Actor Darshan: ದಸರಾ ಹಬ್ಬದ ವೇಳೆ ದರ್ಶನ್ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ ದಿನಕರ್ ತೂಗುದೀಪ್
ನಟ ದರ್ಶನ್ಗೆ ಜಾಮೀನು ಸಿಗುತ್ತಾ ಇಲ್ಲವಾ ಎನ್ನುವುದು ಅಕ್ಟೋಬರ್ 14ರಂದು, ಸೋಮವಾರದಂದು ತಿಳಿಯಲಿದೆ. ಜಾಮೀನು ಅರ್ಜಿಯ ಸುದೀರ್ಘ ವಿಚಾರಣೆಯನ್ನು ಆಲಿಸಿರುವ 57ನೇ ಸೆಷನ್ಸ್ ಕೋರ್ಟ್ ಸೋಮವಾರಕ್ಕೆ ಆದೇಶವನ್ನು ಕಾಯ್ದಿರಿಸಿದೆ. ದರ್ಶನ್ಗೆ ಸೋಮವಾರ ಜಾಮೀನು ಸಿಗಲಿ ಎಂದು ಕಾಯುತ್ತಿರುವ ಅಭಿಮಾನಿಗಳಿಗೆ ದಿನಕರ್ ತೂಗುದೀಪ್ ಸಂತೋಷದ ಸುದ್ದಿ ಕೊಟ್ಟಿದ್ದಾರೆ.
ದರ್ಶನ್ ಸಹೋದರ ದಿನಕರ್ ತೂಗುದೀಪ್ ನಿರ್ದೇಶನದ ದರ್ಶನ್, ವಿನೋದ್ ಪ್ರಭಾಕರ್ ಸೇರಿ ಅದ್ದೂರಿ ತಾರಾಗಣವಿರುವ ಸೂಪರ್ ಹಿಟ್ ಸಿನಿಮಾ ನವಗ್ರಹ ಮತ್ತೆ ಬಿತ್ರಮಂದಿಕ್ಕೆ ಬರಲು ಸಜ್ಜಾಗಿದೆ. ದಿನಕರ್ ತೂಗುದೀಪ್ ನವಗ್ರಹ ಮರು ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ದಿನಕರ್ ತೂಗುದೀಪ್ ಹೇಳಿದ್ದೇನು?
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, "ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾ ಹಾಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು. ನಮ್ಮ ನಲ್ಮೆಯ ಸೆಲೆಬ್ರಿಟಿಗಳಿಂದ ಪ್ರೀತಿಯ ಕೋರಿಕೆಯ ಮೇರೆಗೆ ಸೆಲೆಬ್ರಿಟಿಗಳಿಗಾಗಿ ಸೆಲೆಬ್ರಿಟಿಗಳಿಗೋಸ್ಕರ.. ನೀವು ನೋಡಿ ಮೆಚ್ಚಿ ಹಾರೈಸಿದ 'ನವಗ್ರಹ' ಮತ್ತೆ ಮರುಬಿಡುಗಡೆಗೆ ಸಿದ್ಧವಾಗಿದೆ. ನಿಮ್ಮ ಪ್ರೀತಿ-ಬೆಂಬಲ ಸದಾ ಕನ್ನಡ ಚಿತ್ರರಂಗದ ಮೇಲಿರಲಿ." ಎಂದು ಹೇಳಿದ್ದಾರೆ.
2008ರಲ್ಲಿ ಬಿಡುಗಡೆಯಾಗಿದ್ದ ನವಗ್ರಹ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸೂಪರ್ ಡೂಪರ್ ಹಿಟ್ ಆಗಿದ್ದ ಸಿನಿಮಾ. ದರ್ಶನ್ ನೆಗೆಟಿವ್ ಶೇಡ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೈಸೂರು ಅರಮನೆಯಲ್ಲಿರುವ ಅಂಬಾರಿ ಕದಿಯುವ ಕಥೆಯನ್ನು ಹೊಂದಿದ್ದ, ಆಕ್ಷನ್ ಥ್ರಿಲ್ಲರ್ ಸಿನಿಮಾ ನವಗ್ರಹ ಮತ್ತೆ ದರ್ಶನ್ ಅಭಿಮಾನಿಗಳಿಗೆ ಮನರಂಜನೆ ನೀಡಲು ಸಜ್ಜಾಗಿದೆ.
ದರ್ಶನ್ ಜೊತೆಗೆ ಕನ್ನಡ ಸಿನಿಮಾರಂಗದ ಪ್ರಮುಖ ವಿಲನ್ಗಳ ಮಕ್ಕಳು ಅಭಿನಯಿಸಿದ್ದು ಮತ್ತೊಂದು ವಿಶೇಷ. ದರ್ಶನ್ ತೂಗುದೀಪ, ವಿನೋದ್ ಪ್ರಭಾಕರ್, ಸೃಜನ್ ಲೋಕೇಶ್, ಧರ್ಮ ಕೀರ್ತಿರಾಜ್, ನಾಗೇಂದ್ರ ಅರಸ್, ತರುಣ್ ಸುಧೀರ್, ಗಿರಿ ದಿನೇಶ್, ಶರ್ಮಿಳಾ ಮಾಂಡ್ರೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ದರ್ಶನ್ಗೆ ಜಾಮೀನು ಯಾವಾಗ?
ಸೋಮವಾರ ನ್ಯಾಯಾಲಯ ದರ್ಶನ್ ಜಾಮೀನು ಅರ್ಜಿ ಸಂಬಂಧಿಸಿದಂತೆ ಆದೇಶ ನೀಡಲಿದೆ. ದರ್ಶನ್ ಪರವಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದಿಸಿದ್ದಾರೆ. ಆರೋಪ ಪಟ್ಟಿಯಲ್ಲಿರುವ ಲೋಪದೋಷಗಳನ್ನಿಟ್ಟುಕೊಂಡು ವಾದ ಮಂಡಿಸಿದರುವ ಸಿ.ವಿ. ನಾಗೇಶ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ವಿರುದ್ಧ ಸಾಕ್ಷಿಗಳನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ.
ಚಾರ್ಜ್ಶೀಟ್ನಲ್ಲಿರುವ ಹಲವು ಅಂಶಗಳನ್ನು ಇಟ್ಟುಕೊಂಡು ಸಾಕ್ಷಿಗಳ ಕೊರತೆಯಿದೆ ಎಂದು ವಾದಿಸಿದ್ದು, ದರ್ಶನ್ ತಪ್ಪು ಮಾಡಿರುವುದಕ್ಕೆ ಸಾಕ್ಷಿಗಳ ಕೊರತೆ ಇದ್ದು, ಪೊಲೀಸರೇ ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ ಎಂದು ಹೇಳಿದ್ದಾರೆ. ಎಸ್ಪಿಪಿ ಪ್ರಸನ್ನ ಕುಮಾರ್ ಇದಕ್ಕೆ ಪ್ರತಿವಾದ ಮಾಡಿದ್ದು, ದರ್ಶನ್ಗೆ ಜಾಮೀನು ಕೊಡಬಾರದು ಎಂದು ವಾದಿಸಿದ್ದಾರೆ.
ವಾದ-ಪ್ರತಿವಾದ ಆಲಿಸಿದರುವ ನ್ಯಾಯಾಧೀಶರು, ಸೋಮವಾರಕ್ಕೆ ಆದೇಶವನ್ನು ಕಾಯ್ದಿರಿಸಿದರು. ದಸರಾ ಹಬ್ಬಕ್ಕೆ ಮುನ್ನವೇ ದರ್ಶನ್ಗೆ ಜಾಮೀನು ಸಿಗುತ್ತದೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ, ಕುಟುಂಬಸ್ಥರಿಗೆ ನಿರಾಸೆಯಾಗಿದ್ದು, ಸೋಮವಾರವಾದರೂ ಜಾಮೀನು ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.












Click it and Unblock the Notifications