ರೆಸಾರ್ಟ್ ಸಭೆ : ಕಾಂಗ್ರೆಸ್, ಜೆಡಿಎಸ್ ಆಕ್ಷೇಪ

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ, ಸರಕಾರದ ರೆಸಾರ್ಟ್ ಸಂಸ್ಕೃತಿ ಮಾರಕ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರ ಆಡಳಿತ ನಡೆಸಲು ವಿಧಾನಸೌಧ, ವಿಕಾಸಸೌಧ ಎರಡು ಸುಸಜ್ಜಿತ ಕಟ್ಟಡಗಳಿವೆ. ಅವುಗಳನ್ನು ಬಿಟ್ಟು ರೆಸಾರ್ಟ್ ನಲ್ಲಿ ಸರಕಾರ ಸಭೆ ನಡೆಸುವುದು ಸಂಪೂರ್ಣ ಪ್ರಜಾಪ್ರಭುತ್ವ ವಿರೋಧಿ ಕೆಲಸ. ಕಾಣದ ಕೈಗಳ ಆಸೆ ಆಮಿಷಗಳನ್ನು ಈಡೇರಿಸಲು ಸರಕಾರ ಭಾರಿ ಪ್ರಯತ್ನ ನಡೆಸಿದೆ ಎಂದು ಅವರು ಆರೋಪಿಸಿದರು.
ಸಿದ್ದರಾಮಯ್ಯ ಕಿಡಿಕಿಡಿ
ಬೆಳಗಾವಿ ಪ್ರವಾಸದಲ್ಲಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ರೆಸಾರ್ಟ್ ಸಂಸ್ಕೃತಿ ಹಾಗೂ ಪ್ರತಿಪಕ್ಷಗಳ ಬಾಯಿಗ ಬೀಗ ಹಾಕುವ ವಿವಾದಾತ್ಮಕ ಸುತ್ತೋಲೆ ಹೊರಡಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಯಡಿಯೂರಪ್ಪ ಅವರ ಸಚಿವ ಸಂಪುಟ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಲು ರೆಸಾರ್ಟ್ ಮೊರೆ ಹೋಗಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ. ಕಳೆದ ಮೂರು ದಶಕಗಳಿಂದ ಸಕ್ರಿಯ ರಾಜಕೀಯದಲ್ಲಿರುವ ನಾನು ಇಂತಹ ಪ್ರಜಾಪ್ರಭುತ್ವ ವಿರೋಧಿ ಸರಕಾರವನ್ನಂತೂ ನೋಡಿರಲಿಲ್ಲ ಎಂದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬರೀ ಸುಳ್ಳು ಹೇಳುತ್ತಾ ಕಾಲ ಕಳೆಯುವುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಸಂಪೂರ್ಣ ಪಾತಾಳ ಕಂಡಿದೆ ಎಂದು ಕಿಡಿಕಾರಿದರು.
ವಿರೋಧ ಪಕ್ಷಗಳ ನಾಯಕರ ಅಧಿಕಾರ ವ್ಯಾಪ್ತಿ ಕುರಿತು ಮುಖ್ಯಕಾರ್ಯದರ್ಶಿಗಳು ಹೊರಡಿಸಿರುವ ಸುತ್ತೋಲೆ ಪ್ರಜಾಪ್ರಭುತ್ವ ಸಮಾಧಿ ಮಾಡುವ ತಂತ್ರ. ಇದರ ವಿರುದ್ಧ ಅಧಿವೇಶನದಲ್ಲಿ ಪ್ರಶ್ನಿಸುವೆ ಎಂದು ಅವರು ಎಚ್ಚರಿಕೆ ನೀಡಿದರು.
ಆಂತರಿಕ ಬೇಗುದಿಗೆ ರೆಸಾರ್ಟ್ ಮೊರೆ: ದತ್ತ
ತಾನೇನು ಕಮ್ಮಿಯಿಲ್ಲ ಎಂಬಂತೆ ಸರಕಾರದ ವಿರುದ್ಧ ಮುಗಿಬಿದ್ದಿರುವ ಜೆಡಿಎಸ್, ರೆಸಾರ್ಟ್ ಸಭೆಗೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಮುಖಂಡ ವೈ ಎಸ್ ವಿ ದತ್ತ, ಬಿಜೆಪಿಯಲ್ಲಿ ಉಂಟಾಗಿರುವ ಆಂತರಿಕ ಬೇಗುದಿಯ ಶಮನಕ್ಕೆ ಸರಕಾರ ರೆಸಾರ್ಟ್ ಮೊರೆ ಹೋಗಿದೆ. ವಿಧಾನಸೌಧ, ವಿಕಾಸಸೌಧದಲ್ಲಿ ನಡೆಯಬೇಕಿದ್ದ ಸಭೆ ರೆಸಾರ್ಟ್ ತಂದು ನಿಲ್ಲಿಸಿದ ಖ್ಯಾತಿ ಯಡಿಯೂರಪ್ಪ ಅವರಿಗೆ ಸಲ್ಲಲಿದೆ. ರೆಸಾರ್ಟ್ ಸಭೆ ಕುರಿತು ಮುಖ್ಯಮಂತ್ರಿ ಸೂಕ್ತ ಉತ್ತರ ನೀಡಬೇಕು. ಈ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ದತ್ತಾ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications