ತಿರುಪತಿ ತಿಮ್ಮಪ್ಪನಿಗೆ ಅಡ್ಡಬಿದ್ದ ಜಗನ್: ವಿವಾದ

ಆದರೆ, ಬುಧವಾರ ಜಗನ್ ಹೀಗೆ ತಿರುಪತಿ ತಿಮ್ಮಪ್ಪನಿಗೆ ಅಡ್ಡಬಿದ್ದಿರುವುದು ಭಾರಿ ಟೀಕೆಗೆ ಗ್ರಾಸವಾಗಿದೆ. ಕ್ರೈಸ್ತ ಧರ್ಮದವರಾದ ಜಗನ್ ಹಣೆಗೆ ನಾಮವನ್ನಿಟ್ಟುಕೊಂಡು ಸುಮಾರು 60 ಬೆಂಬಲಿಗರೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಆದರೆ ಅವರು ಸಂಪ್ರದಾಯದಂತೆ ಹಿಂದೂಯೇತರ ಭಕ್ತಾಧಿಗಳ ಘೋಷಣಾ ಪತ್ರಕ್ಕೆ ಸಹಿ ಹಾಕದೆ ನೇರವಾಗಿ ತಿಮ್ಮಪ್ಪನ ದರ್ಶನ ಪಡೆದಿರುವುದು ವಿವಾದಕ್ಕೆ ಕಾರಣವಾಗಿದೆ.
1933ರಿಂದ ತಿರುಮಲ ದೇವಸ್ಥಾನದಲ್ಲಿ ಆಚರಣೆಯಲ್ಲಿರುವ ಪದ್ಧತಿಯಂತೆ ಅನ್ಯಧರ್ಮೀಯರು ತಿಮ್ಮಪ್ಪನ ದರ್ಶನ ಪಡೆಯಬೇಕೆಂದರೆ 'ನಾನು ಹಿಂದೂಯೇತರ ಧರ್ಮದವನಾಗಿದ್ದು, ವೇಂಕಟೇಶ್ವರ ಸ್ವಾಮಿಯಲ್ಲಿ ಅಚಲ ಭಕ್ತಿ, ನಂಬಿಕೆ ಮತ್ತು ವಿಶ್ವಾಸವನ್ನು ಹೊಂದಿದ್ದೇನೆ' ಎಂದು ಘೋಷಣಾ ಪತ್ರಕ್ಕೆ ಸಹಿ ಹಾಕಬೇಕು. 1960ರಿಂದ ಈ ಆಚರಣೆಯನ್ನು ಹೆಚ್ಚು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು TTD ಮೂಲಗಳು ಹೇಳುತ್ತವೆ.
ಜೂನ್ 12ರಂದು ಆಂಧ್ರದಲ್ಲಿ ಉಪಚುನಾವಣೆಗಾಗಿ ಅಖಾಡಗಳು ಸಿದ್ಧವಾಗಿವೆ. ಈ ಹಿನ್ನೆಲೆಯಲ್ಲಿ YSR Congress ಯುವನೇತ ಜಗನ್ ತಿರುಪತಿ ಕ್ಷೇತ್ರದಲ್ಲಿ 2 ದಿನಗಳ ವಾಸ್ತವ್ಯ ಹೂಡಿದ್ದಾರೆ. ಆ ಸಂದರ್ಭದಲ್ಲಿ ವೈಕುಂಠ ಕ್ಯೂ ಕಾಂಪ್ಲೆಕ್ಸ್ ಒಂದರಲ್ಲಿ ನಿಂತು ಬುಧವಾರ ಬೆಳಗ್ಗೆ ದೇವರ ದರ್ಶನ ಪಡೆದಿದ್ದಾರೆ.
ನಟಿ ರೋಜಾ, TTD ಮಾಜಿ ಛೇರ್ಮನ್ ಮತ್ತು ತಿರುಪತಿ ಕ್ಷೇತ್ರದ YSR Congress ಅಭ್ಯರ್ಥಿ ಭೂಮನ ಕರುಣಾಕರ ರೆಡ್ಡಿ ಮತ್ತು TTD ಮಂಡಳಿಯ ಮಾಜಿ ಸದಸ್ಯ ಚೆವಿರೆಡ್ಡಿ ಭಾಸ್ಕರ್ ಅವರು ಜಗನ್ ಗೆ ಸಾಥ್ ನೀಡಿದ್ದಾರೆ.
ಈ ಹಿಂದೆಯೂ ಎಪಿಜೆ ಅಬ್ದುಲ್ ಕಲಾಂ, ಜಾಫರ್ ಷರೀಫ್, ಫಾರೂಕ್ ಅಬ್ದುಲ್ಲಾ ಸೇರಿದಂತೆ ವಿದೇಶಗಳಿಂದ ಆಗಮಿಸಿದ ಇನ್ನೂ ಅನೇಕ ಅನ್ಯ ಧರ್ಮೀಯರು ಇಂತಹ ಘೋಷಣಾ ಪತ್ರಕ್ಕೆ ಸಹಿ ಹಾಕಿ ದೇವರ ದರ್ಶನ ಪಡೆದ ನಿದರ್ಶನಗಳಿವೆ. ಮದುರೈ ಮೀನಾಕ್ಷಿ ದೇವಸ್ಥಾನ, ಕಠ್ಮಂಡುವಿನ ಪಶುಪತಿನಾಥ ದೇವಾಲಯ ಸೇರಿದಂತೆ ಅನೇಕ ಪ್ರಮುಖ ಹಿಂದೂ ದೇವಸ್ಥಾನಗಳಲ್ಲಿ ಇಂತಹ ಆಚರಣೆಯೊಂದು ಅನೇಕ ವರ್ಷಗಳಿಂದ ಜಾರಿಯಲ್ಲಿದೆ.












Click it and Unblock the Notifications