ಕಾಂಗ್ರೆಸ್ ಸೇರ್ಪಡೆಗೊಂಡ ಕನ್ಹಯ್ಯ, ಜಿಗ್ನೇಶ್ ಮುಂದೇನು?
ನವದೆಹಲಿ, ಸೆಪ್ಟೆಂಬರ್ 29: ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಜನ್ಮದಿನದಂದು ಕಾಂಗ್ರೆಸ್ ಪಕ್ಷಕ್ಕೆ ಸಿಪಿಐ ಯುವ ಮುಖಂಡ ಕನ್ಹಯ್ಯ ಕುಮಾರ್, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಅಧಿಕೃತವಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡರು. ಕನ್ಹಯ್ಯ, ಜಿಗ್ನೇಶ್ ಮೇವಾನಿರನ್ನು ರಾಹುಲ್ ಗಾಂಧಿ ಅವರು ಪಕ್ಷಕ್ಕೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ರಣದೀಪ್ ಸುರ್ಜೇವಾಲ, ಕೆ.ಸಿ ವೇಣುಗೋಪಾಲ್ ಮುಂತಾದ ಮುಖಂಡರ ಉಪಸ್ಥಿತರಿದ್ದರು.
"ಈ ದೇಶವನ್ನು ಆಳುತ್ತಿರುವ ಫ್ಯಾಶಿಸ್ಟ್ ಶಕ್ತಿಗಳನ್ನು ಸೋಲಿಸಲು ಯುವ ನಾಯಕರಾದ ಕನ್ಹಯ್ಯ ಕುಮಾರ್ ಮತ್ತು ಜಿಗ್ನೇಶ್ ಮೇವಾನಿ ಅವರೊಂದಿಗೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೇವಾನಿ ಸೇರ್ಪಡೆ, ಹಾರ್ದಿಕ್ ಪಟೇಲ್ಗೆ ಬಲ
ಗುಜರಾತ್ ರಾಜಕೀಯ ವಲಯದಲ್ಲಿ ಭಾರಿ ಸದ್ದು ಮಾಡಿದ್ದ ಮೂವರು ಯುವ ಮುಖಂಡರ ಪೈಕಿ ಜಿಗ್ನೇಶ್ ಮೇವಾನಿ ಒಬ್ಬರಾಗಿದ್ದಾರೆ. ಪಾಟೀದಾರ್ ಸಂಘಟನೆ ಮುಖಂಡ ಹಾರ್ದಿಕ್ ಪಟೇಲ್ ಚುನಾವಣೆ ಸ್ಪರ್ಧಿಸಿರಲಿಲ್ಲ ಆದರೆ, ಈಗ ಗುಜರಾತ್ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷರಾಗಿದ್ದಾರೆ. ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.
ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದ ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ರಾಧನ್ಪುರ್ ಕ್ಷೇತ್ರದಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ. ಅವರು 55,751 ಮತಗಳನ್ನು ಪಡೆದಿದ್ದು ಹತ್ತಿರದ ಪ್ರತಿ ಸ್ಪರ್ಧಿ ಬಿಜೆಪಿಯ ಲವಿಂಜಿ ಸೋಲಂಕಿಯವರನ್ನು 12,544 ಮತಗಳಿಂದ ಸೋಲಿಸಿದ್ದರು.
ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ
ಬನಸ್ಕಾಂತ ಜಿಲ್ಲೆಯ ವಡ್ಗಾಮ್ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ 63,471 ಮತಗಳನ್ನು ಪಡೆದಿದ್ದಾರೆ. ಅವರು ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ವಿಜಯಕುಮಾರ್ ಚಕ್ರವರ್ತಿಯವರನ್ನು 21,042 ಮತಗಳ ಅಂತರದಿಂದ ಸೋಲಿಸಿದ್ದರು. ಮೇವಾನಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರಿಸಿಕೊಳ್ಳಲಾಗುತ್ತಿದೆ. ಗುಜರಾತ್ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಕಾರಿ ಅಧ್ಯಕ್ಷ, ಪಾಟೀದಾರ್ ಸಮುದಾಯದ ಯುವ ಮುಖಂಡ ಹಾರ್ದಿಕ್ ಪಟೇಲ್ ಮೇಲೆ ಹೈಕಮಾಂಡ್ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ.
ಊನ್ನಾವೋ ದಲಿತ ದೌರ್ಜನ್ಯದ ನಂತರ ರಾಜ್ಯದಾದ್ಯಂತ ಹುಟ್ಟಿಕೊಂಡ ದಲಿತ ಹೋರಾಟದ ಮೂಲಕ ಜಿಗ್ನೇಶ್ ಮೇವಾನಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಬಿಜೆಪಿ ವಿರುದ್ಧ ಕೆಂಡ ಕಾರುತ್ತಾ ಬಂದ ಜಿಗ್ನೇಶ್ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸಿದ್ದರು
ಬಿಹಾರದತ್ತ ಮತ್ತೆ ಕನ್ಹಯ್ಯ
2016ರಲ್ಲಿ ಜೆಎನ್ಯುನಲ್ಲಿ ಅಫ್ಜಲ್ ಗುರು ಸಾವಿನ ಸ್ಮರಣಾರ್ಥ ಫೆಬ್ರವರಿ 9, 2016ರಂದು ನಡೆದ ಕಾರ್ಯಕ್ರಮದ ವೇಳೆ ದೇಶ ವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ಜೆಎನ್ಯು ಮಾಜಿ ವಿದ್ಯಾರ್ಥಿಗಳಾದ ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಅಖಿಬ್ ಹುಸ್ಸೇನ್ , ಮುಜೀಬ್ ಹುಸ್ಸೇನ್, ಮುನೀಬ್ ಹುಸ್ಸೇನ್, ಉಮರ್ ಗುಲ್, ರಯೀಬ್, ಬಸೀರ್ ಭಟ್ ಮತ್ತು ಬಶರತ್ ವಿರುದ್ಧ ಇಂದು ಚಾರ್ಜ್ಶೀಟ್ ದಾಖಲಿಸಲಾಗಿತ್ತು.
ಈ ಪ್ರಕರಣದಲ್ಲಿ ಜಾಮೀನು ಪಡೆದ ತಕ್ಷಣವೇ ರಾಹುಲ್ ಗಾಂಧಿಯನ್ನು ಕನ್ಹಯ್ಯ ಭೇಟಿ ಮಾಡಿದ್ದರು. ವಿದ್ಯಾರ್ಥಿ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿದ್ದನ್ನು ರಾಹುಲ್ ಖಂಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
|
ಪ್ರಶಾಂತ್ ಕಿಶೋರ್ ಸಲಹೆಯಂತೆ ಸೇರ್ಪಡೆ
ಬಿಹಾರದಲ್ಲಿ 70 ಸ್ಥಾನಗಳಲ್ಲಿ ಸ್ಪರ್ಧಿಸಿ, ಮಹಾಘಟಬಂಧನದ ನೇತೃತ್ವ ವಹಿಸಿದ್ದ ಕಾಂಗ್ರೆಸ್ 19 ಕ್ಷೇತ್ರದಲ್ಲಿ ಮಾತ್ರ ಜಯ ಗಳಿಸಿತ್ತು. ಮಿತ್ರಪಕ್ಷಗಳನ್ನು ಗೆಲುವಿನತ್ತ ಕೊಂಡೊಯ್ಯುವಲ್ಲೂ ವಿಫಲವಾಗಿತ್ತು. ಸಿಪಿಐ ಸೇರಿ ಸೋಲು ಕಂಡರೂ ಕನ್ಹಯ್ಯ ಸೇರ್ಪಡೆಯಿಂದ ಬಿಹಾರದಲ್ಲಿ ಹೆಚ್ಚಿನ ಬಲ ಬರಲಿದೆ ಎಂದು ಹೈಕಮಾಂಡ್ ನಂಬಿದೆ.
2015ರಲ್ಲಿ ಜೆಎನ್ ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿದ್ದ ಕನ್ಹಯ್ಯಾ ಅವರು 2018ರಲ್ಲಿ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿ, ಸಿಪಿ ಐ ಸದಸ್ಯರಾದರು, 2019ರಲ್ಲಿ ಬೇಗುಸರಾಯ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಬಯಸಿ ಸ್ಪರ್ಧಿಸಿದರು. ಆದರೆ, ಬಿಜೆಪಿಯ ಗಿರಿರಾಜ್ ಸಿಂಗ್ ವಿರುದ್ಧ ಭಾರಿ ಅಂತರದಿಂದ ಸೋಲು ಕಂಡಿದ್ದರು.
ಆದರೆ, ಈಗ ಪ್ರಶಾಂತ್ ಕಿಶೋರ್ ಸಲಹೆಯಂತೆ ಕನ್ಹಯ್ಯ, ಜಿಗ್ನೇಶ್ ಅವರ ಸೇರ್ಪಡೆ ಸಾಧ್ಯವಾಗುತ್ತಿದೆ.