ಗಡ್ಕರಿ ಆಫರ್ ತಿರಸ್ಕರಿಸಿದ ಯಡ್ಡಿ, ಸದಾ ಸೇಫ್

ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ಪರ ಬ್ಯಾಟಿಂಗ್ ಮಾಡುತ್ತಿರುವ ಹೈಕಮಾಂಡ್ ತಂಡ, ಯಡಿಯೂರಪ್ಪ ಅವರ ಬೌನ್ಸರ್ ಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ.
ಸೋಮವಾರ ಮಧ್ಯಾಹ್ನ 3 ಗಂಟೆಗೆ ನಾಗಾಪುರದಲ್ಲಿ ನಿಗದಿಯಾಗಿದ್ದ ಸಭೆಗೆ ಹಾಜರಾಗದಿರಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಬಿಜೆಪಿ ಹೈ ಕಮಾಂಡ್ ನೀಡಿದ ಯಾವ ಆಶ್ವಾಸನೆಗೂ ಬಗ್ಗದ ಯಡಿಯೂರಪ್ಪ ಅವರು ಸಂಜೆವೊಳಗೆ ನಿರ್ಧಾರ ತಿಳಿಸುವಂತೆ ಹೈಕಮಾಂಡ್ ಗೆ ಮತ್ತೊಮ್ಮೆ ಸೂಚಿಸಿ ಫೋನ್ ಕರೆ ಕಟ್ ಮಾಡಿದ್ದಾರೆ.
'ಬಜೆಟ್ ಅಧಿವೇಶನ ಮುಗಿಯುವ ತನಕ ಸುಮ್ಮನಿರಿ. ಸದಾನಂದ ಗೌಡರು ಬಜೆಟ್ ಮಂಡಿಸಲಿ. ಸದಾನಂದ ಗೌಡರನ್ನು ಸದ್ಯಕ್ಕೆ ಬದಲಿಸಲು ಸಾಧ್ಯವಿಲ್ಲ 'ಎಂದು ನಿತಿನ್ ಗಡ್ಕರಿ ಅವರ ಮಾತಿಗೆ ಯಡಿಯೂರಪ್ಪ ಸಿಟ್ಟಿಗೆದ್ದರು ಎನ್ನಲಾಗಿದೆ.
ಮುಂದಿನ ನಡೆ ಏನು?: ಗೋಲ್ಡನ್ ಪಾಮ್ ರೆಸಾರ್ಟ್ ನಲ್ಲಿ ಯಡಿಯೂರಪ್ಪ ಅವರ ಬೆಂಬಲಿಗರ ಸಂಖ್ಯೆ ಏರುತ್ತಿದ್ದು 55 ಇದ್ದದ್ದು ಸಂಜೆ ವೇಳೆಗೆ 70 ಆಗುವ ಸಾಧ್ಯತೆಯಿದೆ. ಎಲ್ಲಾ ಶಾಸಕರನ್ನು ಕರೆದುಕೊಂಡು ಹೈ ಕಮಾಂಡ್ ಮುಂದೆ ಪರೇಡ್ ನಡೆಸುತ್ತಾರಾ? ಅಥವಾ ಸಹಿ ಸಂಗ್ರಹ ಮಾಡಿ ಹೈಕಮಾಂಡ್ ಗೆ ಸಲ್ಲಿಸುತ್ತಾರಾ? ಕಾದು ನೋಡಬೇಕಿದೆ.
ಈ ಮಧ್ಯೆ ನವದೆಹಲಿಯಲ್ಲಿ ಸಭೆ ಸೇರಿದ್ದ ರಾಜ್ಯದ 8 ಸಂಸದರು ಪಕ್ಷದ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರನ್ನು ಭೇಟಿ ಮಾಡಿದ್ದಾರೆ. ನಿತಿನ್ ಗಡ್ಕರಿ ಅವರು ನಾಗಪುರದಲ್ಲಿದ್ದಾರೆ. ರಾಜ್ಯದ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಗುಜರಾತ್ ಪ್ರವಾಸದಲ್ಲಿದ್ದಾರೆ.












Click it and Unblock the Notifications