ಜೋಹಾನ್ಸ್ ಬರ್ಗ್ : ಗುಂಡೇಟು ತಿಂದ ಟೆಕ್ಕಿ
ಹೈದರಾಬಾದ್, ಜು. 7 : ಕಳೆದ ಗುರುವಾರ ಜೋಹಾನ್ಸ್ ಬರ್ಗ್ ನಲ್ಲಿ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಾರಂಗಲ್ ನ ಕಿರಣ್ ಎಂಬ ಸಾಫ್ಟವೇರ್ ಇಂಜಿನಿಯರ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವುದಾಗಿ ತಿಳಿದು ಬಂದಿದೆ.
ಆಂಧ್ರಪ್ರದೇಶದ ವಾರಂಗಲ್ ಜಿಲ್ಲೆಯ ಅರೇಪಲ್ಲಿ ಗ್ರಾಮದ ಕೃಷಿಕರೊಬ್ಬರ ಮಗ ಕಿರಣ್ ಕಳೆದ ಮೂರು ವರ್ಷಗಳಿಂದ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಗುರುವಾರ ಮನೆಯಿಂದ ಕೆಲಸಕ್ಕೆಂದು ಹೊರಟಿದ್ದ ಕಿರಣ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ, ಅವರಲ್ಲಿದ್ದ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದರು.
ಕಿರಣ್ ಎದೆಗೆ ಎರಡು ಗುಂಡು ಹೊಕ್ಕಿದ್ದರಿಂದ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಜೋಹಾನ್ಸ್ ಬರ್ಗ್ ನ ಮಸೈರ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿಟ್ಟು ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ವಿಫಲವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಇತ್ತ ಅರೇಪಲ್ಲಿ ಗ್ರಾಮದಲ್ಲಿ ಕಿರಣ್ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಆದರೆ ಇದು ಜನಾಂಗೀಯ ದಾಳಿ ಎಂಬುವುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.
(ಏಜನ್ಸೀಸ್)