಎ. ಬೆನಿಟ್ಟೊ ಆಗ್ರಹಿಸಿದ್ದಾರೆ.
ಮಾ. 2010ರಲ್ಲಿ ಜಮೈಕಾದಲ್ಲಿ ನಡೆದ ಔತಣಕೂಟದಲ್ಲಿ ರಾಷ್ಟ್ರೀಯ ಧ್ವಜಕ್ಕೆ ಅವಮಾನ ಮಾಡಿದ ಘಟನೆಗೆ ಸಂಬಂಧಿಸಿ ಮೇಲೂರಿನ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ನಲ್ಲಿ ಈ ಮೊದಲೆ ತೆಂಡೂಲ್ಕರ್ ವಿರುದ್ಧ ಕೇಸು ದಾಖಲಾಗಿತ್ತು, ಪ್ರಕರಣದ ತೀರ್ಪು ಇನ್ನೂ ಬಂದಿಲ್ಲ ಎಂದು ಅರ್ಜಿದಾರರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಲಖ್ನೋ ಪ್ರಕರಣ: ಸಚಿನ್ ರಾಜ್ಯಸಭೆ ನಾಮಾಂಕಣವನ್ನು ರದ್ದುಗೊಳಿಸಬೇಕು ಎಂದು ಸ್ಥಳೀಯ ವಕೀಲ ಅಶೋಕ್ ಪಾಂಡೆ ಪ್ರಶ್ನಿಸಿದ್ದಾರೆ. ಸಚಿನ್ ರಾಜ್ಯಸಭೆಗೆ ಆಯ್ಕೆ ಮಾಡಲು ಕಾನೂನಿನ ತೊಡಕು ಎದುರಾಗಲಿದೆ. ಸಂವಿಧಾನದ ಪರಿಚ್ಛೇದ 80(3)ದ ಉಲ್ಲಂಘನೆ ಮಾಡಬೇಕಾಗುತ್ತದೆ.
ಅರ್ಟಿಕಲ್ 80(3) ಸಾಹಿತ್ಯ, ಕಲೆ, ವಿಜ್ಞಾನ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಆಯ್ಕೆ ಮಾಡಬೇಕಾಗುತ್ತದೆ. ರಾಷ್ಟ್ರಪತಿಗಳು ಸುಮಾರು 12 ಜನರನ್ನು ಈ ರೀತಿ ಆರಿಸಿ ಮೇಲ್ಮನೆಗೆ ಕಳಿಸಬಹುದಾಗಿದೆ. ಆದರೆ, ಕ್ರಿಕೆಟ್ ಆಟಗಾರ ಸಚಿನ್ ಗಾಗಿ ಸಂವಿಧಾನದ ನಿಯಮಗಳು ತಿದ್ದುಪಡಿ ಮಾಡಿರುವುದು ಅಕ್ಷಮ್ಯ ಎಂದು ದೂರುದಾರ ಅಶೋಕ್ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ. (ಪಿಟಿಐ)