ಸುಪ್ರೀಂಕೋರ್ಟ್‌ನಲ್ಲಿ ಜೈಶಂಕರ್ ರಾಜ್ಯಸಭೆ ಸದಸ್ಯತ್ವ ಹೋರಾಟ: ಏನಿದು ವಿವಾದ?

ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ತಮ್ಮ ರಾಜ್ಯಸಭೆ ಸದಸ್ಯತ್ವವನ್ನು ಉಳಿಸಿಕೊಳ್ಳಲು ಕಾನೂನು ಹೋರಾಟ ನಡೆಸುತ್ತಿದ್ದಾರೆ. 2019ರಲ್ಲಿ ಗುಜರಾತ್‌ನಿಂದ ಮೇಲ್ಮನೆಗೆ ಅವರು ಆಯ್ಕೆಯಾಗಿದ್ದರು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಅವರ ರಾಜೀನಾಮೆಯಿಂದ ರಾಜ್ಯಸಭೆ ಸದಸ್ಯತ್ವಗಳು ತೆರವುಗೊಂಡಿದ್ದವು. ಈ ಎರಡು ಸೀಟುಗಳಿಗೆ ಪ್ರತ್ಯೇಕ ಚುನಾವಣೆ ನಡೆಸಿದ ಚುನಾವಣಾ ಆಯೋಗದ ನಿರ್ಧಾರವನ್ನು ಸಮರ್ಥಿಸಿಕೊಂಡು ಜೈಶಂಕರ್ ಹೋರಾಟ ನಡೆಸಿದ್ದಾರೆ.

ಕಳೆದ ವರ್ಷ ರಾಜ್ಯಸಭೆಗೆ ತಮ್ಮನ್ನು ಆಯ್ಕೆ ಮಾಡಿದ ಪ್ರಕ್ರಿಯೆಯಲ್ಲಿ ಯಾವುದೇ ನಿಯಮದ ಉಲ್ಲಂಘನೆಯಾಗಿಲ್ಲ ಎಂದು ಜೈಶಂಕರ್ ಅವರು ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ನವೆಂಬರ್ 18ರಂದು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಅವರ ನೇತೃತ್ವದ ನ್ಯಾಯಪೀಠ ಅವರಿಗೆ ನೋಟಿಸ್ ನೀಡಿತ್ತು.

ಅಮೆರಿಕ ಮತ್ತು ಚೀನಾದೆಡೆಗಿನ ಭಾರತದ ನೀತಿಗಳನ್ನು ರೂಪಿಸುವುದರಲ್ಲಿ ಹಲವು ವರ್ಷ ಪ್ರಮುಖ ಪಾತ್ರ ವಹಿಸಿದ್ದ ಸುಬ್ರಮಣ್ಯಂ ಜೈಶಂಕರ್ ಅವರು 2018ರಲ್ಲಿ ಭಾರತೀಯ ವಿದೇಶಾಂಗ ಸೇವೆಯಿಂದ ನಿವೃತ್ತರಾಗಿದ್ದರು. ಟಾಟಾ ಸನ್ಸ್ ಕಂಪೆನಿಯಲ್ಲಿ ಕೆಲ ಸಮಯ ಕೆಲಸ ಮಾಡಿದ ಅವರನ್ನು 2019ರ ಚುನಾವಣೆಯಲ್ಲಿ ನರೇಂದ್ರ ಮೋದಿ ಸರ್ಕಾರ ಎರಡನೆಯ ಅವಧಿಗೆ ಆಯ್ಕೆಯಾದಾಗ ವಿದೇಶಾಂಗ ವ್ಯವಹಾರಗಳ ಸಚಿವರನ್ನಾಗಿ ನೇಮಿಸಿತ್ತು. ಮುಂದೆ ಓದಿ.

ಸದಸ್ಯತ್ವ ಹೊಂದಿರದ ಜೈಶಂಕರ್

ಸದಸ್ಯತ್ವ ಹೊಂದಿರದ ಜೈಶಂಕರ್

ಎಸ್. ಜೈಶಂಕರ್ ಅವರು ಸಚಿವರಾಗುವ ವೇಳೆ ಲೋಕಸಭೆ ಅಥವಾ ರಾಜ್ಯಸಭೆಯ ಸದಸ್ಯರಾಗಿರಲಿಲ್ಲ. ಆದರೆ ಅವರನ್ನು ರಾಜ್ಯಸಭೆಯಿಂದ ಆಯ್ಕೆ ಮಾಡುವುದು ಸರ್ಕಾರದ ಉದ್ದೇಶವಾಗಿತ್ತು. ರಾಜ್ಯಸಭೆ ಸಂಸದರಾಗಿದ್ದ ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಇಬ್ಬರೂ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದರಿಂದ ತಮ್ಮನ್ನು ಗುಜರಾತ್‌ನಿಂದ ಆಯ್ಕೆ ಮಾಡಲಾಗಿದ್ದ ರಾಜ್ಯಸಭೆ ಸದಸ್ಯತ್ವಗಳನ್ನು ತೆರವುಗೊಳಿಸಿದ್ದರು.

