KPSC Recruitment; ಅಭ್ಯರ್ಥಿಗಳಿಗೆ ಮಹತ್ವದ ಸೂಚನೆ, ವಿವರ
ಬೆಂಗಳೂರು, ನವೆಂಬರ್ 20: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನೇಮಕಾತಿ ವಿಚಾರದಲ್ಲಿ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯೊಂದಿದೆ. ಹೊಸ ಸಾಫ್ಟ್ವೇರ್ ಒಂದನ್ನು ಅಭಿವೃದ್ಧಿಗೊಳಿಸಲಾಗಿದ್ದು, ಅಭ್ಯರ್ಥಿಗಳು ಒಂದು ಬಾರಿ ನೋಂದಣಿ ಮಾಡಿಕೊಂಡು ಪ್ರೊಫೈಲ್ ಕ್ರಿಯೇಟ್ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಒಮ್ಮೆ ದಾಖಲೆಗಳನ್ನು ಅಪ್ಲೋಡ್ ಮಾಡಿದರೆ ಸಾಕಾಗುತ್ತದೆ.
ವಿವಿಧ ಸ್ಮರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಕೆಪಿಎಸ್ಸಿ ಪ್ರತಿ ಬಾರಿ ಅರ್ಜಿ ಕರೆದಾಗಲೂ ಅಭ್ಯರ್ಥಿಗಳು ದಾಖಲೆಗಳನ್ನು ಅಪ್ಲೋಡ್ ಮಾಡುವ ತೊಂದರೆ ನಿವಾರಿಸಲು ಮುಂದಾಗಿದೆ. ಇದಕ್ಕಾಗಿ 'ಕೆಪಿಎಸ್ಸಿ ಉದ್ಯೋಗ' ಎಂಬ ತಂತ್ರಾಂಶವನ್ನು ರೂಪಿಸಲಾಗಿದೆ.

ಪ್ರತಿ ಬಾರಿ ಯಾವುದೇ ಹುದ್ದೆಗೆ ಅರ್ಜಿ ಕರೆದಾಗಲೂ ಅಭ್ಯರ್ಥಿಗಳು ದಾಖಲೆಗಳನ್ನು ಸಲ್ಲಿಸಬೇಕಿಲ್ಲ. ಅಭ್ಯರ್ಥಿಗಳು ತಮ್ಮ ಪ್ರೊಫೈಲ್ ಕ್ರಿಯೇಟ್ ಮಾಡಿಕೊಡು ಅಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡಬಹುದು. ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ಅಲ್ಲಿಂದಲೇ ಲಗತ್ತಿಸುವ ವ್ಯವಸ್ಥೆ ಮಾಡಲಾಗಿದೆ.
ಅಭ್ಯರ್ಥಿಗಳಿಗೆ ಅನುಕೂಲ; ಕೆಪಿಎಸ್ಸಿಯ ಕಾರ್ಯದರ್ಶಿ ಕೆ. ಎಸ್. ಲತಾ ಕುಮಾರಿ ಈ ಕುರಿತು ಮಾಹಿತಿ ನೀಡಿದ್ದಾರೆ. "ದಾಖಲೆಗಳನ್ನು ಸಲ್ಲಿಕೆ ಮಾಡುವುದನ್ನು ಸರಳೀಕರಣಗೊಳಿಸಲಾಗಿದೆ. ಕೆಪಿಎಸ್ಸಿ ಉದ್ಯೋಗ್ ತಂತ್ರಾಂಶದ ಮೂಲಕ ಒಂದು ಬಾರಿ ನೋಂದಣಿ ಮಾಡಿ, ದಾಖಲೆಗಳನ್ನು ಅಪ್ಲೋಡ್ ಮಾಡಿದರೆ ಸಾಕು" ಎಂದು ಹೇಳಿದ್ದಾರೆ.
ಅಭ್ಯರ್ಥಿಗಳು ಪ್ರೊಫೈಲ್ ಕ್ರಿಯೇಟ್ ಮಾಡಿದಾಗ ಅವರಿಗೆ ಒಂದು ಬಾರಿ ನೋಂದಣಿ (ಒಟಿಆರ್) ನಂಬರ್ ಸಿಗುತ್ತದೆ. ಪ್ರೊಫೈಲ್ನಲ್ಲಿ ಶೈಕ್ಷಣಿಕ ಸೇರಿದಂತೆ ವಿವಿಧ ದಾಖಲೆ, ಅವುಗಳ ನಂಬರ್ ಅಪ್ಲೋಡ್ ಮಾಡಬೇಕು. ಮುಂದಿನ ಬಾರಿ ಅರ್ಜಿ ಸಲ್ಲಿಕೆ ಮಾಡುವಾಗ ಒಟಿಆರ್ ಸಂಖ್ಯೆ ಮೂಲಕ ಲಾಗಿನ್ ಆಗಿ, ಆಯಾ ಹುದ್ದೆಗೆ ನಿಗದಿಪಡಿಸಿದ ದಾಖಲೆಗಳನ್ನು ಪ್ರೊಫೈಲ್ ಮೂಲಕವೇ ನೇರವಾಗಿ ಅಪ್ಲೋಡ್ ಮಾಡಬಹುದಾಗಿದೆ.
