Darshan Bad Time: ದರ್ಶನ್ ದೈವ ಭಕ್ತ, ಆದರೆ ನವೆಂಬರ್ವರೆಗೂ ಟೈಮ್ ಚೆನ್ನಾಗಿಲ್ಲ- ಲತಾ ಜೈಪ್ರಕಾಶ್
ಬೆಂಗಳೂರು ಜುಲೈ 25: ದರ್ಶನ್ ಅಣ್ಣನಿಗೆ ನವೆಂಬರ್ವರೆಗೂ ಟೈಮ್ ಚೆನ್ನಾಗಿಲ್ಲ ಅನ್ನೋದು ಮೊದಲೇ ಗೊತ್ತಿತ್ತು ಎಂದು ವಿಜಯಲಕ್ಷ್ಮಿ ಆಪ್ತೆ ಹಾಗೂ ನಿರ್ಮಾಪಕಿ ಲತಾ ಜೈಪ್ರಕಾಶ್ ಹೇಳಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರನ್ನು ಕಾಣಲು ಸಾಕಷ್ಟು ಚಂದನದವನದ ತಾರೆಯರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡುತ್ತಿದ್ದಾರೆ. ಈ ನಡುವೆ ಕೆಲವರು ದರ್ಶನ್ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಈ ಪೈಕಿ ನಿರ್ಮಾಪಕಿ ಲತಾ ಜೈಪ್ರಕಾಶ್ ಕೂಡ ದರ್ಶನ್ ಅವರ ಬಗ್ಗೆ ಮಾತನಾಡಿದ್ದು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ದರ್ಶನ್ ಅಣ್ಣ ಹಾಗೂ ವಿಜಯಲಕ್ಷ್ಮಿ ಅತ್ತಿಗೆ ಇಬ್ಬರೂ ದೈವ ಭಕ್ತರು. ದರ್ಶನ್ ಅಣ್ಣ ದೇವರನ್ನು ತುಂಬಾ ನಂಬುತ್ತಿದ್ದರು. ಆದರೂ ಯಾಕೆ ಹೀಗೆ ಆಯ್ತೋ ಗೊತ್ತಿಲ್ಲ. ಅತ್ತಿಗೆಯಿಂದಲೇ ದರ್ಶನ್ ಅಣ್ಣನಿಗೆ ಬಲ ಎಂದು ಲತಾ ಜೈಪ್ರಕಾಶ್ ಅವರು ಹೇಳಿದ್ದಾರೆ.
ದರ್ಶನ್ ದೈವ ಭಕ್ತ
ದರ್ಶನ್ ಅಣ್ಣ ದೇವಸ್ಥಾನಕ್ಕೆ ಬರುತ್ತಿದ್ದರು. ಆದರೆ ಅವರು ಜನ ಇದ್ದಾಗ ದೇವಸ್ಥಾನಕ್ಕೆ ಬರುತ್ತಿರಲಿಲ್ಲ. ದೇವಸ್ಥಾನಕ್ಕೆ ಬರಬೇಕು ಅನಿಸಿದಾಗ ಮಿಡ್ ನೈಟ್ ಆದರೂ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಿದ್ದರು. ಈ ಸಮಸ್ಯೆಯಿಂದ ದರ್ಶನ್ ಅಣ್ಣ ಬೇಗ ಹೊರಬರಲಿ. ವಿಜಯಲಕ್ಷ್ಮಿ ಅತ್ತಿಗೆ ಕೂಡ ಮನೆ ದೇವರು ಮುನೇಶ್ವರನಿಗೆ ಹರಕೆ ಕಟ್ಟಿಕೊಂಡಿದ್ದಾರೆ ಎಂದು ಬಂಡೆ ಮಹಾಕಾಳಮ್ಮ ದೇವಸ್ಥಾನದ ಟ್ರಸ್ಟಿ ಲತಾ ಜೈಪ್ರಕಾಶ್ ಹೇಳಿದರು.

ದರ್ಶನ್ ಅಣ್ಣ ಜೈಲು ಸೇರಿದಾಗಿನಿಂದಲೂ ವಿಜಯಲಕ್ಷ್ಮಿ ಅತ್ತಿಗೆ ಅವರ ಹೋರಾಟ ಹಾಗೂ ಓಡಾಟ ಜಾಸ್ತಿ ಆಗಿದೆ. ಇದರಿಂದಾಗಿ ವಿಜಯಲಕ್ಷ್ಮಿ ಅವರು ಪ್ರತೀ ಬಾರಿ ಆಷಾಢದಲ್ಲಿ ದೇವಸ್ಥಾನಕ್ಕೆ ಬರುತ್ತಿದ್ದವರು ಈ ಬಾರಿ ಬಂದಿಲ್ಲ. ದೇವಸ್ಥಾನದಲ್ಲಿ ಪ್ರತೀ ಆಷಾಢದಲ್ಲೂ ಅತ್ತಿಗೆ ನನಗೆ ಸಿಗುತ್ತಿದ್ದರು.
ಈ ಪ್ರಕರಣ ಎಲ್ಲರಿಗೂ ಪಾಠ!
ಇದರಿಂದ ಅವರ ಸ್ಥಿತಿ ಹೇಗಿದೆ ಅನ್ನೋದು ಗೊತ್ತಾಗುತ್ತದೆ. ದರ್ಶನ್ ಅಣ್ಣ ಆರೋಪಿ ಸ್ಥಾನದಲ್ಲಿ ಇದ್ದಾರೆ. ಆದಷ್ಟು ಬೇಗ ಅವರು ಆಚೆ ಬರಲಿ ಅಂತ ನಾನೂ ಕೂಡ ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ರೇಣುಕಾಸ್ವಾಮಿ ಕುಟುಂಬಕ್ಕೂ ಕರುಣೆ ತೋರಬೇಕು. ಒಂದು ಸಣ್ಣ ವಿಚಾರದಿಂದ ಒಂದು ಜೀವವೇ ಹೋಗಿದೆ. ಇದರಿಂದ ಎಲ್ಲರೂ ಪಾಠ ಕಲಿಯಬೇಕಾಗಿದೆ ಎಂದು ಲತಾ ಜೈಪ್ರಕಾಶ್ ಅವರು ಹೇಳಿದ್ದಾರೆ.

