ರಾಜ್ಯದ ವಿಮಾನನಿಲ್ದಾಣ ಕಾಮಗಾರಿ ಗುತ್ತಿಗೆ ಮೇತಾಸ್ ಗೆ
ಮುಂಬೈ, ಜು. 8 : ಸತ್ಯಂ ಸಂಸ್ಥಾಪಕ ರಾಮಲಿಂಗರಾಜು ಕುಟುಂಬ ಮಾಲೀಕತ್ವದ ಮೇತಾಸ್ ಇನ್ಫ್ರಾ ಮೇಲೆ ಕರ್ನಾಟಕ ಸರಕಾರಕ್ಕೆ ಎಲ್ಲಿಲ್ಲದ ನಂಬಿಕೆ. ಸತ್ಯಂ ಕಂಪ್ಯೂಟರ್ ಕಂಪನಿಯಲ್ಲಿ ಅವ್ಯವಹಾರ ನಡೆಸಿ ನಂಬಿಕೆ ಕಳೆದುಕೊಂಡಿರುವ ರಾಜು ಕುಟುಂಬದ ಮೇತಾಸ್ ಸಂಸ್ಥೆಗೆ ಗುಲ್ಬರ್ಗ ಮತ್ತು ಶಿವಮೊಗ್ಗ ವಿಮಾನನಿಲ್ದಾಣದ ಕಾಮಗಾರಿ ಗುತ್ತಿಗೆಯನ್ನು ನೀಡಿದೆ.
ಮುಂಬೈ ಷೇರು ವಿನಿಮಯ ಕಚೇರಿಗೆ ಸಲ್ಲಿಸಿದ್ದ ಹೇಳಿಕೆಯಲ್ಲಿ ಸ್ವತಃ ಮೇತಾಸ್ ಈ ವಿಷಯವನ್ನು ಖಚಿತಪಡಿಸಿದೆ. ಸಂಸ್ಥೆಯ ಸ್ಥಿತಿ ಮತ್ತು ವಿಶ್ವಾಸಾರ್ಹತೆ ಬಗ್ಗೆ ಕರ್ನಾಟಕ ಸರಕಾರಕ್ಕಿದ್ದ ಅಪನಂಬಿಕೆಯನ್ನು ಹೊಸದಾಗಿ ರಚಿತಗೊಂಡಿರುವ ಸಂಸ್ಥೆಯ ಆಡಳಿತ ಮಂಡಳಿ ಬಗೆಹರಿಸಿದೆ. ಆದುದರಿಂದ ಕರ್ನಾಟಕ ಸರಕಾರ ನಮ್ಮ ಸಂಸ್ಥೆಯ ಜೊತೆಗೆ ವ್ಯವಹಾರ ಮುಂದುವರಿಸಲು ನಿರ್ಧರಿಸಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ಚಂದ್ರಶೀಲ ಬನ್ಸಾಲ್ ತಿಳಿಸಿದ್ದಾರೆ.
ಆದರೆ, ಇತ್ತ ಆಂಧ್ರಪ್ರದೇಶ ಸರಕಾರ ಮಾತ್ರ ಮೇತಾಸ್ ಬಗ್ಗೆ ವಿಶ್ವಾಸ ಕಳೆದುಕೊಂಡಿದೆ. ಯೋಜನೆಯನ್ನು ಸಂಪೂರ್ಣಗೊಳಿಸುವ ಸಂಸ್ಥೆಯ ಹಣಕಾಸು ಸಾಮರ್ಥ್ಯವನ್ನು ಜುಲೈ 6 ರ ಒಳಗೆ ಸಾಬೀತುಪಡಿಸಬೇಕೆಂದು ಗಡುವು ನೀಡಿತ್ತು. ಆದರೆ ಈ ದಿನಾಂಕದ ಒಳಗೆ ಸಾಬೀತುಪಡಿಸಲು ವಿಫಲವಾಗಿರುವ ಮೇತಾಸ್ ಸಂಸ್ಥೆಗೆ ಮೆಟ್ರೋ ಗುತ್ತಿಗೆಯನ್ನು ರದ್ದು ಪಡಿಸಿರುವುದಾಗಿ ಸರಕಾರ ಹೇಳಿಕೆ ನೀಡಿದೆ.
(ಏಜನ್ಸೀಸ್)












Click it and Unblock the Notifications