Get Updates
Get notified of breaking news, exclusive insights, and must-see stories!

ಮನೆ ಬಿಟ್ಟು ಹೋಗುವ ಹೆಣ್ಮಕ್ಕಳು ಆ ನಂತರ ಏನಾಗುತ್ತಾರೆ? ಹುಡುಗಿಯರ ಕಣ್ಮರೆಗೆ ಕಾರಣಗಳೇನು..?

ಇತ್ತೀಚೆಗಿನ ದಿನಗಳಲ್ಲಿ ಮಹಿಳೆಯರ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮನೆಯಿಂದ ಹೊರ ಬಿದ್ದು ಪೊಲೀಸ್ ಠಾಣೆಗಳಲ್ಲಿ ನಾಪತ್ತೆ ಪ್ರಕರಣ ದಾಖಲಿಸಿಕೊಳ್ಳುವ ಮಹಿಳೆಯರು ಆ ನಂತರ ಏನಾಗುತ್ತಿದ್ದಾರೆ ಎಂಬುದು ಮಾತ್ರ ನಿಗೂಢವಾಗಿ ಉಳಿದು ಹೋಗುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಮರ್ಪಕ ಉತ್ತರಗಳು ದೊರಕದ ಕಾರಣದಿಂದಾಗಿ ನಮ್ಮ ಮುಂದೆ ಪ್ರಶ್ನೆಗಳಷ್ಟೇ ಉಳಿದು ಹೋಗಿವೆ.

ಇವತ್ತು ಫೇಸ್ ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳ ಮೂಲಕ ಹಲವರ ಪರಿಚಯವಾಗುತ್ತಿದ್ದು, ಪರಸ್ಪರ ಪರಿಚಯ ದಿನಕಳೆದಂತೆ ಹೊಸ ಸಂಬಂಧಗಳಿಗೂ ದಾರಿ ಮಾಡಿಕೊಡುತ್ತಿದೆ. ಈ ಕಾರಣಕ್ಕೆ ಈಗಾಗಲೇ ಹಲವು ಸಂಸಾರಗಳು ಬೀದಿಗೆ ಬಂದಿವೆ. ಹೊಸ ಪರಿಚಯದ ಆಕರ್ಷಣೆ ದಿನ ಕಳೆದಂತೆ ತೀರಾ ಹತ್ತಿರವಾಗಿ ಸಂಸಾರವನ್ನು ತ್ಯಜಿಸಿ ಹೊಸ ಸಂಬಂಧ ಕಟ್ಟಿಕೊಳ್ಳುವುದಕ್ಕೆ ಮುಂದಾಗುತ್ತಿರುವುದು ಹೊಸ ಬೆಳವಣಿಗೆಯಾಗಿದೆ.

What Are The Reasons For Girls Going Missing In Cities

ಹೆಣ್ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿರುವ ಕೆಲವು ದಂಧೆಕೋರರು ವಿದೇಶದಲ್ಲಿ ಉದ್ಯೋಗ ನೀಡುವ ಅಥವಾ ಮದುವೆಯಾಗುವ ಆಮಿಷವೊಡ್ಡಿ ಅವರನ್ನು ಮನೆಯಿಂದ ಹೊರಗೆ ಬರುವಂತೆ ಮಾಡುತ್ತಿದ್ದಾರೆ. ಈ ಪ್ರಕರಣಗಳಲ್ಲಿ ಯುವತಿಯರಿಗಿಂತ ಹೆಚ್ಚಾಗಿ ವಿವಾಹಿತ ಮಹಿಳೆಯರೇ ಯಾಮಾರುತ್ತಿರುವುದು ಕಂಡು ಬಂದಿದೆ. ಅಪರಿಚಿತರ ಬಣ್ಣದ ಮಾತಿಗೆ ಬಲಿಯಾಗಿ ಅವರನ್ನೇ ನಂಬಿ ತನ್ನ ಸಂಸಾರವನ್ನು ತ್ಯಜಿಸಿ ಹೊರ ಹೋಗುವವರ ಮುಂದಿನ ಬದುಕು ಏನಾಗುತ್ತಿದೆ ಎಂಬುದು ಇವತ್ತಿಗೂ ನಿಗೂಢವಾಗಿಯೇ ಉಳಿದು ಹೋಗಿದೆ.

ಹೆಣ್ಮಕ್ಕಳ ನಾಪತ್ತೆಗೆ ಹತ್ತಾರು ಕಾರಣಗಳು

ಇವತ್ತು ನಾಪತ್ತೆಯಾಗುವ ಹೆಣ್ಣು ಮಕ್ಕಳ ಪೈಕಿ ಹೆಚ್ಚಿನವರು ಬಡ ಕುಟುಂಬದವರೇ ಆಗಿರುತ್ತಾರೆ. ಹೀಗಾಗಿ ಮನೆಯಿಂದ ಹೆಣ್ಣುಮಗಳು ನಾಪತ್ತೆಯಾಗಿದ್ದಾಳೆ ಎನ್ನುವುದನ್ನು ಸಹಿಸಿಕೊಳ್ಳುವುದೇ ಆ ಕುಟುಂಬಕ್ಕೆ ಕಷ್ಟವಾಗಿದೆ. ಹೀಗಾಗಿ ಅವರು ಕಣ್ಣೀರು ಹಾಕುವುದನ್ನು ಬಿಟ್ಟರೆ ಬೇರೇನನ್ನು ಮಾಡಲು ಸಾಧ್ಯವಾಗುವುದಿಲ್ಲ. ಇನ್ನು ಕೆಲಸ ಹುಡುಕಿಕೊಂಡು ಹಳ್ಳಿಯಿಂದ ನಗರ ಸೇರುವ ಹೆಣ್ಣು ಮಕ್ಕಳು ಕೂಡ ಮೋಸ ಹೋಗುತ್ತಿದ್ದಾರೆ.

ಹೆಣ್ಣು ಮಕ್ಕಳ ನಾಪತ್ತೆ ಹಿಂದೆ ಹಲವು ಕಾರಣಗಳು ಇಲ್ಲದಿಲ್ಲ. ಬಹಳಷ್ಟು ಮಂದಿ ಬದುಕುವುದಕ್ಕೋಸ್ಕರ ಮನೆಯಿಂದ ಹೊರ ಬಂದರೆ, ಮತ್ತೆ ಕೆಲವರು ಪ್ರೀತಿ ಸಿಗದೆ ಕೌಟುಂಬಿಕ ಕಲಹಗಳಿಂದ ಬೇಸತ್ತು ಹೊರ ಬರುತ್ತಾರೆ. ಮತ್ತೆ ಕೆಲವರು ಪ್ರೀತಿಗೋಸ್ಕರ, ಪ್ರಿಯಕರನಿಗಾಗಿ, ಕೆಲಸ ಸಿಗುತ್ತದೆ ಎಂಬ ಉದ್ದೇಶದಿಂದಲೂ ಬರುತ್ತಾರೆ. ಹೀಗೆ ಬೇರೆ, ಬೇರೆ ಉದ್ದೇಶದಿಂದಲೇ ಬಂದಿದ್ದರೂ ಅವರನ್ನು ಬಳಸಿಕೊಂಡು ಹಣಮಾಡುವುದಷ್ಟೇ ದಂಧೆಕೋರರ ಕೆಲಸವಾಗಿರುವ ಕಾರಣದಿಂದ ತಮ್ಮ ಕೆಲಸವನ್ನು ಸುಲಭವಾಗಿಯೇ ಮಾಡಿ ಮುಗಿಸಿಬಿಡುತ್ತಾರೆ.

ಸಕ್ರಿಯವಾಗಿರುವ ವೇಶ್ಯಾವಾಟಿಕೆ ಜಾಲ

ಮಹಿಳೆಯರ ನಾಪತ್ತೆ ಪ್ರಕರಣದಲ್ಲಿ ವೇಶ್ಯಾವಾಟಿಕೆಗೆ ನೂಕುವ ಜಾಲವೇ ದೊಡ್ಡಮಟ್ಟದಲ್ಲಿ ಕೆಲಸ ಮಾಡುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಲ್ಲಿ ಸಿಕ್ಕಿಬೀಳುವವರು ಅದರಿಂದ ಬಿಡಿಸಿಕೊಂಡು ಬರುವುದು ಸುಲಭವಾಗಿ ಉಳಿದಿಲ್ಲ. ಸಾಮಾನ್ಯವಾಗಿ ಮನೆಬಿಟ್ಟು ಹೋಗುವ ಮನಸ್ಸು ಮಾಡುವವರು ಕುಟುಂಬದಲ್ಲಿ ಯಾರಿಗೂ ಮಾಹಿತಿ ನೀಡಿರುವುದಿಲ್ಲ. ಹೀಗಾಗಿ ಕುಟುಂಬದಲ್ಲಿ ಯಾರೇ ನಾಪತ್ತೆಯಾದರೂ ಸಹ ಇಡೀ ಕುಟುಂಬ ಆರ್ಥಿಕವಾಗಿ, ಸಾಮಾಜಿಕವಾಗಿ ಸಂಕಷ್ಟಕ್ಕೊಳಗಾಗುತ್ತದೆ. ಮನೆಯಲ್ಲಿ ಯಾರೇ ನಾಪತ್ತೆಯಾದರೂ ಆ ಕುಟುಂಬದ ಸದಸ್ಯರು ಮೊದಲು ತಮ್ಮ ನೆಂಟರು, ಬಂಧು-ಬಳಗ, ಸ್ನೇಹಿತರ ಮನೆಗಳಲ್ಲಿ ವಿಚಾರಿಸಿ, ಹುಡುಕಾಡಿ ಅಂತಿಮವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುತ್ತಾರೆ.

ಅಷ್ಟರಲ್ಲೇ ನಾಪತ್ತೆಯಾದ ಮಹಿಳೆ ಕುರಿತಂತೆ ಇಲ್ಲಸಲ್ಲದ ಗಾಳಿ ಸುದ್ದಿ ಹರಿದಾಡುವುದಲ್ಲದೆ, ಕುಟುಂಬವನ್ನು ಕೆಟ್ಟದಾಗಿ ನೋಡಲು ಜನ ಆರಂಭಿಸಿರುತ್ತಾರೆ. ಇದರ ನಡುವೆ ಪೊಲೀಸರು ತಮ್ಮ ಕೆಲಸಗಳನ್ನು ಮುಗಿಸಿ ಹುಡುಕಾಟ ನಡೆಸುವ ವೇಳೆಗೆ ಅತ್ತ ನಾಪತ್ತೆಯಾದವರು ತಾವು ಮೋಸ ಹೋಗಿದ್ದೇವೆ ಎಂಬುದು ಗೊತ್ತಾದರೂ ಅತ್ತ ಮರಳಿಗೆ ಮನೆಗೆ ಹೋಗುವಂತೆಯೂ ಇರದೆ, ಇತ್ತ ಪೊಲೀಸರ ಬಳಿ ಹೋಗುವ ಧೈರ್ಯವೂ ಬಾರದೆ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಹೋಗಿಬಿಡುತ್ತಾರೆ.

ಮನೆ ಬಿಡುವ ಮುನ್ನ ನೂರು ಸಲ ಯೋಚಿಸಿ

ಸಾಮಾನ್ಯವಾಗಿ ನಾಪತ್ತೆ ಪ್ರಕರಣದಲ್ಲಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿಕೊಳ್ಳುವ ಪೊಲೀಸರು ರಾಜ್ಯದ ಪ್ರತಿ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುತ್ತಾರೆ. ರಾಜ್ಯ ಹಾಗೂ ಕೆಲ ಹೊರರಾಜ್ಯಗಳ ಬಸ್, ರೈಲು ನಿಲ್ದಾಣಗಳಲ್ಲಿ ಹಾಗೂ ಪ್ರಮುಖ ಸ್ಥಳಗಳಲ್ಲಿ ಅವರ ಫೋಟೋ ಸಹಿತ ಹೆಸರು, ವಿಳಾಸವಿರುವ ಕರಪತ್ರಗಳನ್ನು ಅಂಟಿಸುತ್ತಾರೆ. ಪತ್ರಿಕೆಗಳಿಗೆ ಮಾಹಿತಿ ನೀಡುತ್ತಾರೆ. ಒತ್ತಡದ ಕೆಲಸದ ನಡುವೆ ಒಂದಷ್ಟು ಹುಡುಕಾಟ ನಡೆಸುತ್ತಾರೆಯಾದರೂ ಕೆಲವೊಮ್ಮೆ ಅದು ಅಲ್ಲಿಗೆ ನಿಂತು ಹೋಗಿ ಬಿಡುತ್ತದೆ.

ಇನ್ನಾದರೂ ಈ ವಿಚಾರದಲ್ಲಿ ಹೆಣ್ಮಕ್ಕಳು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಹಲವು ಕಾರಣಗಳನ್ನಿಟ್ಟುಕೊಂಡು ಮನೆಬಿಟ್ಟು ಹೋಗುವ ಹೆಣ್ಮಕ್ಕಳು ಸ್ವಲ್ಪ ಯೋಚಿಸಿ ಮುಂದಿನ ಹೆಜ್ಜೆಯಿಡಬೇಕಾಗುತ್ತದೆ. ಯಾರನ್ನೋ ನಂಬಿ ಹೋಗುವ ಮುನ್ನ ನೂರು ಸಲ ಯೋಚನೆ ಮಾಡಿ, ಆಮಿಷ, ಬಣ್ಣದ ಮಾತಿಗೆ ಮರುಳಾದರೆ ಜೀವನ ಪೂರ್ತಿ ನರಕಯಾತನೆ ಅನುಭವಿಸಬೇಕಾಗುತ್ತದೆ ಅಥವಾ ಜೀವವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಅರಿತುಕೊಂಡರೆ ನಮ್ಮ ಬದುಕು ನಮ್ಮಿಂದಲೇ ನರಕವಾಗುವುದನ್ನು ತಡೆಯಲು ಸಾಧ್ಯವಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+