ಎರಡು ಪ್ರತ್ಯೇಕ ಚುನಾವಣೆ

ಎರಡು ಪ್ರತ್ಯೇಕ ಚುನಾವಣೆ

2019ರ ಮೇ ತಿಂಗಳಲ್ಲಿ ಇಬ್ಬರೂ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ಎರಡು ಸ್ಥಾನಗಳಿಗೆ ಜುಲೈ 5ರಂದು ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿತ್ತು. ಎರಡು ಸೀಟುಗಳಿಗೆ ಅದು ಪ್ರತ್ಯೇಕವಾಗಿ ಚುನಾವಣೆಗಳನ್ನು ನಡೆಸಿತ್ತು. ಇದರ ಅರ್ಥ ಇಬ್ಬರು ಅಭ್ಯರ್ಥಿಗಳಿಗೆ ಶಾಸಕರು ಎರಡು ಪ್ರತ್ಯೇಕ ಚುನಾವಣೆಗಳಲ್ಲಿ ಮತದಾನ ಮಾಡಬೇಕಿತ್ತು. ಎರಡರಲ್ಲಿಯೂ ಬಿಜೆಪಿ ಅಭ್ಯರ್ಥಿಗಳಾದ ಎಸ್ ಜೈಶಂಕರ್ ಮತ್ತು ಜುಗಲ್ಜಿ ಠಾಕೂರ್ ತಲಾ 104 ಮತಗಳೊಂದಿಗೆ ಜಯಗಳಿಸಿದ್ದರು.

ಜೈಶಂಕರ್ ಮತ್ತು ಠಾಕೂರ್ ಅವರು ತಮ್ಮ ಎದುರಾಳಿಗಳಾದ ಕಾಂಗ್ರೆಸ್ ನಾಮನಿರ್ದೇಶಿತ ಚಂದ್ರಿಕಾಬೆನ್ ಚೂಡಾಸಮ ಮತ್ತು ಪರೇಶ್ ಕುಮಾರ್ ಧನಾನಿ ಅವರನ್ನು ಮಣಿಸಿದ್ದರು. ಆಗ ಕಾಂಗ್ರೆಸ್‌ನಲ್ಲಿದ್ದ ಶಾಸಕರಾದ ಅಲ್ಪೇಶ್ ಠಾಕೂರ್ ಮತ್ತು ಧವಳ್ ಝಲ ಇಬ್ಬರೂ ಅಡ್ಡ ಮತದಾನ ಮಾಡಿದ್ದು ಸುದ್ದಿಯಾಗಿತ್ತು. ಮುಂದೆ ಇಬ್ಬರೂ ಕಾಂಗ್ರೆಸ್ ಪಕ್ಷವನ್ನು ತೊರೆದರು.

ಒಂದೇ ಮತದಾನ ನಡೆಯಬೇಕಿತ್ತು

ಒಂದೇ ಮತದಾನ ನಡೆಯಬೇಕಿತ್ತು

ಎರಡೂ ಸೀಟುಗಳ ಚುನಾವಣೆ ಒಟ್ಟಿಗೆ ನಡೆದಿದ್ದರೆ ತಾನೇ ಗೆಲ್ಲುತ್ತಿದ್ದುದ್ದಾಗಿ ಕಾಂಗ್ರೆಸ್ ಹೇಳಿದೆ. ರಾಜ್ಯಸಭೆ ಚುನಾವಣೆಯು ವರ್ಗಾವಣೆಗೊಳ್ಳುವ ಏಕ ಮತದ ಆಧಾರದಲ್ಲಿ ನಡೆದಿತ್ತು. ಇದರ ಅರ್ಥ ಶಾಸಕರು ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಬೇಕೆಂದಿದ್ದರೆ ತಮ್ಮ ಆದ್ಯತೆಯ ಪಟ್ಟಿಯನ್ನು ನೀಡಬೇಕಾಗುತ್ತಿತ್ತು. ಪ್ರತ್ಯೇಕವಾಗಿ ಚುನಾವಣೆಗಳು ನಡೆದಿದ್ದು ಕಾಂಗ್ರೆಸ್‌ನ ಗೆಲುವಿನ ಅವಕಾಶಗಳನ್ನು ಕೈತಪ್ಪಿಸಿತು.

