ಬಿಜೆಪಿ ಮಂಥನಕ್ಕೆ ಉಪಸ್ಥಿತಿ ಕಡ್ಡಾಯ : ಸಿಎಂ ಸೂಚನೆ
ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಸ್ವತಃ ಯಡಿಯೂರಪ್ಪ ಅವರೇ ವಿಷಯ ಪ್ರಸ್ತಾಪಿಸಿ ಸುತ್ತೂರಿನಲ್ಲಿ ನಡೆಯುವ ಮಂಥನ ಕಾರ್ಯಕ್ರಮಕ್ಕೆ ತಪ್ಪದೆ ಬರಬೇಕು ಎಂದು ಸೂಚನೆ ನೀಡಿದರು. ಮೈಸೂರು ದಸರಾ ಉತ್ಸವದ ಅಂಗವಾಗಿ ವಿಜಯದಶಮಿ (ಸೋಮವಾರ) ದಿನದಂದು ಪಂಜಿನ ಕವಾಯಿತು ಕಾರ್ಯಕ್ರಮದಲ್ಲಿ ಎಲ್ಲಾ ಸಚಿವರು ಪಾಲ್ಗೊಂಡು ಬೆಳಗ್ಗೆ ತಿಂಡಿ ಮುಗಿಸಿ ಕಾರುಗಳನ್ನು ಬಿಟ್ಟು ಬಸ್ಸಿನಲ್ಲಿಯೇ ಆಗಮಿಸಬೇಕು. ಸಚಿವರೊಂದಿಗೆ ಒಬ್ಬ ಗನ್ ಮೆನ್ ಮತ್ತು ಒಬ್ಬ ಆಪ್ತ ಸಹಾಯಕ ಮಾತ್ಪ ಆಗಮಿಸಲು ಅವಕಾಶವಿದೆ ಎಂದು ಹೇಳಿದ್ದಾರೆ.
ಕಳೆದ ಒಂದೂವರೆ ವರ್ಷದಲ್ಲಿ ತಮ್ಮ ಇಲಾಖೆಯಲ್ಲಿ ಆಗಿರುವ ಪ್ರಗತಿ, ಹಣಕಾಸಿನ ಖರ್ಚು, ವೆಚ್ಚ, ಜತೆಗೆ ಮುಂದಿನ ಮೂರುವರೆ ವರ್ಷಗಳಲ್ಲಿ ಮಾಡಲು ಉದ್ದೇಶಿಸಿರುವ ಕಾರ್ಯಕ್ರಮಗಳು ಮತ್ತು ಬೇಕಾದ ಆರ್ಥಿಕ ನೆರವು ಕುರಿತಂತೆ ಸಮಗ್ರ ಮಾಹಿತಿಯೊಂದಿಗೆ ಸಿದ್ಧರಾಗಿ ಬರಬೇಕು ಎಂದು ಸಚಿವರಿಗೆ ತಿಳಿಸಿದ್ದಾರೆ. ಮೂರು ದಿನಗಳ ಮಂಥನದಲ್ಲಿ ಬಿಜೆಪಿ ಕಾರ್ಯದರ್ಶಿ ಅರುಣ್ ಜೈಟ್ಲಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಸಂಸದರಾದ ವೆಂಕಯ್ಯ ನಾಯ್ಡು, ಅನಂತಕುಮಾರ್ ಪಾಲ್ಗೊಳ್ಳಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)