ಜಾತಿ ಪ್ರಮಾಣ ಪತ್ರ ಸೇರಿದಂತೆ ಕೆಲವು ದಾಖಲೆಗಳಿಗೆ ಕಾಲಾವಧಿ ಇರುತ್ತದೆ. ಇಂತಹ ದಾಖಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ದಾಖಲೆಗಳನ್ನು ತಮ್ಮ ಪ್ರೊಫೈಲ್ನಲ್ಲಿ ಅಭ್ಯರ್ಥಿಗಳು ಅಪ್ಲೋಡ್ ಮಾಡಬಹುದು. ಇದರಿಂದಾಗಿ ಪ್ರತಿ ಬಾರಿ ಅರ್ಜಿ ಸಲ್ಲಿಕೆ ಮಾಡುವಾಗ ದಾಖಲೆಗಳ ಅಪ್ಲೋಡ್ಗೆ ವ್ಯಯಿಸುವ ಸಮಯ ಉಳಿತಾಯವಾಗಲಿದೆ.
ಎಸ್ಎಸ್ಎಲ್ಸಿ, ಪಿಯುಸಿ, ಪದವಿ ಪ್ರಮಾಣ ಪತ್ರಗಳು ಸೇರಿ ಅಭ್ಯರ್ಥಿಗಳು ಅಪ್ಲೋಡ್ ಮಾಡುವ ದಾಖಲೆಗೆ ನಂಬರ್ಗಳನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ದಾಖಲೆಗಳ ನೋಂದಣಿ ಸಂಖ್ಯೆ ನಮೂದು ಮಾಡಿದರೆ ದಾಖಲೆ ಅಪ್ಲೋಡ್ ಆಗುವಂತೆ ತಂತ್ರಾಂಶ ಅಭಿವೃದ್ಧಿಗೊಳಿಸಲಾಗಿದೆ.
ಕೆಪಿಎಸ್ಸಿ ವರ್ಷಪೂರ್ತಿ ವಿವಿಧ ಇಲಾಖೆಗಳ ನೇಮಕಾತಿಗಳನ್ನು ಮಾಡುತ್ತದೆ. ಆದ್ದರಿಂದ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡುತ್ತದೆ. ಇಂತಹ ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡಲು ಸಮಯ ವ್ಯರ್ಥವಾಗುತ್ತಿತ್ತು. ಇದನ್ನು ಪರಿಹರಿಸಲು ಸಾಫ್ಟ್ವೇರ್ ಅಭಿವೃದ್ಧಿಗೊಳಿಸಲಾಗಿದೆ. ಇದರಿಂದಾಗಿ ಮುಖ್ಯವಾಗಿ ಗ್ರಾಮೀಣ ಅಭ್ಯರ್ಥಿಗಳಿಗೆ ಸಹಾಯಕವಾಗಲಿದೆ.
ಸರ್ವರ್ ಸಮಸ್ಯೆ, ಇಂಟರ್ನೆಟ್ ಇಲ್ಲ, ವಿದ್ಯುತ್ ಸಂಪರ್ಕ ಇಲ್ಲ ಹೀಗೆ ವಿವಿಧ ಕಾರಣಗಳಿಂದ ಗ್ರಾಮೀಣ ಪ್ರದೇಶದ ಉದ್ಯೋಗಾಕಾಂಕ್ಷಿಗಳು ದಾಖಲೆಗಳನ್ನು ಅಪ್ಲೋಡ್ ಮಾಡಲು ಸಮಯ ವ್ಯರ್ಥವಾಗುತ್ತಿತ್ತು. ಆದರೆ ಈಗ ಪ್ರೊಫೈಲ್ ಕ್ರಿಯೇಟ್ ಮಾಡಿ ಅಲ್ಲಿ ದಾಖಲೆ ಅಪ್ಲೋಡ್ ಮಾಡಿದರೆ ಸಮಯ ಉಳಿತಾಯವಾಗಲಿದೆ.
ಕರ್ನಾಟಕದ ಸರ್ಕಾರದ ವಿವಿಧ ಇಲಾಖೆಗಳು, ವಿವಿಧ ವೃಂದದ ಭರ್ತಿ ಮಾಡಬೇಕಾದ ಹುದ್ದೆಗಳ ಪ್ರಸ್ತಾವನೆಯನ್ನು ಕೆಪಿಎಸ್ಸಿಗೆ ಕಳಿಸುತ್ತದೆ. ಈ ಮಾದರಿ ಒಟ್ಟು 2 ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಬಾಕಿ ಇದೆ. 2023ರಲ್ಲಿ ಬಾಕಿ ಇರುವ, ಇಲಾಖಾವಾರು ಹುದ್ದೆಗಳ ವಿವರಗಳನ್ನು ಕೆಪಿಎಸ್ಸಿ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ.
ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಮುಂದಿನ ವರ್ಷ ಈ ನೇಮಕಾತಿಯನ್ನು ನಿರೀಕ್ಷೆ ಮಾಡಬಹುದು. ಸರ್ಕಾರ, ಆರ್ಥಿಕ ಇಲಾಖೆ ಒಪ್ಪಿಗೆ ಸಿಕ್ಕ ತಕ್ಷಣ ನೇಮಕಾತಿ ಅಧಿಸೂಚನೆಯನ್ನು ಕೆಪಿಎಸ್ಸಿ ಪ್ರಕಟಿಸುತ್ತದೆ.












Click it and Unblock the Notifications