ಸಂವಿಧಾನದ ನಿಯಮ ಉಲ್ಲಂಘನೆ

ಸಂವಿಧಾನದ ನಿಯಮ ಉಲ್ಲಂಘನೆ

ಇದರ ವಿರುದ್ಧ ಕಾಂಗ್ರೆಸ್ ಮುಖಂಡರು ಮೊದಲು ಗುಜರಾತ್ ಹೈಕೋರ್ಟ್ ಮತ್ತು ಬಳಿಕ ಸುಪ್ರೀಂಕೋರ್ಟ್‌ಗಳಲ್ಲಿ ಹಲವು ಅರ್ಜಿಗಳನ್ನು ಸಲ್ಲಿಸಿದ್ದರು. ಈ ಚುನಾವಣೆಯು 1951ರ ಜನಪ್ರತಿನಿಧಿ ಕಾಯ್ದೆ, 1961ರ ಚುನಾವಣಾ ನಿಯಮಗಳ ಸಂಹಿತೆಗಳ ಸಂವಿಧಾನದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಚೂಡಾಸಮ ಮತ್ತು ಧನಾನಿ ಅವರು ಠಾಕೂರ್ ಅವರ ಆಯ್ಕೆಯನ್ನು ಪ್ರಶ್ನಿಸಿದ್ದರೆ, ಮತ್ತೊಬ್ಬ ಕಾಂಗ್ರೆಸ್ ಮುಖಂಡ ಗೌರವ್ ಪಾಂಡ್ಯ ಅವರು ಎಸ್ ಜೈಶಂಕರ್ ಆಯ್ಕೆಯು ಸಂವಿಧಾನಕ್ಕೆ ಅನುಗುಣವಾಗಿ ಕಾನೂನಾತ್ಮಕವಾಗಿಲ್ಲ ಎಂದು ಆರೋಪಿಸಿದ್ದಾರೆ. ರಾಜ್ಯಸಭೆಗೆ ಎರಡು ಪ್ರತ್ಯೇಕ ಚುನಾವಣೆಗಳನ್ನು ನಡೆಸುವ ಚುನಾವಣಾ ಆಯೋಗದ ಆದೇಶ ನಿಯಮಗಳ ಉಲ್ಲಂಘನೆ ಎಂದು ವಾದಿಸಿದ್ದಾರೆ.

ವಜಾಗೊಳಿಸಿದ್ದ ಹೈಕೋರ್ಟ್

ವಜಾಗೊಳಿಸಿದ್ದ ಹೈಕೋರ್ಟ್

ಪ್ರತ್ಯೇಕ ಚುನಾವಣೆಗಳನ್ನು ನಡೆಸುವುದು ಚುನಾವಣಾ ಆಯೋಗದ ಅಧಿಕಾರ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಗುಜರಾತ್ ಹೈಕೋರ್ಟ್ ಫೆಬ್ರವರಿಯಲ್ಲಿ ಮೂರು ಅರ್ಜಿಗಳನ್ನು ವಜಾಗೊಳಿಸಿತ್ತು. ಜನಪ್ರತಿನಿಧಿ ಕಾಯ್ದೆಯ ನಿಯಮಗಳ ಅಡಿಯಲ್ಲಿ ಚುನಾವಣೆಯು ಅಕ್ರಮ ಎಂದು ಹೇಳಲು ಕಾರಣವನ್ನು ಬಹಿರಂಗಪಡಿಸಲು ಅರ್ಜಿದಾರರು ವಿಫಲರಾಗಿದ್ದಾರೆ ಎಂದು ಹೈಕೋರ್ಟ್ ಹೇಳಿತ್ತು. ಸಾಮಾನ್ಯವಾಗಿ ತೆರವಾದ ಸ್ಥಾನಗಳನ್ನು ತುಂಬಲು ಚುನಾವಣಾ ಆಯೋಗವು ಒಂದೇ ಚುನಾವಣೆ ನಡೆಸಬೇಕೆಂಬ ನಿಯಮ ಸಂವಿಧಾನದ ಜನಪ್ರತಿನಿಧಿ ಕಾಯ್ದೆಯ ಯಾವ ಭಾಗದಲ್ಲಿದೆ ಎಂದು ತೋರಿಸಲು ಕೂಡ ಅವರು ವಿಫಲರಾಗಿದ್ದಾರೆ ಎಂದು ತಿಳಿಸಿತ್ತು.

