ಬಂಜೆತನ ಸಮಸ್ಯೆ ಮರೆತು ಖುಷಿ, ಖುಷಿಯಾಗಿರುವುದು ಹೇಗೆ?
ಇತ್ತೀಚೆಗಿನ ದಿನಗಳಲ್ಲಿ ಬಂಜೆತನದ ಸಮಸ್ಯೆಗಳು ಗಂಡು, ಹೆಣ್ಣು ಇಬ್ಬರನ್ನು ಅರ್ಥಾತ್ ದಂಪತಿಯನ್ನು ಕಾಡಲಾರಂಭಿಸಿದೆ. ಇದಕ್ಕೆ ಕಾರಣಗಳು ಹಲವು ಇರಬಹುದಾದರೂ ಈ ಸಮಯದಲ್ಲಿ ದಂಪತಿ ತಮ್ಮ ನಿತ್ಯದ ಬದುಕಿನಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಕಡೆಗೆ ಹೆಚ್ಚು ಗಮನಹರಿಸಬೇಕಾಗುತ್ತದೆ. ಮನಸ್ಸಿನಲ್ಲಿ ಇಲ್ಲಸಲ್ಲದ ಗೊಂದಲಗಳನ್ನು ಮಾಡಿಕೊಳ್ಳದೆ ಖುಷಿ, ಖುಷಿಯಾಗಿ ಇರುವುದನ್ನು ರೂಢಿಸಿಕೊಳ್ಳಬೇಕಾಗುತ್ತದೆ.
ಮದುವೆಯಾಗಿ ವರ್ಷವಾಗುತ್ತಿದ್ದಂತೆಯೇ ಮಗುವಾಗಬೇಕೆಂದು ಬಯಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಬದಲಾದ ಕಾಲದಲ್ಲಿ ಇಬ್ಬರೂ ದುಡಿಮೆಯಲ್ಲಿರುವ ಕಾರಣ ಮದುವೆಯಾಗಿ ಒಂದಷ್ಟು ವರ್ಷ ಕಳೆಯಲಿ ಆಮೇಲೆ ಮಕ್ಕಳ ಬಗ್ಗೆ ಯೋಚಿಸೋಣ ಎಂದು ಬಯಸುವುದು ಸಹಜ. ಆದರೆ ತಡವಾಗಿ ಮಕ್ಕಳನ್ನು ಬಯಸುವುದು ಕೆಲವೊಮ್ಮೆ ಬಂಜೆತನಕ್ಕೂ ಕಾರಣವಾಗಬಹುದು. ಈ ವಿಚಾರದಲ್ಲಿ ತಜ್ಞರ ಸಲಹೆ ಪಡೆದುಕೊಳ್ಳುವುದು ಇಲ್ಲಿ ಮುಖ್ಯವಾಗಿರುತ್ತದೆ.

ಇಂತಹ ಸಮಯದಲ್ಲಿ ದಂಪತಿಯಲ್ಲಿ ಮಾನಸಿಕ ಒತ್ತಡವೂ ಹೆಚ್ಚಬಹುದು. ಏಕೆಂದರೆ ಸಂಬಂಧಿಕರು, ಪರಿಚಯಸ್ಥರು ಮದುವೆಯಾಗಿ ಒಂದೆರಡು ತಿಂಗಳು ಕಳೆಯುತ್ತಿದ್ದಂತೆಯೇ ಗುಡ್ ನ್ಯೂಸ್ ಇಲ್ವ ಅಂಥ ಕೇಳಲು ಆರಂಭಿಸುತ್ತಾರೆ. ಹೀಗಾಗಿ ಕೆಲವೊಮ್ಮೆ ಮಗು ಬೇಕು ಎಂದು ಬಯಸಿದರೂ ಅದು ಸಾಧ್ಯವಾಗದೆ ಹೋದಾಗ ಮಾನಸಿಕ ಹಿಂಸೆಯಾಗಿ ಕೆಲವು ದಂಪತಿಗೆ ಕಿರಿಕಿರಿ ಎನಿಸಬಹುದು. ಆದರೆ ಇಂತಹದೊಂದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಪ್ರಯತ್ನ ಬಹುತೇಕವಾಗಿ ಎಲ್ಲೂ ನಡೆಯುವುದಿಲ್ಲ. ಇದು ಭಾವನಾತ್ಮಕವಾಗಿ ಕುಗ್ಗಿ ಸಮಸ್ಯೆ ಮತ್ತಷ್ಟು ಹೆಚ್ಚಲು ಕಾರಣವಾಗಬಹುದು.
ಈ ಸಂದರ್ಭದಲ್ಲಿ ದಂಪತಿ ಹಿಂಜರಿಕೆಯಿಂದ ಕುಗ್ಗಬಹುದು, ಸಂಬಂಧಗಳಲ್ಲಿ ತೊಂದರೆಗಳಾಗಬಹುದು, ಆತ್ಮೀಯತೆಯ ಕೊರತೆ ಕಾಡಬಹುದು, ಹೆಚ್ಚಿನ ಒತ್ತಡ ಉಂಟಾಗಬಹುದು ಮತ್ತು ಕೆಲವು ಸಂದರ್ಭಗಳಲ್ಲಿ ಆತ್ಮಹತ್ಯೆಯ ಆಲೋಚನೆಗಳು ಬಂದರೂ ಅಚ್ಚರಿಯಿಲ್ಲ. ಹೀಗಾಗಿ ಅಂಥ ಸಮಯದಲ್ಲಿ ಅವರಿಗೆ ಮನೆಯವರ ಪ್ರೀತಿ, ಆತ್ಮೀಯತೆ, ಸಲಹೆಗಳು ಬೇಕಾಗುತ್ತವೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ದಂಪತಿ ಕೂಡ ಈ ವೇಳೆ ತಜ್ಞರನ್ನು ಕಂಡು ಚಿಕಿತ್ಸೆಗಳನ್ನು ಪಡೆಯಬೇಕಾಗುತ್ತದೆ.

ಇನ್ನು ಬಂಜೆತನ ಸಮಸ್ಯೆ ಎದುರಿಸುವ ಸಂದರ್ಭದಲ್ಲಿ ದಂಪತಿಗೆ ಕುಟುಂಬದ ಬೆಂಬಲವು ಬಹಳ ಮುಖ್ಯವಾಗುತ್ತದೆ. ಪದೇ ಪದೇ ಫ್ಯಾಮಿಲಿ ಪ್ಲಾನಿಂಗ್ ಕುರಿತ ಪ್ರಶ್ನೆಗಳನ್ನು ಕೇಳಿ, ಕೇಳಿ ಒತ್ತಡವನ್ನು ಹೆಚ್ಚಿಸುವ ಬದಲು ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ಅವರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು. ಅವರ ಖಾಸಗಿತನವನ್ನು ಗೌರವಿಸಬೇಕು. ಪ್ರೋತ್ಸಾಹದಾಯಕ ಮತ್ತು ಎಲ್ಲವನ್ನೂ ಅರ್ಥೈಸಿಕೊಳ್ಳುವ ವಾತಾವರಣವನ್ನು ಸೃಷ್ಟಿಸಿಕೊಡಬೇಕು. ಕೆಲವೊಮ್ಮೆ ಕುಟುಂಬದಲ್ಲಿ ಒಳ್ಳೆಯ ವಾತಾವರಣ ಇಲ್ಲದೆ ಹೋದರೆ ದಂಪತಿಗಳು ವೈದ್ಯಕೀಯ ಮತ್ತು ಭಾವನಾತ್ಮಕ ಸವಾಲುಗಳನ್ನು ಎದುರಿಸಲು ಮಾನಸಿಕ ತಯಾರಿ ಮಾಡಿಕೊಳ್ಳಬೇಕಾಗುತ್ತದೆ.
ಬಂಜೆತನದ ಸಮಸ್ಯೆ ಎದುರಿಸುವ ದಂಪತಿ ಕುರಿತಂತೆ ನೋವಾ ಐವಿಎಫ್ ಫರ್ಟಿಲಿಟಿಯ ಚೀಫ್ ಸೈಕಾಲಾಜಿಕಲ್ ಕೌನ್ಸಿಲರ್ ಡಯಾನಾ ದಿವ್ಯಾ ಕ್ರಾಸ್ಟಾ ಅವರು ಒಂದಷ್ಟು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅವರು ಹೇಳುವಂತೆ ಸಾಮಾನ್ಯವಾಗಿ ನಮ್ಮಲ್ಲಿ ಬಹಳಷ್ಟು ಜನರು ಬಂಜೆತನವನ್ನು ತಮ್ಮ ಆತ್ಮಗೌರವದ ಜೊತೆ ಜೋಡಿಸಿಬಿಡುತ್ತಾರೆ. ಇದೊಂದು ಸಮಸ್ಯೆಯಾಗಿದೆ. ನಿಜ ಹೇಳಬೇಕೆಂದರೆ ಬಂಜೆತನ ಎನ್ನುವುದು ದೇಹಕ್ಕೆ ಸಂಬಂಧಿಸಿದ್ದಾದರೂ ಸಾಮಾಜಿಕ ಕಳಂಕ ಮತ್ತು ಭಾವನಾತ್ಮಕ ಒತ್ತಡದಿಂದಾಗಿ ಬಂಜೆತನ ಸಮಸ್ಯೆ ಇರುವವರು ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಬಂಜೆತನ ಸಮಸ್ಯೆ ಎದುರಿಸುವ ಸಂದರ್ಭದಲ್ಲಿ ಹೆಣ್ಮಕ್ಕಳು ಒಂಟಿತನ ಅನುಭವಿಸುತ್ತಾರೆ. ಏಕೆಂದರೆ ಅವರಿಗೆ ಕುಟುಂಬದಿಂದ ಗರ್ಭಧಾರಣೆಗೆ ಒತ್ತಡ ಇರುತ್ತದೆ. ಗರ್ಭಧಾರಣೆ ಆಗದಿರುವುದಕ್ಕೆ ಸಮಾಜ ಅವರನ್ನು ವಿಚಿತ್ರವಾಗಿ ನೋಡುತ್ತದೆ. ಕೆಲವೊಮ್ಮೆ ಬಂಜೆತನದ ಆರೋಪಗಳನ್ನು ಮಹಿಳೆಯರ ಮೇಲೆ ಹೊರಿಸಲಾಗುತ್ತದೆ. ಅಂಥದ್ದನ್ನೆಲ್ಲಾ ಧೈರ್ಯವಾಗಿ ಎದುರಿಸಲು ಬಂಜೆತನ, ಗರ್ಭಪಾತದ ಸಮಸ್ಯೆ ಎದುರಿಸುತ್ತಿರುವ ದಂಪತಿ ಸಜ್ಜಾಗಬೇಕಾಗುತ್ತದೆ. ಈ ಸಮಯದಲ್ಲಿ ಮಾನಸಿಕ ಸಮಾಲೋಚನೆಯಲ್ಲಿ ಅಥವಾ ಸೈಕಾಲಾಜಿಕಲ್ ಕೌನ್ಸಿಲಿಂಗ್ ನಲ್ಲಿ ಭಾಗವಹಿಸಿ ಮಾನಸಿಕ ಬೆಂಬಲ ಪಡೆಯಬೇಕು. ಆ ಮೂಲಕ ಎಲ್ಲವನ್ನು ಎದುರಿಸಿ ಖುಷಿಯಾಗಿ ಜೀವನ ನಡೆಸುವುದನ್ನು ಕಲಿಯ ಬೇಕಾಗುತ್ತದೆ.
ಇಲ್ಲಿ ಬಂಜೆತನದ ಸಮಸ್ಯೆ ಎದುರಿಸುವ ದಂಪತಿಯಾಗಲೀ ಅವರ ಕುಟುಂಬದವರಾಗಲೀ ಅರ್ಥ ಮಾಡಿಕೊಳ್ಳಬೇಕಾದ ಮುಖ್ಯವಿಚಾರ ಏನೆಂದರೆ ಬಂಜೆತನ ಸಮಸ್ಯೆಯು ವ್ಯಕ್ತಿಯ ಆತ್ಮಗೌರವಕ್ಕೆ ಮಾತ್ರ ಕುಂದು ತರುವುದಲ್ಲ ಜೊತೆಗೆ ಭಾರಿ ಒತ್ತಡವನ್ನು ಸೃಷ್ಟಿಸುತ್ತದೆ ಮತ್ತು ಸಂಬಂಧಗಳಲ್ಲಿ ಬಿರುಕು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಇದನ್ನು ಅರಿತು ಮುನ್ನಡೆಯಬೇಕಾಗುತ್ತದೆ. ಅದು ಏನೇ ಇರಲಿ ಈ ವಿಚಾರದಲ್ಲಿ ಎಚ್ಚರ ವಹಿಸುವುದು ಬಹಳ ಮುಖ್ಯವಾಗುತ್ತದೆ.












Click it and Unblock the Notifications