ದರ್ಶನ್ ಅಣ್ಣ ತುಂಬಾ ಜನರಿಗೆ ಸಹಾಯ ಮಾಡಿದ್ದಾರೆ. ಹೀಗಿದ್ದರೂ ಅವರು ಒಂದು ಕಂಟಕದಲ್ಲಿ ಸಿಕ್ಕಿಬಿದ್ದಿದ್ದಾರೆ. ಇದಕ್ಕಾಗಿ ಜೀವನದಲ್ಲಿ ಏನೇ ಮಾಡಿದರೂ ಶಾಂತವಾಗಿ ಯೋಚಿಸಿ ನಡೆಯಬೇಕು ಎಂಬ ಪಾಠ ಈ ಪ್ರಕರಣದಿಂದ ಕಲಿಯಬೇಕಾಗಿದೆ. ಏನೇ ಮಾಡಬೇಕು ಅಂದರೂ ದೈವ ಬಲ ಇರಬೇಕು ಎಂದಿದ್ದಾರೆ.
ನನಗೆ ಸುಮಾರು ಹತ್ತು ವರ್ಷದಿಂದಲೂ ವಿಜಯಲಕ್ಷ್ಮಿ ಅತ್ತಿಗೆ ಪರಿಚಯವಿದೆ. ದರ್ಶನ್ ಅಣ್ಣ 'ಅಂಬರೀಶ್' ಸಿನಿಮಾ ಮೂಲಕ ಪರಿಚಯವಾಗಿ ನನ್ನ ತಮ್ಮನಿಗೂ ಕ್ಲೋಸ್ ಆಗಿದ್ದರು. ಅತ್ತಿಗೆನೇ ಅಣ್ಣನಿಗೆ ಬಲ ಆಗಿದ್ದಾರೆ. ಈ ಸಂದರ್ಭದಿಂದಾಗಿ ಅತ್ತಿಗೆ ಕೂಡ ಕೊರಗುವಂತಾಗಿದೆ. ಎಲ್ಲಾ ಆದಷ್ಟು ಬೇಗ ಸರಿ ಹೋಗಲಿ ಅನ್ನೋದು ನನ್ನ ಆಸೆ. ಇದರಿಂದ ಬೇಗ ದರ್ಶನ್ ಅಣ್ಣ ಹೊರಬರಬೇಕು. ಈ ಸಮಸ್ಯೆ ಬಗೆ ಹರಿಯಬೇಕು ಎಂದು ನಾನು ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಲತಾ ಜೈಪ್ರಕಾಶ್ ಮಾತನಾಡಿದ್ದಾರೆ.

ದರ್ಶನ್ಗೆ ಜೈಲೂಟ ಫಿಕ್ಸ್
ದರ್ಶನ್ ನ್ಯಾಯಾಂಗ ಬಂಧನದ ಅವಧಿ ಆಗಸ್ಟ್ 1ರ ತನಕ ವಿಸ್ತರಣೆಯಾಗಿದೆ. ಈ ನಡುವೆ ಮನೆಯ ಊಟ ತರಿಸಿಕೊಳ್ಳಲು ಅವಕಾಶ ನೀಡಬೇಕು ಎಂಬ ದರ್ಶನ್ ಅರ್ಜಿಯನ್ನು ಬೆಂಗಳೂರಿನ ನ್ಯಾಯಾಲಯ ವಜಾಗೊಳಿಸಿದೆ. ನ್ಯಾಯಾಂಗ ಬಂಧನದಲ್ಲಿರುವ ವಿಚಾರಣಾಧೀನ ಕೈದಿ ದರ್ಶನ್ಗೆ ಮನೆಯ ಊಟ ತರಿಸಿಕೊಳ್ಳಲು ಕೋರ್ಟ್ ಒಪ್ಪಿಗೆ ನೀಡಿಲ್ಲ. ಆದ್ದರಿಂದ ಅವರಿಗೆ ಜೈಲು ಊಟವೇ ಫಿಕ್ಸ್ ಆಗಿದೆ.












Click it and Unblock the Notifications