ಹಂದಿಜ್ವರ ಪೀಡೆ ಅಬಾಧಿತ; ಔಷಧ ಕೊರತೆಯ ಬಾಧೆ

ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿಕೆಗೆ ಅವಕಾಶ. ಖಾಸಗಿ ಪ್ರಯೋಗಾಲಯಗಳ ಬಳಕೆ. ಎಲ್ಲಾ ಅಂತಾರಾಷ್ಟ್ರೀಯ ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ಯಾನರ್ ಗಳ ಅಳವಡಿಕೆ (ವ್ಯಕ್ತಿಯ ದೈಹಿಕ ತಾಪಮಾನದಲ್ಲಿ ಏರುಪೇರಿರುವುದು ಕಂಡು ಬಂದರೆ, ತಕ್ಷಣ ಆಸ್ಪತ್ರೆಗೆ ದಾಖಲಿಸುವ ಕ್ರಮ). ಇದುವರೆವಿಗೂ 75 ಲಕ್ಷಕ್ಕೂ ಅಧಿಕ ಟಾಮಿಫ್ಲೂ ಮಾತ್ರೆ ಪೂರೈಕೆ ಮಾಡಲಾಗಿದೆ ಎಂದು ಗುಲಾಂ ನಬಿ ಅಜಾದ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ರಾಜ್ಯದಲ್ಲಿ ಉಡುಪಿ, ಮಂಗಳೂರು ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಂದಿಜ್ವರ ಹರಡುತ್ತಿದೆ. ಇಂದು ದಾವಣಗೆರೆಯಲ್ಲಿ ತರಿಕೆರೆ ಮೂಲದ ಮಹಿಳೆಯೊಬ್ಬರಿಗೆ ಎಚ್ 1 ಎನ್ 1 ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳಿಸಲಾಗಿದೆ ಎಂದು ವೈದ್ಯಾಧಿಕಾರಿ ಶಿವಣ್ಣ ರೆಡ್ಡಿ ಹೇಳಿದರು. ರಾಜ್ಯದ ಎಲ್ಲೆಡೆ ಹಂದಿಜ್ವರ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನ್ನೆಲೆಯಲ್ಲಿ ತುರ್ತು ಸೇವೆ ಒದಗಿಸಲು ಹಾಗೂ ರೋಗಿಗಳ ಆರೈಕೆಗೆ ಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲು ಇಂದು ಬಿಬಿಎಂಪಿ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.
ರಾಜ್ಯದಲ್ಲಿ ಒಟ್ಟು 6 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, 21ಕ್ಕೂ ಅಧಿಕ ಜನ ಶಂಕಿತ ರೋಗಿಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಬೆಂಗಳೂರಿನ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಎಚ್ 1 ಎನ್ 1 ಸೋಂಕಿರುವ ಶಂಕೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಕೇಂದ್ರ ಆರೋಗ್ಯ ಇಲಾಖೆಯಿಂದ 1 ಲಕ್ಷ ಟಾಮಿಫ್ಲೂ ಗುಳಿಗೆಗಳು ರಾಜ್ಯಕ್ಕೆ ತಲುಪಿದೆ. ಸುಮಾರು 10 ಲಕ್ಷಕ್ಕೂ ಅಧಿಕ ಮಾತ್ರೆಗಳಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಆರೋಗ್ಯ ಅಧಿಕಾರಿ ಪೆರುಮಾಳ್ ತಿಳಿಸಿದರು. ಆದರೆ, ಸದ್ಯ ರಾಜ್ಯದ ಔಷಧ ಉಗ್ರಾಣದಲ್ಲಿ ಕೇವಲ 10 ಸಾವಿರ ಟಾಮಿಫ್ಲೂ ಮಾತ್ರೆಗಳು ಮಾತ್ರ ಲಭ್ಯವಿರುವ ಮಾಹಿತಿ ಸಿಕ್ಕಿದೆ.
800 ಮಂದಿಗೆ ಸೋಂಕಿನ ಶಂಕೆ
ದೇಶದಲ್ಲಿ ಹಂದಿಜ್ವರ ಪೀಡಿತರ ಸಂಖ್ಯೆ 864ಕ್ಕೇರಿದೆ. ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಸುಮಾರು 500 ಮಂದಿಗೆ ಕಾಯಿಲೆ ವಾಸಿ ಮಾಡಲಾಗಿದೆ.ಒಟ್ಟು ಆರು ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.ಮುನ್ನೆಚ್ಚರಿಕೆಯ ಕ್ರಮವಾಗಿ ಮೆಟ್ರೋಪಾಲಿಟನ್ ನಗರದ ಖಾಸಗಿ ಶಾಲೆಗಳು ಸ್ವಯಂಘೋಷಿತ ರಜೆ ನೀಡಿವೆ. ದೆಹಲಿಯ ಸಂಸ್ಕೃತಿ ಶಾಲೆ, ದೆಹಲಿ ಪಬ್ಲಿಕ್ ಸ್ಕೂಲ್ ಮುಂತಾದ ಶಾಲೆಗಳಿಗೆ ಒಂದು ವಾರ ರಜೆ ನೀಡಲಾಗಿದೆ. ತಮಿಳುನಾಡು, ಪುಣೆ, ಮುಂಬೈನಲ್ಲೂ ಜ್ವರದ ಕಾವು ಹೆಚ್ಚುತ್ತಿದೆ. ಪುಣೆಯಲ್ಲಿ ಮಲ್ಟಿಫೆಕ್ಸ್, ಚಿತ್ರಮಂದಿರಗಳಿಗೆ 3 ದಿನಗಳ ಕಾಲ ಮುಚ್ಚಲು ಅಲ್ಲಿನ ಸರ್ಕಾರ ಆದೇಶ ನೀಡಿದೆ. ಈಗಾಗಲೇ ಪುಣೆಯ ಎಲ್ಲಾ ಶಾಲಾ ಕಾಲೇಜಿಗೆ ಒಂದು ವಾರ ರಜೆ ಘೋಷಿಸಲಾಗಿದೆ.
(ಏಜೆನ್ಸೀಸ್)












Click it and Unblock the Notifications