ಇದು ಮೊದಲ ಸಲವೇನಲ್ಲ

ಇದು ಮೊದಲ ಸಲವೇನಲ್ಲ

ರಾಜ್ಯಸಭೆಯಲ್ಲಿ ಸಾಮಾನ್ಯವಾಗಿ ತೆರವಾಗುವ ಸ್ಥಾನಗಳಿಗೆ ಉಪ ಚುನಾವಣೆಗಳನ್ನು ನಡೆಸುವಾಗ ಎರಡು ಸೀಟುಗಳಿಗೆ 2009ರಿಂದಲೂ ಚುನಾವಣಾ ಆಯೋಗ ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸುತ್ತಿದೆ ಎಂದು ಜೈಶಂಕರ್ ಮತ್ತು ಠಾಕೂರ್ ವಾದಿಸಿದ್ದರು. ಎರಡು ವಿಭಿನ್ನ ವರ್ಗಗಳ ಉಪ ಚುನಾವಣೆಗೆ ಪ್ರತ್ಯೇಕವಾಗಿ ಚುನಾವಣೆ ನಡೆಸಿದ್ದ ತಪ್ಪು ಎಂಬ ಕಾಂಗ್ರೆಸ್ ವಾದವನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಇದರ ವಿರುದ್ಧ ಅರ್ಜಿದಾರರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಪಾಂಡ್ಯ ಅವರ ಪರವಾಗಿ ನವೆಂಬರ್‌ನಲ್ಲಿ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ಜೈಶಂಕರ್ ಮತ್ತು ಠಾಕೂರ್ ಅವರ ಆಯ್ಕೆಯನ್ನು ಪ್ರಶ್ನಿಸಿದ್ದರು. ಏಕಕಾಲಕ್ಕೆ ತೆರವಾದ ಎರಡು ಸ್ಥಾನಗಳಿಗೆ ಪ್ರತ್ಯೇಕ ಚುನಾವಣೆಗಳನ್ನು ನಡೆಸಿದ ಚುನಾವಣಾ ಆಯೋಗವು ಮಹತ್ವದ ಕಾನೂನಾತ್ಮಕ ಪ್ರಶ್ನೆ ಎಂದಿದ್ದರು.

ಅಧಿಕೃತ ತೀರ್ಪು ಪ್ರಕಟ

ಅಧಿಕೃತ ತೀರ್ಪು ಪ್ರಕಟ

ಒಂದು ಸ್ಥಾನಕ್ಕಿಂತ ಅಧಿಕ ಸ್ಥಾನಗಳಿರುವಾಗ ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ಚುನಾವಣೆ ನಡೆಸುವ ಸಂಬಂಧ ಸುಪ್ರೀಂಕೋರ್ಟ್ ಇದುವರೆಗೂ ಯಾವುದೇ ಅಧಿಕಾರಯುತ ತೀರ್ಪು ನೀಡಿಲ್ಲ ಎಂದು ನ್ಯಾಯಾಲಯ ಹೇಳಿತು. ಹಾಗೆಯೇ ಜೈಶಂಕರ್ ಹಾಗೂ ಠಾಕೂರ್ ಆಯ್ಕೆ ವಿರುದ್ಧ ಸಲ್ಲಿಸಲಾದ ಎಲ್ಲ ಅರ್ಜಿಗಳನ್ನೂ ಒಟ್ಟುಗೂಡಿಸಿತು.


ವಕೀಲ ಹರೀಶ್ ಸಾಳ್ವೆ ಅವರು ಜೈಶಂಕರ್ ಅವರನ್ನು ಪ್ರತಿನಿಧಿಸಿದ್ದರು. ರಾಜ್ಯಸಭೆಯಲ್ಲಿ ಉಪ ಚುನಾವಣೆ ಅಥವಾ ಸಾಮಾನ್ಯ ಚುನಾವಣೆಗಳ ಸಂದರ್ಭದಲ್ಲಿ ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಅಧಿಕೃತ ತೀರ್ಪು ನೀಡುವುದಾಗಿ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+