ಯಡಿಯೂರಪ್ಪ ಆಪ್ತ ಪುಟ್ಟಸ್ವಾಮಿ ರಾಜ್ಯಸಭೆಗೆ ಸ್ಪರ್ಧೆ

ರಾಜ್ಯಸಭೆ ನಾಲ್ಕು ಸ್ಥಾನಗಳಿಗೆ ಮಾ.30 ರಂದು ಚುನಾವಣೆ ನಡೆಯಲಿದೆ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಪುಟ್ಟಸ್ವಾಮಿ ಸ್ಪರ್ಧಿಸುತ್ತಿರುವುದು ಕುತೂಹಲ ಕೆರಳಿಸಿದೆ. ಬಿಜೆಪಿ ಕೆಲ ಶಾಸಕರು ಸಹಿ ಹಾಕಿರುವ ಪತ್ರ ಕೈಲಿಟ್ಟುಕೊಂಡಿದ್ದ ಸ್ವಾಮಿಗೆ ಬಿಜೆಪಿ 'ಬಿ ' ಫಾರಂ ನೀಡಿರುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಇದಕ್ಕೂ ಮುನ್ನ ಬಿಜೆಪಿಯ ಅಭ್ಯರ್ಥಿಗಳಾಗಿ ಬಸವರಾಜ ಪಾಟೀಲ್ ಸೇಡಂ ಹಾಗೂ ರಾಮಕೃಷ್ಣ ಅವರು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿಎಂ ಸದಾನಂದ ಗೌಡ, ಕೆಎಸ್ ಈಶ್ವರಪ್ಪ, ಬಚ್ಚೇಗೌಡ, ಶೋಭಾ ಕರಂದ್ಲಾಜೆ ಮುಂತಾದ ಮುಖಂಡರು ಉಪಸ್ಥಿತರಿದ್ದರು.
'ಯಡಿಯೂರಪ್ಪ ಅವರ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಬಿ ಫಾರಂ ಪಡೆಯಲು ಇನ್ನು ಕಾಲಾವಕಾಶ ಇದೆ' ಎಂದು ಪುಟ್ಟಸ್ವಾಮಿ ಹೇಳಿದ್ದಾರೆ.
ಬಿಜೆಪಿಯಿಂದ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ. ಕಾಂಗ್ರೆಸ್ಸೇತರ ಅಭ್ಯರ್ಥಿಗೆ ಬೆಂಬಲಿಸುವುದಾಗಿ ಸಿಎಂ ಸದಾನಂದ ಗೌಡ ಘೋಷಿಸಿದ್ದರು.
ಅದರೆ, ವಿಧಾನಸೌಧಕ್ಕೆ ಏಕಾಂಗಿಯಾಗಿ ಬಂದ ಪುಟ್ಟಸ್ವಾಮಿ ನಾಮಪತ್ರ ಸಲ್ಲಿಸಿರುವುದು ಬಿಜೆಪಿ ನಾಯಕರಿಗೆ ಇರುಸು ಮುರುಸು ಉಂಟು ಮಾಡಿದೆ.
ರಾಜೀವ್ ಮತ್ತೆ ಕಣಕ್ಕೆ : ಜೆಡಿಎಸ್ ಬೆಂಬಲ ದಿಂದ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರು ಎಚ್ ಡಿ ರೇವಣ್ಣ ಅವರ ಜೊತೆ ಸೇರಿ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ. ವಿಧಾನಸಭಾ ಕಾರ್ಯದರ್ಶಿ ಓಂಪ್ರಕಾಶ್ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಲು ಮತ್ತೊಮ್ಮೆ ಆಯ್ಕೆ ಬಯಸಿದ್ದೇನೆ. ಮೂರು ಪಕ್ಷಗಳು ನನಗೆ ಬೆಂಬಲ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದು ಹಾಲಿ ಸಂಸದ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಕಾಂಗ್ರೆಸ್ ನಿಂದ ಕೆ ರೆಹಮಾನ್ ಖಾನ್ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಜಿ ಎಸ್ ಪರಮೇಶ್ವರ್ ಹೇಳಿದ್ದಾರೆ.
ರಾಜ್ಯ ಸಭೆ ಚುನಾವಣೆ : ಹೇಮಮಾಲಿನಿ, ಕೆಬಿ ಶಾಣಪ್ಪ, ಕೆ ರೆಹಮಾನ್ ಖಾನ್ ಹಾಗೂ ರಾಜೀವ್ ಚಂದ್ರಶೇಖರ್ ಅವರಿಂದ ತೆರವಾಗುವ ಸ್ಥಾನಕ್ಕೆ ಸ್ಪರ್ಧೆ.
ಒಟ್ಟು ಸದಸ್ಯರ ಸಂಖ್ಯೆ : 224
ಬಿಜೆಪಿ : 120 ಶಾಸಕರು
[ಯಾವುದೇ ಅಭ್ಯರ್ಥಿ ಗೆಲ್ಲಲು 45 ಮತ ಬೇಕು]
ಕಾಂಗ್ರೆಸ್ : 71 ಅಭ್ಯರ್ಥಿಗಳು
ಜೆಡಿಎಸ್ : 26
ಪಕ್ಷೇತರರು: 7 (ಒಬ್ಬರು ಬಿಜೆಪಿ ಪರ)
ರಾಜ್ಯಸಭೆಗೆ ಮಾ.30 ರಂದು ಚುನಾವಣೆ. ನಾಮಪತ್ರ ಸಲ್ಲಿಸಲು ಮಾ.19 ಕೊನೆ ದಿನ.












Click it and Unblock the Notifications