ಆನೆತುಳಿತಕ್ಕೆ ಬಲಿಯಾದ ರೇಣುಕಾಪ್ರಸಾದ್ ಅಂತ್ಯಕ್ರಿಯೆ

ತಾಯಿ ಹಾಗೂ ಮರಿಯಾನೆ ನಗರಕ್ಕೆ ಆಗಮಿಸಿದ್ದವಾದರೂ ಮರಿಯಾನೆ ತಾಯಿಯಿಂದ ಬೇರ್ಪಟ್ಟು ನಗರದೊಳಕ್ಕೆ ಆಗಮಿಸಿ ದಾಂಧಲೆ ನಡೆಸಿ ಓರ್ವ ವ್ಯಕ್ತಿ ಹಾಗೂ ಹಸುವೊಂದನ್ನು ಬಲಿತೆಗೆದುಕೊಂಡಿತ್ತು. ಅದನ್ನು ಮಧ್ಯಾಹ್ನದ ವೇಳೆಗೆ ಕುಕ್ಕರಳ್ಳಿ ಕೆರೆ ಬಳಿಯ ದೋಭಿಘಾಟ್ನಲ್ಲಿ ಅರಿವಳಿಕೆ ಮದ್ದು ನೀಡುವ ಮೂಲಕ ಸೆರೆ ಹಿಡಿಯಲಾಗಿತ್ತು.
ಇದರ ತಾಯಿಯಾನೆ ಆನೆ ರಿಂಗ್ ರಸ್ತೆಯಲ್ಲಿ ತೆರಳಿ ನಾಯ್ಡು ನಗರದ ಫಾರಂ ಹೌಸ್ವೊಂದರಲ್ಲಿ ಸೇರಿಕೊಂಡಿತ್ತು, ಈ ಫಾರಂ ಹೌಸ್ ಕೆಸರು ಹಾಗೂ ದಟ್ಟ ಹುಲ್ಲಿನ ಪೊದೆಯಿಂದ ಕೂಡಿದ್ದರಿಂದ ಅದನ್ನು ಸುತ್ತುವರಿದು ಅರಿವಳಿಕೆ ಮದ್ದು ನೀಡಿ ಹಿಡಿಯುವುದು ಸುಲಭದ ಕೆಲಸವಾಗಿರಲಿಲ್ಲ.
ಆದರೆ ಇದೇ ವೇಳೆಗೆ ಕೊಡಗಿನ ತಿತಿಮತಿಯಿಂದ ಅಭಿಮನ್ಯು, ನಾಗರಹೊಳೆಯಿಂದ ಅರ್ಜುನ್, ಚಾಮರಾಜನಗರದ ಕೆ.ಗುಡಿಯಿಂದ ಗಜೇಂದ್ರ ಹಾಗೂ ಶ್ರೀರಾಮ ಎಂಬ ಸಾಕಾನೆಗಳು ಬಂದಿದ್ದರಿಂದ ಅವುಗಳ ಸಹಾಯದಿಂದ ಪೊದೆಯೊಳಗಿದ್ದ ಹೆಣ್ಣಾನೆಗೆ ಅರಿವಳಿಕೆ ಮದ್ದು ನೀಡಲು ಸಾಧ್ಯವಾಯಿತು.
ಆ ನಂತರ ಪ್ರಜ್ಞೆ ತಪ್ಪಿ ಬಿದ್ದ ಆನೆಯ ಕಾಲುಗಳನ್ನು ಸರಪಳಿಯಿಂದ ಕಟ್ಟಿ ಪ್ರಜ್ಞೆ ಬಂದ ಬಳಿಕ ಸಾಕಾನೆಗಳ ಮೂಲಕ ಫಾರಂ ಹೌಸ್ನಿಂದ ಹೊರ ತರಲಾಯಿತು.ಈಗಾಗಲೇ ಸೆರೆ ಸಿಕ್ಕಿರುವ ಆನೆಗಳ ಪೈಕಿ ನರಹಂತಕ ಮರಿಯಾನೆಯನ್ನು ಪಳಗಿಸಿ ಇಲಾಖೆಯ ಉಪಯೋಗಕ್ಕೆ ಬಳಸಿಕೊಳ್ಳಲಾಗುವುದಾಗಿ ಅರಣ್ಯ ಸಚಿವ ವಿಜಯ್ ಶಂಕರ್ ತಿಳಿಸಿದ್ದಾರೆ.
ಮೃತನ ಅಂತ್ಯಕ್ರಿಯೆ: ನರಹಂತಕ ಆನೆಯ ದಾಳಿಗೆ ಸಿಕ್ಕಿ ಬೆಳಿಗ್ಗೆ ಸಾವನ್ನಪ್ಪಿದ ಬ್ಯಾಂಕ್ವೊಂದರ ಎಟಿಎಂನ ಸೆಕ್ಯೂರಿಟಿ ಗಾರ್ಡ್ ರೇಣುಕಾ ಪ್ರಸಾದ್ ಮನೆಗೆ ತೆರಳಿದ ಸಚಿವ ವಿಜಯಶಂಕರ್ ಅವರು ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರಲ್ಲದೆ, ಮೂರೂವರೆ ಲಕ್ಷ ರೂಪಾಯಿಯ ಪರಿಹಾರದ ಚೆಕ್ನ್ನು ಕುಟುಂಬಕ್ಕೆ ವಿತರಿಸಿದರು.
ಈ ನಡುವೆ ಮೃತ ರೇಣುಕಾಪ್ರಸಾದ್ ಅವರ ಕಣ್ಣುಗಳನ್ನು ದಾನ ಮಾಡಲು ಕುಟುಂಬದವರು ನಿರ್ಧರಿಸಿದರಾದರೂ ಆಗಲೇ ನಿಗದಿತ ಸಮಯ ಕಳೆದು ಹೋಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ಬಳಿಕ ವಿದ್ಯಾರಣ್ಯಪುರಂನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.











Click it and Unblock the Notifications