ವಿಶೇಷ ವರದಿ: ಜನವರಿ ಜಾತಕ ಹೇಳುವ ಫೋಟೋಗಳ ಹಿಂದಿನ ಕಥೆ
ನವದೆಹಲಿ, ಡಿಸೆಂಬರ್ 21: ಕ್ಯಾಲೆಂಡರ್ ಬದಲಾಗುವ ದಿನ ಸನ್ನಿಹಿತವಾಗಿದೆ. ನೋಡ ನೋಡುತ್ತಿದ್ದಂತೆ 2021ರ ಇಡೀ ವರ್ಷ ಸರಿದು ಹೋಗಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಜನರ ಜೀವನ ಹುಡುಕಾಟಕ್ಕೆ ಇಡೀ ವರ್ಷ ಸಾಕ್ಷಿ ಆಗಿದೆ. 2020ರಲ್ಲಿ ಜಗತ್ತನ್ನು ಕಾಡಿದ ಕೊವಿಡ್-19 ಮಹಾಮಾರಿಗೆ 2021ರಲ್ಲಿ ಲಸಿಕೆ ಸಿಕ್ಕಿತು.
ಜಗತ್ತಿನ ಮೂಲೆಮೂಲೆಯಲ್ಲೂ ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಸುದ್ದಿಯೇ ಕೇಳು ಬರುತ್ತಿದ್ದ ಸಂದರ್ಭದಲ್ಲಿ ಭಾರತ ಲಸಿಕೆ ವಿತರಣೆಗೆ ಚಾಲನೆ ನೀಡಿತು. ಜನವರಿ ತಿಂಗಳ ಆರಂಭದಲ್ಲಿ ಜಗತ್ತಿನಲ್ಲಿ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಎರಡನೇ ರಾಷ್ಟ್ರ ಲಸಿಕೆ ವಿತರಣೆ ಅಭಿಯಾನವನ್ನು ಶುರು ಮಾಡಿತು.
2021ರ ವರ್ಷ ಹಲವು ಸಿಹಿ-ಕಹಿ ಘಟನೆಗಳಿಗೆ ಸಾಕ್ಷಿ ಆಗಿದೆ. ಜನವರಿ ತಿಂಗಳಿನಲ್ಲಿ ನಡೆದ ಪ್ರಮುಖ ಘಟನೆಗಳನ್ನು ಸಾರಿ ಹೇಳುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದವು. ಇನ್ನೂ ಅದೆಷ್ಟೋ ಚಿತ್ರಗಳ ಹಿಂದೆ ಪ್ರಮುಖ ವಿಷಯಗಳ ಸಾರಾಂಶವೇ ಅಡಗಿತ್ತು. ಇಂಥ ಪ್ರಮುಖ ಚಿತ್ರಗಳನ್ನು ಗುರುತಿಸುವುದು ಹಾಗೂ ಅವುಗಳ ಹಿಂದಿನ ಕಥೆಯನ್ನು ಓದುಗರಿಗೆ ಮುಟ್ಟಿಸುವ ಪ್ರಯತ್ನದ ಫಲಿತಾಂಶವೇ ಇಂದಿನ ಈ ವರದಿ.

ಭಾರತದಲ್ಲಿ ಮೊದಲು ಲಸಿಕೆ ಪಡೆದ ಪೌರ ಕಾರ್ಮಿಕ ಮನೀಷ್
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಟ್ಟಹಾಸ ಒಂದು ಕಡೆಯಲ್ಲಿ ಹೆಚ್ಚಾಗುತ್ತಿತ್ತು. ಜನವರಿ 16ರಂದು ದೇಶದಲ್ಲಿ ಮೊದಲ ಬಾರಿಗೆ ಕೊವಿಡ್-19 ಲಸಿಕೆ ವಿತರಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮನೀಷ್ ಕುಮಾರ್ ಎಂಬ ಪೌರ ಕಾರ್ಮಿಕನಿಗೆ ಲಸಿಕೆಯನ್ನು ನೀಡಲಾಯಿತು. ದೇಶದಲ್ಲೇ ಮೊದಲು ಲಸಿಕೆ ಪಡೆದ ವ್ಯಕ್ತಿ ಎಂಬ ಖ್ಯಾತಿಗೆ ಇವರು ಪಾತ್ರರಾದರು. ಮೊದಲ ವ್ಯಕ್ತಿಗೆ ಲಸಿಕೆ ನೀಡುವ ಸಂದರ್ಭದಲ್ಲಿ ಅಂದಿನ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹಾಗೂ ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಉಪಸ್ಥಿತರಿದ್ದರು. ಅಂದು ದೇಶದಲ್ಲೇ ಮೊದಲು ಕೊವಿಡ್-19 ಲಸಿಕೆ ಪಡೆದುಕೊಂಡ ವ್ಯಕ್ತಿಯ ಚಿತ್ರವು ಸಾಮಾಜಿಕ ಜಾಲತಾಣಗಳ ಆದಿಯಾಗಿ ಎಲ್ಲ ಮಾಧ್ಯಮಗಳಲ್ಲೂ ಸದ್ದು ಮಾಡಿತು.

ಕೊವಿಡ್-19 ಲಸಿಕೆ ಹಾಕಿಸಿಕೊಂಡ ಅದರ್ ಪೂನಾವಾಲಾ
ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನಿಕಾ ಸಂಸ್ಥೆಗಳು ಸಂಶೋಧಿಸಿದ ಹಾಗೂ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದನೆ ಆಗಿರುವ ಕೊವಿಶೀಲ್ಡ್ ಲಸಿಕೆ ಬಗ್ಗೆ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅದರ್ ಪೂನಾವಾಲಾ ಮಹತ್ವದ ಹೆಜ್ಜೆ ಇಟ್ಟರು. ಮಹಾರಾಷ್ಟ್ರದ ಪುಣೆಯಲ್ಲಿರುವ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಉತ್ಪಾದಿಸಿದ ಕೊವಿಶೀಲ್ಡ್ ಲಸಿಕೆಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವುದಕ್ಕಾಗಿ ಸ್ವತಃ ಕಂಪನಿಯ ಸಿಇಓ ಅದರ್ ಪೂನಾವಾಲಾ ಲಸಿಕೆಯನ್ನು ಹಾಕಿಸಿಕೊಂಡರು. ತಮ್ಮದೇ ಸಂಸ್ಥೆಯು ಉತ್ಪಾದಿಸಿದ ಕೊವಿಶೀಲ್ಡ್ ಲಸಿಕೆಯನ್ನು ಪಡೆದುಕೊಳ್ಳುವ ಮೂಲಕ ಲಸಿಕೆ ಬಗ್ಗೆ ಸಾರ್ವಜನಿಕರಲ್ಲಿ ಭರವಸೆಯನ್ನು ಹೆಚ್ಚಿಸುವ ಕಾರ್ಯ ಮಾಡಿದರು. ಜನವರಿ 16ರಂದು ಲಸಿಕೆ ಹಾಕಿಸಿಕೊಂಡ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಕಿಚ್ಚು
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಪ್ರತಿಭಟನೆ ಮುಂದುವರಿಸಿದರು. ಪಟಿಯಾಲ ಪ್ರದೇಶದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಧಿಕ್ಕಾರ ಕೂಗುತ್ತಿರುವ ಪ್ರತಿಭಟನಾಕಾರರು, ರೈತರು ಇಲ್ಲದಿದ್ದರೆ, ಅನ್ನ ಇಲ್ಲ, ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಅಂದು ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳು ರೈತರ ಆಕ್ರೋಶಕ್ಕೆ ಕಾರಣವಾಗಿದ್ದವು.

ಶಶಿಕಲಾ ನಟರಾಜನ್ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ಕೊರೊನಾವೈರಸ್ ಸೋಂಕಿನಿಂದ ತೀವ್ರ ಉಸಿರಾಟ ಸಮಸ್ಯೆಯನ್ನು ಎದುರಿಸುತ್ತಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಶ್ವಾಸಕೋಶ ಸೋಂಕು ಉಂಟಾದ ಹಿನ್ನೆಲೆ ಜ.20ರಂದು ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚುವರಿ ಚಿಕಿತ್ಸೆಗಾಗಿ ಜನವರಿ 21ರಂದು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಈ ವೇಳೆ ನಡೆಸಿದ ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿತ್ತು.
ಪ್ರಾರಂಭದಲ್ಲಿ ಅಧಿಕ ರಕ್ತದೊತ್ತಡ, ಸಾರಿ ಲಕ್ಷಣ (ತೀವ್ರ ಉಸಿರಾಟ ತೊಂದರೆ), ಟೈಪ್-2 ಮಧುಮೇಹ ಸೇರಿದಂತೆ ಹಲವು ಅನಾರೋಗ್ಯ ಸಮಸ್ಯೆ ಹೊಂದಿದ್ದ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. 10 ದಿನಗಳ ನಂತರ ಅವರ ಆರೋಗ್ಯ ಸುಧಾರಿಸಿದ ಬಳಿಕ ಜನವರಿ 31ರ ಭಾನುವಾರ ವಿಕ್ಟೋರಿಯಾ ಆಸ್ಪತ್ರೆಯಿಂದ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು.

ರಾಷ್ಟ್ರ ರಾಜಧಾನಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ
ಕಳೆದ ಜನವರಿ 31ರ ಭಾನುವಾರ ರಾಷ್ಟ್ರ ರಾಜಧಾನಿಯ ತರ್ಕಮನ್ ಗೇಟ್ ಪ್ರದೇಶದ ಬಳಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿಯಿತು. ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಈ ಹಿಂದೆಯೇ ತೆರವು ಮಾಡಲಾಗಿತ್ತು. ಅಂದು ಸಖತ್ ಸುದ್ದಿ ಆಗಿದ್ದ ಈ ಕಟ್ಟಡ ಕುಸಿತದಲ್ಲಿ ಪೊಲೀಸರ ಪ್ರಕಾರ ಯಾವುದೇ ಸಾವು-ನೋವುಗಳು ಸಂಭವಿಸಿರಲಿಲ್ಲ ಎಂದು ತಿಳಿದು ಬಂದಿತ್ತು. ಆದರೆ ಈ ಫೋಟೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡಿತ್ತು.












Click it and Unblock the Notifications