ಪ್ರಾಣಿ ಬಲಿ ಪೂರ್ಣ ನಿಷೇಧ: ಡಿಸಿ ಮಣಿವಣ್ಣನ್
ಮೈಸೂರು, ಮಾ. 19 : ಕರ್ನಾಟಕ ಪ್ರಾಣಿಬಲಿ ನಿಷೇಧ ಕಾಯ್ದೆ 1956 ಹಾಗೂ ಕರ್ನಾಟಕ ಪ್ರಾಣಿ ಬಲಿ ನಿಷೇಧ ನಿಯಮಗಳು 1967ರ ರೀತಿ ಪ್ರಾಣಿ ಬಲಿಯನ್ನು ಸರ್ಕಾರವು ಸಂಪೂರ್ಣವಾಗಿ ನಿಷೇಧಿಸಿದೆ. ಎಲ್ಲ ಕಾಲಗಳಲ್ಲಿ ಹಾಗೂ ಎಲ್ಲ ಸಂದರ್ಭಗಳಲ್ಲಿ ಪ್ರಾಣಿ ಬಲಿ ನೀಡುವುದು ಮೇಲ್ಕಂಡ ಕಾಯ್ಕೆಯ ಉಲ್ಲಂಘನೆಯಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿಗಳೂ ಆದ ಜಿಲ್ಲಾ ದಂಡಾಧಿಕಾರಿ ಪಿ. ಮಣಿವಣ್ಣನ್ ತಿಳಿಸಿದ್ದಾರೆ.
ಮೇಲ್ಕಂಡ ಕಾಯಿದೆಗಳನ್ನು ಉಲ್ಲಂಘಿಸಿ ಪ್ರಾಣಿಬಲಿ ನೀಡಿದರೆ ಆರು ತಿಂಗಳವರೆಗೆ ವಿಸ್ತರಿಸಬಹುದಾದ ಅವಧಿಯ ಕಾರಾವಾಸ (ಜೈಲು) ಶಿಕ್ಷೆ ಹಾಗೂ ದಂಡ ಅಥವಾ ಇವೆರಡನ್ನೂ ನ್ಯಾಯಾಲಯವು ಶಿಕ್ಷೆಯಾಗಿ ನೀಡಬಹುದಾಗಿದೆ. ಆದ್ದರಿಂದ ಯಾವುದೇ ಸಾರ್ವಜನಿಕರು ಪ್ರಾಣಿಬಲಿನೀಡಿದಲ್ಲಿ ಅಂತಹವರ ವಿರುದ್ಧ ಮೇಲ್ಕಂಡ ಕಾಯಿದೆಯಡಿ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಕೆ.ಆರ್.ನಗರ ತಾಲ್ಲೂಕು ಕಪ್ಪಡಿ ಕ್ಷೇತ್ರದಲ್ಲಿ ನಡೆಯುತ್ತಿರುವ ಜಾತ್ರೆಯಲ್ಲಿ ಸಹ ಪ್ರಾಣಿಬಲಿ ಕೊಡುವುದು ಹಾಗೂ ಪ್ರಾಣಿಬಲಿಗೆ ಉತ್ತೇಜನ ನೀಡುವುದನ್ನು ಎಲ್ಲ ಕಾಲಕ್ಕೂ ನಿಷೇಧಿಸಿ ಆದೇಶ ಹೊರಡಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಜಾತ್ರೆ ಸಮಯದಲ್ಲಿ ಪ್ರಾಣಿಬಲಿ ನೀಡುವ ಉದ್ದೇಶಕ್ಕಾಗಿ ಪ್ರಾಣಿಗಳನ್ನು ಮತ್ತು ಮಾರಕ ಆಯುಧಗಳನ್ನು ತೆಗೆದುಕೊಂಡು ಹೋಗುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಪಶುಪಾಲನಾ ಇಲಾಖೆಯೂ ಸಹ ಈ ಕುರಿತು ಹಲವು ಬಾರಿ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಿದೆ. ಇಂತಹ ಪ್ರಾಣಿಬಲಿ ಕೊಡುವುದು ಸರ್ವೆ ಸಾಮಾನ್ಯವಾಗಿ ಜರುಗುತ್ತಲೇ ಬಂದಿರುತ್ತದೆ. ಆದ್ದರಿಂದ ಪ್ರಾಣಿಬಲಿ ಆಚರಣೆಯನ್ನು ಕೈಬಿಡುವುದರ ಮೂಲಕ ಈ ಹಾದಿಯಲ್ಲಿ ಇಲಾಖೆಯು ನಡೆಸುತ್ತಿರುವ ಪ್ರಯತ್ನಗಳಿಗೆ ಸಂಪೂರ್ಣವಾಗಿ ಸಹಕರಿಸುವಂತೆ ಕೋರಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications