ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಸೌತ್ ಹಿರೋಗಳಿಂದ ಕಲಿತಿದ್ದೇನೆ: ಸತ್ಯ ಬಿಚ್ಚಿಟ್ಟ ಶಾರುಖ್- ಹಂಬಲ್ ಜವಾನ್ ಎಂದ ಫ್ಯಾನ್ಸ್
ಮುಂಬೈ, ಜುಲೈ 13: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರು ತಮ್ಮ ನಟನೆಯ ಮೂಲಕ ಪ್ರಪಂಚದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಖ್ಯಾತಿಯ ಉತ್ತುಂಗದಲ್ಲಿದ್ದರೂ ಶಾರುಖ್ ಅವರು ತಮ್ಮ ವಿನಮ್ರ ನಡವಳಿಕೆಗೆ ಹೆಸರುವಾಸಿಯಾಗಿದ್ದಾರೆ. ಅವರ ನಟನೆಯ ಜವಾನ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅಪಾರ ಜನಮನ್ನಣೆ ಗಳಿಸುತ್ತಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿರುವ ಶಾರುಖ್ ಅವರು ಸೌತ್ ಸ್ಟಾರ್ಗಳಿಂದ ಸ್ಪೂರ್ತಿ ಪಡೆದಿರುವುದಾಗಿ ಹೇಳಿದ್ದಾರೆ.
ಶಾರುಖ್ ಖಾನ್ ಅವರು #AskSRK ಸೆಷನ್ ಅನ್ನು ಹೋಸ್ಟ್ ಮಾಡುವ ಮೂಲಕ ಟ್ವಿಟರ್ನಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಅವರ ನಟನೆಯ ಜವಾನ್ ಚಿತ್ರದ ಬಗ್ಗೆ ಅನೇಕ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಜವಾನ್ನಲ್ಲಿ ತಮ್ಮ ಪಾತ್ರದ ತಯಾರಿಗಾಗಿ, ಅವರು ಸಾಕಷ್ಟು ಕಸರತ್ತು ನಡೆಸಿರುವುದನ್ನು ಬಹಿರಂಗ ಪಡಿಸಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟರಾದ ಸೂಪರ್ ಸ್ಟಾರ್ ರಜನಿಕಾಂತ್, ದಳಪತಿ ವಿಜಯ್, ಅಲ್ಲು ಅರ್ಜುನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಚಿತ್ರಗಳನ್ನು ನೋಡಿ ಸ್ಪೂರ್ತಿ ಪಡೆದಿದ್ದೇನೆ ಎಂದು ಶಾರುಖ್ ಖಾನ್ ಹೇಳಿದ್ದಾರೆ.
ಅಭಿಮಾನಿಯ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿರುವ ಅವರು, ದಕ್ಷಿಣ ಭಾರತದ ನಟರನ್ನು ಉಲ್ಲೇಖಿಸಿದ್ದಾರೆ.
ಈ ಸೂಪರ್ಸ್ಟಾರ್ಗಳು ಜಗತ್ತಿನೊಂದಿಗೆ ವ್ಯವಹರಿಸುವ ಭಾಷೆಯನ್ನು ನಾನು ಕಲಿತಿದ್ದೇನೆ. ಅವರ ಅಭಿವ್ಯಕ್ತಿಗಳನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ.
'ಜವಾನ್ನಲ್ಲಿ ನಿಮ್ಮ ಪಾತ್ರವನ್ನು ಉತ್ತಮವಾಗಿ ಕಟ್ಟಿಕೊಡಲು ನೀವು ಸಾಕಷ್ಟು ಸಿನಿಮಾಗಳನ್ನು ನೋಡಿದ್ದೀರಾ?' ಎಂದು ಅಭಿಮಾನಿಯೊಬ್ಬರು ಶಾರುಖ್ ಖಾನ್ ಅವರಿಗೆ ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿರುವ ಅವರು, 'ನಾನು ನಿರ್ದೇಶಕ ಅಟ್ಲೀ ಅವರ ಸಾಕಷ್ಟು ಚಿತ್ರಗಳನ್ನು ವೀಕ್ಷಿಸಿದ್ದೇನೆ. ವಿಜಯ್ ಸರ್. ಅಲ್ಲು ಅರ್ಜುನ್ ಜೀ. ರಜನಿ ಸರ್ ಹಾಗೂ ಯಶ್ ಸೇರಿದಂತೆ ಅನೇಕ ಸ್ಟಾರ್ಗಳ ನಟನೆಯನ್ನು ನೋಡಿದ್ದೇನೆ. ಅವರು ಜಗತ್ತಿನೊಂದಿಗೆ ವ್ಯವಹರಿಸುವ ಅಭಿವ್ಯಕ್ತಿಯ ಭಾಷೆಯನ್ನು ಅರ್ಥಮಾಡಿಕೊಂಡಿದ್ದೇನೆ. ಈ ಮೂಲಕ ಜವಾನ್ ಚಿತ್ರಕ್ಕೆ ತಯಾರಿ ಮಾಡಿಕೊಂಡೆ' ಎಂದು ಹೇಳಿದ್ದಾರೆ.
ಜವಾನ್ ಚಿತ್ರಕ್ಕಾಗಿ ದಕ್ಷಿಣದ ತಾರೆಯರಿಂದ ಸ್ಫೂರ್ತಿ ಪಡೆದಿರುವುದಾಗಿ ಹೇಳಿಕೊಂಡಿರುವ ಶಾರುಖ್ ಅವರ ವಿನಮ್ರತೆಯ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 'ಹಂಬಲ್ ಜವಾನ್' ಎಂದು ಫ್ಯಾನ್ಸ್ ಪ್ರತಿಕ್ರಿಯಿಸಿದ್ದಾರೆ.
ಯುವ ನಿರ್ದೇಶಕ ಅಟ್ಲೀ ಅವರು ಜವಾನ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಅಟ್ಲೀ ಅವರು ದಳಪತಿ ವಿಜಯ್ ನಟನೆಯ ಥೇರಿ, ಮರ್ಸಲ್ ಚಿತ್ರಗಳನ್ನು ನಿರ್ದೇಶಿಸಿ ಸೈ ಅನ್ನಿಸಿಕೊಂಡಿದ್ದಾರೆ. ಈ ಎರಡೂ ಚಿತ್ರಗಳ ನೆರಳು ಜವಾನ್ನಲ್ಲಿ ಕಾಣುತ್ತಿದೆ ಎಂದು ಅಭಿಮಾನಿಗಳು ಹೇಳಿದ್ದಾರೆ.

ಇಷ್ಟೇ ಅಲ್ಲದೇ, ಟ್ವಿಟರ್ನಲ್ಲಿ ನಡೆದ ಸಂವಾದದಲ್ಲಿ ಶಾರುಖ್ ಖಾನ್ ಅವರು ಜವಾನ್ ತಂಡವನ್ನು ಹಾಡಿ ಹೊಗಳಿದ್ದಾರೆ. ನಯನತಾರಾ, ಅಟ್ಲಿ ಅವರೊಂದಿಗಿನ ಕೆಲಸದ ಅನುಭವವನ್ನು ಹಂಚಿಕೊಂಡಿದ್ದಾರೆ.
ವಿಘ್ನೇಶ್ ಶಿವನ್ ( ನಯನತಾರಾ ಪತಿ ಹಾಗೂ ತಮಿಳು ಸಿನಿಮಾ ನಿರ್ದೇಶಕ ) ಅವರೊಂದಿಗಿನ ಮೋಜಿನ ಕ್ಷಣಗಳ ಬಗ್ಗೆ ಹೇಳಿಕೊಂಡಿದ್ದಾರೆ. ವಿಜಯ್ ಸೇತುಪತಿ ಅವರ ನಟನೆಯಿಂದ ಆಶ್ಚರ್ಯಚಕಿತನಾದ್ದೇನೆ ಎಂದು ಬಹಿರಂಗಪಡಿಸಿದ್ದಾರೆ.
ಜವಾನ್ ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ನಟಿಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದಾರೆ. ವಿಜಯ್ ಸೇತುಪತಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಗಾಸಿಪ್ಗಳ ಪ್ರಕಾರ, ದಳಪತಿ ವಿಜಯ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications