ಸೆಕ್ಯುಲರ್ ಕಾಂಗ್ರೆಸ್ಗೆ ಡಿಚ್ಚಿ ಹೊಡೆಯಲು ಬಿಜೆಪಿ ಹೈಕಮಾಂಡ್ ಪಾಲಿಗೆ ಕುಮಾರಣ್ಣನೇ ಬಂಡೆ
"ಈಗಿನ ಪರಿಸ್ಥಿತಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಕುಮಾರಸ್ವಾಮಿ ಎಲ್ಲರಿಗೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ, ಬಿಜೆಪಿ ಸರ್ಕಾರವೇ ಮುಂದುವರಿಯಲಿ ಅಂತಿದೆ. ಯಾಕೆಂದರೆ, ಯಡಿಯೂರಪ್ಪ ಅವರಿಂದ ಜನರ ಕೆಲಸ ಏನಾಗ್ತಿದೆಯೋ ಬಿಡ್ತಿದೆಯೋ ವಿರೋಧ ಪಕ್ಷದಿಂದ ಸಿದ್ದರಾಮಯ್ಯ ಆದಿಯಾಗಿ ಶಿವಕುಮಾರ್, ಕುಮಾರಸ್ವಾಮಿ ತನಕ ಎಲ್ಲರ ಕೆಲಸ ಆಗ್ತಿದೆ," ಎಂದ ಆ ವ್ಯಕ್ತಿ ಹಾಗೇ ಒಮ್ಮೆ ಕಣ್ಣು ಮಿಟುಕಿಸಿದರು.
ಸದ್ಯದ ಪರಿಸ್ಥಿತಿ ನೋಡಿದರೆ, ರಾಜ್ಯದಲ್ಲಿ ಕಾಂಗ್ರೆಸ್ ಸುಧಾರಿಸಿಕೊಳ್ಳುವುದಕ್ಕೆ ಇನ್ನೆರಡು ಮೂರು ವರ್ಷ ಬೇಕಾಗುವಂತೆ ಕಾಣುತ್ತಿದೆ. ಹಾಗೊಂದು ವೇಳೆ ಚೇತರಿಸಿಕೊಂಡರೂ ಅಷ್ಟರಲ್ಲಿ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷವನ್ನು ಆವರಿಸಿಕೊಂಡು ಬಿಟ್ಟಿರುತ್ತಾರೆ. ಇನ್ನು ಕುಮಾರಸ್ವಾಮಿಗೆ ಶಿವಕುಮಾರ್, ಯಡಿಯೂರಪ್ಪ ಜೋಡಿಯಿಂದ ಜೆಡಿಎಸ್ ಶಾಸಕರನ್ನು ಉಳಿಸಿಕೊಂಡರೆ ಸಾಕಪ್ಪಾ ಅನ್ನೋ ಹಾಗಾಗಿದೆ.
ಲೇಟೆಸ್ಟ್ ಆಗಿ ಕುಮಾರಸ್ವಾಮಿ ಅವರಿಗೆ ಜ್ಞಾನೋದಯ ಆದಂತಾಗಿ, ಜೆಡಿಎಸ್ ಏನೇ ಗಂಟಲು ಹರಿದುಕೊಂಡು ಕಿರುಚಾಡಿದರೂ ಕೊನೆಗೆ ಅದರ ಲಾಭ ಕಾಂಗ್ರೆಸ್ಗೆ ಅನ್ನೋದು ಖಚಿತವಾಗಿದೆ. ಹೀಗೆ ಎರಡು ರಾಷ್ಟ್ರೀಯ ಪಕ್ಷಗಳನ್ನು ಎದುರು ಹಾಕಿಕೊಂಡು ಬಡಿದಾಡಿದರೆ ಎರಡೂ ಪಕ್ಷಗಳು ಅವಕಾಶ ಸಿಕ್ಕಾಗಲೆಲ್ಲ ತಮ್ಮನ್ನು ಹೊಸಕಿ ಹಾಕುವುದಕ್ಕೆ ನೋಡುತ್ತಾರೆ ಎಂಬುದು ಕೂಡ ತಡವಾಗಿ ತಿಳಿದುಕೊಂಡಿದ್ದಾರೆ.

ಡಿಕೆಶಿ- ಸಿದ್ದು ಎಂದೂ ಕುಮಾರಣ್ಣಂಗೆ ಫ್ರೆಂಡ್ಸ್ ಅಲ್ಲ
ಕಾಂಗ್ರೆಸ್ ನಿಂದ ಸಿದ್ದರಾಮರಾಮಯ್ಯ ಯಾವತ್ತಿದ್ದರೂ ತಮ್ಮ ಪಾಲಿನ ವೈರಿ. ಇನ್ನು ಡಿ.ಕೆ. ಶಿವಕುಮಾರ್ ಹಾಗೂ ತಾವು ಒಂದೇ ಒರೆಯಲ್ಲಿರುವ ಕತ್ತಿಗಳಿದ್ದಂತೆ. ಇಂಥ ಸಂದರ್ಭದಲ್ಲಿ ಜೆಡಿಎಸ್ ಉಳಿಸಿಕೊಳ್ಳುವುದಕ್ಕೆ ಬಿಜೆಪಿ ಜತೆಗೆ ಒಟ್ಟಾಗುವುದು, ಹೇಗಿದ್ದರೂ ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಬಿಜೆಪಿ ತಮಗೆ ಸಹಾಯ ಮಾಡಿದರೆ ಅಲ್ಲೆಲ್ಲ ಕಾಂಗ್ರೆಸ್ ಅನ್ನು ಬಡಿದು ಹಾಕಿ, ಉತ್ತರ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ಕೆಲವು ಕಡೆ ಬಿಜೆಪಿಯ ಬೆನ್ನಿಗೆ ನಿಂತು, ಕಾಂಗ್ರೆಸ್ ಅನ್ನು ಕೆಡವಿ ಹಾಕುವುದು ಉತ್ತಮ ಎಂಬ ತೀರ್ಮಾನಕ್ಕೆ ಎಚ್ ಡಿಕೆ ಬಂದಿದ್ದಾರೆ.
ಇತ್ತ ಬಿಜೆಪಿ ಹೈಕಮಾಂಡ್ ಗೆ ಕೂಡ ಯಡಿಯೂರಪ್ಪ ಅವರಿಗೆ ವಿಶ್ರಾಂತಿ ನೀಡಿದ ಮೇಲೆ ಕಾಂಗ್ರೆಸ್ ಮತ್ತು ಜೆಡಿಎಸ್ ಅನ್ನು ಜತೆಯಾಗಿ ಎದುರಿಸುವ ಸಾಮರ್ಥ್ಯ ಇಲ್ಲ ಎಂಬುದು ಗೊತ್ತಿದೆ. ಯಡಿಯೂರಪ್ಪ ಅವರೇನೋ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಜತೆಗೆ ಒಟ್ಟಾಗಿದ್ದುಕೊಂಡು, ಹೈಕಮಾಂಡ್ ಗಡುವು ಮೀರಿಯೂ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ.
ಇಂಥ ಸನ್ನಿವೇಶದಲ್ಲಿ ಜೆಡಿಎಸ್ ತಮ್ಮ ಜತೆಗಿಟ್ಟುಕೊಳ್ಳುವುದು ಉತ್ತಮ ಎಂಬ ನಿರ್ಧಾರ ಬಿಜೆಪಿಯ ದೆಹಲಿ ಪಡಸಾಲೆಯಿಂದಲೇ ಬಂದಿದೆ. ಈ ಕಾರಣದಿಂದಲೇ ಜೆಡಿಎಸ್- ಎಚ್.ಡಿ. ಕುಮಾರಸ್ವಾಮಿ ಜತೆಗೆ ದೆಹಲಿ ನಾಯಕರೇ ನೇರವಾಗಿ ಸಂಪರ್ಕದಲ್ಲಿದ್ದಾರೆ. ಈಚೆಗೆ ಕುಮಾರಸ್ವಾಮಿ ಬರ್ತ್ ಡೇಗೆ ಸ್ವತಃ ಪ್ರಧಾನಮಂತ್ರಿಗಳೇ ಶುಭ ಹಾರೈಸಿದ್ದಾರೆ.

ದೇವೇಗೌಡರ ಸೆಕ್ಯುಲರ್ ಇಮೇಜ್ ಗತಿ ಏನು?
ಹಾಗಿದ್ದರೆ ದೇವೇಗೌಡರ ಸೆಕ್ಯುಲರ್ ಇಮೇಜ್ ಗತಿ ಏನು? ಈ ವಯಸ್ಸಿನಲ್ಲಿ ಅವರಿಗೆ ಮತ್ತೊಂದು ಆಘಾತ ತಡೆಯುವುದಕ್ಕೆ ಸಾಧ್ಯವಾ ಅಂದರೆ, ಅದೇ ಕಾರಣದಿಂದಲೇ ಎಂಎಲ್ ಸಿ- ಜೆಡಿಎಸ್ ಹಿರಿಯ ನಾಯಕರಾದ ಬಸವರಾಜ ಹೊರಟ್ಟಿ ಹೇಳಿಕೆ ನೀಡಿದ್ದಾರೆ: ಗೌಡರೇ ನಮ್ಮ ರಾಜಕೀಯ ಭವಿಷ್ಯ ನೋಡಿಕೊಳ್ಳಬೇಕಿದೆ. ನೀವು ಈ ವಿಚಾರದಲ್ಲಿ ತಲೆ ಹಾಕಬೇಡಿ. ನಾವು ನಿರ್ಧಾರ ಮಾಡ್ತೀವಿ ಅಂದಿರುವುದಾಗಿ ಅವರು ಹೇಳುತ್ತಿದ್ದಾರೆ.
ಅಲ್ಲಿಗೆ, ಸೋತರೆ ನೋಡೋದಿಕ್ಕೆ ಹೋಗಿದ್ದೆ; ಗೆದ್ದರೆ ಆಡೋದಿಕ್ಕೆ ಹೋಗಿದ್ದೆ ಎಂಬ ಆಟದಿಂದ ಈ ಸಲ ಜೆಡಿಎಸ್ ಒಂದು ಹೆಜ್ಜೆ ಮುಂದಕ್ಕೆ ಇಟ್ಟಿದೆ. ಮೇಲ್ನೋಟದ ಲೆಕ್ಕಾಚಾರ ಗಮನಿಸಿದಲ್ಲಿ ಬಿಜೆಪಿ ಜತೆಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದು ರಾಜಕಾರಣದ ಪಡಸಾಲೆಯಲ್ಲಿ ಲಾಭದಾಯಕ ಅಂತಲೇ ಬಿಂಬಿತ ಆಗುತ್ತಿದೆ. ಏಕೆಂದರೆ, ಬಿಜೆಪಿ ಹಾಗೂ ಜೆಡಿಎಸ್ ಎರಡೂ ಒಂದೇ ಮತ ಬುಟ್ಟಿಗೆ ಕೈ ಹಾಕೋದಿಲ್ಲ ಹಾಗೂ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರಂತೆ ಕುಮಾರಸ್ವಾಮಿ ಕತ್ತಿ ಹಿರಿದು ಕಾದಾಡಬೇಕಿಲ್ಲ.
ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಕೆಳಗಿಳಿಸಿದ ಮೇಲೆ ಕೇಸರಿ ಪಡೆ ಪಾಲಿಗೆ ಕುಮಾರಣ್ಣ ಟ್ರಬಲ್ ಶೂಟರ್ ಆಗಲಿದ್ದಾರೆ. ಇನ್ನು ನಸೀಬು ಗಟ್ಟಿಯಿದ್ದರೆ ಮತ್ತೊಂದು ಸಲ ಎಚ್ ಡಿಕೆ ರಾಜ್ಯದ ಮುಖ್ಯಮಂತ್ರಿಯಾದರೂ ಅಚ್ಚರಿ ಇಲ್ಲ. ಏಕೆಂದರೆ, ಯಡಿಯೂರಪ್ಪ ಕೆಳಗಿಳಿದ ಕೂಡಲೇ ಲಿಂಗಾಯತ ಸಮುದಾಯದವರನ್ನು ಎದುರಿಸುವುದಕ್ಕೆ ಬೇಕಾದ ಬ್ಯಾಕ್ ಅಪ್ ಹಾಗೂ ದೊಡ್ಡ ಇಮೇಜು ಸದ್ಯಕ್ಕಂತೂ ಬಿಜೆಪಿಯಲ್ಲಿ ಕಾಣುತ್ತಿಲ್ಲ.












Click it and Unblock the Notifications