'ಚೇಂಜ್ ಇಂಡಿಯಾ' ಆರ್ಕೆ ಮಿಶ್ರಾ ಬಿಜೆಪಿಗೆ

ಅಕ್ಷರಸ್ಥರು ರಾಜಕೀಯ ಸೇರಿದರೆ ದೇಶದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಸಾರುವ ಸಾಮಾಜಿಕ ಕಾರ್ಯಕರ್ತ ಆರ್ ಕೆ ಮಿಶ್ರಾ ಅವರು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ವಹಿಸಿರುವ ಅರುಣ್ ಜೇಟ್ಲಿ ಮತ್ತು ಅನಂತ್ ಕುಮಾರ್ ಅವರ ಸಮ್ಮುಖದಲ್ಲಿ, ಎನ್ಎಮ್ಕೆಆರ್ವಿ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಚೇಂಜ್ ಇಂಡಿಯಾ ಕರೆದಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅನಂತಕುಮಾರ್, ಇತ್ತೀಚೆಗೆ ಬುದ್ಧಿಜೀವಿಗಳು ಮತಚಲಾವಣೆಯಿಂದ ಹಿಂದೆ ಸರಿಯುತ್ತಿದ್ದಾರೆ. ಪ್ರಜಾತಂತ್ರವನ್ನು ಬಲಪಡಿಸಬೇಕೆಂದರೆ ಯುವಕರು ಮತ್ತು ಬುದ್ಧಿಜೀವಿಗಳು ಒಂದುಗೂಡಬೇಕು ಮತ್ತು ಮತ ಚಲಾಯಿಸಬೇಕು ಎಂದು ಅಭಿಪ್ರಾಯಪಟ್ಟರು.
ಬುದ್ಧಿಜೀವಿ, ಮೊತ್ತಮೊದಲ ಬಾರಿಗೆ ಮತಚಲಾಯಿಸುತ್ತಿರುವ ಯುವಕರು ಮತ್ತು ನೌಕರರನ್ನು ಸೆಳೆಯುವ ಮೂರು ಅಂಶಗಳ ಕಾರ್ಯಕ್ರಮವನ್ನು ಭಾರತೀಯ ಜನತಾ ಪಕ್ಷ ಹಮ್ಮಿಕೊಂಡಿದೆ. ಈ ಕಾರಣಕ್ಕಾಗಿ 'ಅಡ್ವಾಣಿ ಅಟ್ ಕ್ಯಾಂಪಸ್' ಎಂಬ ವಿನೂತನ ಕಾರ್ಯಕ್ರಮವನ್ನು ಬಿಜೆಪಿ ಪ್ರಾರಂಭಿಸಿದ್ದು, 10 ಕೋಟಿ ಹೊಸ ಮತದಾರರನ್ನು ಸೆಳೆಯುವುದು ಮೂಲ ಉದ್ದೇಶ ಎಂದು ಅನಂತ್ ಹೇಳಿದರು.
ನಂತರ ಮಾತನಾಡಿದ ಕರ್ನಾಟಕ ಉಸ್ತುವಾರಿ ವಹಿಸಿರುವ ಅರುಣ್ ಜೇಟ್ಲಿ, ರಾಜಕೀಯದಲ್ಲಿ ಬದಲಾವಣೆ ತರಬೇಕಾದರೆ ಇನ್ನೂ ಶ್ರಮವಹಿಸಿ ಕೆಲಸ ಮಾಡಬೇಕು. ಆರ್ ಕೆ ಮಿಶ್ರಾ ಅಂಥವರ ರಾಜಕೀಯ ಸೇರ್ಪಡೆ ರಾಷ್ಟ್ರದ ಪ್ರಜಾತಂತ್ರಕ್ಕೆ ಹೊಸ ಆಯಾಮ ನೀಡಲಿದೆ ಎಂದರು.
ರಾಜಕೀಯ ಸೇರಿದ ಉದ್ದೇಶವನ್ನು ಹೊರಗೆಡಹಿದ ಮಿಶ್ರಾ, ಮತದಾನದ ಸಾಂವಿಧಾನಿಕ ಹಕ್ಕನ್ನು ಚಲಾಯಿಸುವಂತೆ ಬುದ್ಧಿಜೀವಿಗಳನ್ನು ಮನವೊಲಿಸುವುದು ಮುಖ್ಯ ಗುರಿ ಎಂದರು. ಬುದ್ಧಿಜೀವಿಗಳು ಮತದಾನದಿಂದ ಹಿಂಜರಿಯುತ್ತಿದ್ದಾರೆ, ದೇಶದ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬನೂ ಭಾಗವಹಿಸುವಂತೆ ಜಾಗೃತಿ ಬೆಳೆಸುವುದೇ ಮೂಲಉದ್ದೇಶ ಎಂದು ಮಿಶ್ರಾ ನುಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications