ಪಿಂಕ್ ಚಡ್ಡಿ ಕಳುಹಿಸಿದವರಿಗೆ ಲೀಗಲ್ ನೋಟಿಸ್

ಪ್ರೇಮಿಗಳ ದಿನವನ್ನು ಪ್ರಮೋದ್ ಮುತಾಲಿಕ್ ನೇತೃತ್ವದ ಸಂಘಟನೆ ಶ್ರೀರಾಮಸೇನೆ ವಿರೋಧಿಸಿದ್ದರಿಂದ ಪತ್ರಕರ್ತೆ ನಿಶಾ ಸೂಸಾನ್ ಸೇರಿ ಸಾವಿರಾರು ಮಂದಿ ಅವರ ಮನೆಗೆ ಪಿಂಕ್ ಚಡ್ಡಿ ಕಳುಹಿಸಿ ಅವರನ್ನು ಅವಮಾನಗೊಳಿಸಿರುವುದು ವಿಷಾದಕರ ಸಂಗತಿ. ಈ ಕೆಲಸ ಬರೀ ಮುತಾಲಿಕ್ ಅವರಿಗೆ ಮಾತ್ರವಲ್ಲ, ಇಡೀ ಹಿಂದೂ ಸಂಸ್ಕೃತಿಗೆ ಅವಮಾನ ಮಾಡಿದಂತಾಗಿದೆ. ಇಂತಹ ಕೆಲಸದಿಂದ ಸಮಾಜಕ್ಕೆ ಯಾವ ಸಂದೇಶವನ್ನು ರವಾನಿಸದಂತಾಗುತ್ತದೆ ಎಂದು ಶ್ರೀ ರಾಮಸೇನೆ ಸಂಘಟನೆ ಪರ ವಕೀಲ ಜಿ ಡಿ ಕುಲಕರ್ಣಿ ಪ್ರಶ್ನಿಸಿದ್ದಾರೆ.
ಪ್ರಮೋದ್ ಮುತಾಲಿಕ್ ಮನೆಗೆ ಪಿಂಕ್ ಕಳುಹಿಸುವ ಅಭಿಯಾನ ಆರಂಭಿಸಿದ ಪತ್ರಕರ್ತೆ ಸೂಸಾನ್ ಸೇರಿ ಎಂಟು ಮಂದಿ ವಿರುದ್ಧ ಲೀಗಲ್ ನೋಟಿಸ್ ಕಳುಹಿಸಲಾಗಿದೆ. 15 ದಿನದೊಳಗೆ ಅವರು ಕ್ಷಮೆಯಾಚಿಸದಿದ್ದರೆ, ಅವರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಕುಲಕರ್ಣಿ ಸ್ಪಷ್ಟಪಡಿಸಿದ್ದಾರೆ. ಫೆ 14 ರಂದು ಆಚರಿಸುವ ಪ್ರೇಮಿಗಳ ದಿನಕ್ಕೆ ಮುತಾಲಿಕ್ ತೀವ್ರವಾಗಿ ವಿರೋಧಿಸಿದ್ದರು. ರಾಖಿ ಕಟ್ಟಿ, ಇಲ್ಲ ತಾಳಿ ಕಟ್ಟಿ ಅಭಿಯಾನ ಆರಂಭಿಸುವುದಾಗಿ ಹೇಳಿದ್ದರು. ಇದು ರಾಷ್ಟ್ರೀಯ ಸುದ್ದಿಯಾಗಿತ್ತು. ಮುತಾಲಿಕ್ ಕ್ರಮ ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಫೆ 13 ರಂದು ಮುತಾಲಿಕ್ ಅವರನ್ನು ಪೊಲೀಸರು ಬಂಧಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)
ಪಿಂಕ್ ಚಡ್ಡಿ ಆಯಿತು ಈಗ 'ಕಾಮಸೂತ್ರ ದಿನ'












Click it and Unblock the Notifications