Dhananjay Meets Ramya: ಸ್ಯಾಂಡಲ್ವುಡ್ ಕ್ವೀನ್ಗೆ ಮದುವೆ ಆಹ್ವಾನ ಪತ್ರಿಕೆ ನೀಡಿದ ಡಾಲಿ ಧನಂಜಯ
ಮದುವೆಯ ಸಿದ್ಧತೆಯಲ್ಲಿದ್ದಾರೆ. ಮದುವೆ ದಿನ ಹತ್ತಿರವಾಗುತ್ತಿದ್ದಂತೆ ಲಗ್ನ ಪತ್ರಿಕೆಯನ್ನು ಹಂಚುತ್ತಿದ್ದು ಪ್ರಮುಖ ಗಣ್ಯರನ್ನು ಮದುವೆಗೆ ಆಹ್ವಾನಿಸುತ್ತಿದ್ದಾರೆ. ಸಿದ್ದಗಂಗಾಶ್ರೀಗಳಿಗೆ ಲಗ್ನಪತ್ರಿಕೆ ನೀಡಿ ಆಶೀರ್ವಾದ ಪಡೆಯುವ ಮೂಲಕ ಆಮಂತ್ರಣ ಪತ್ರಿಕೆ ಹಂಚಲು ಆರಂಭಿಸಿದ್ದು, ಈಗಾಗಲೇ ಪ್ರಮುಖ ರಾಜಕೀಯ ನಾಯಕರು, ಸಿನಿ ಪ್ರಮುಖರಿಗೆ ಆಹ್ವಾನ ನೀಡಿದ್ದಾರೆ.
ಶನಿವಾರ ಕೂಡ ಧನಂಜಯ ಹಲವು ಪ್ರಮುಖರನ್ನು ಭೇಟಿ ಮಾಡಿ ಮದುವೆಗೆ ಆಹ್ವಾನ ನೀಡಿದ್ದಾರೆ. ಸ್ಯಾಂಡಲ್ವುಡ್ ಕ್ವೀನ್, ನಟಿ ರಮ್ಯಾರನ್ನು ಭೇಟಿ ಮಾಡಿರುವ ಧನಂಜಯ ತಮ್ಮ ಮದುವೆಗೆ ಬರುವಂತೆ ಆಹ್ವಾನ ನೀಡಿದ್ದಾರೆ. ರಮ್ಯಾರನ್ನು ಭೇಟಿ ಮಾಡಿ ಲಗ್ನಪತ್ರಿಕೆ ನೀಡಿರುವ ಫೋಟೊವನ್ನು ಧನಂಜಯ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಶನಿವಾರ ಹಲವರಿಗೆ ಆಹ್ವಾನ
ಶನಿವಾರ ಕೂಡ ಹಲವು ಗಣ್ಯರನ್ನು ಭೇಟಿಯಾಗಿರುವ ಅವರು ಮದುವೆಗೆ ಆಹ್ವಾನಿಸಿದ್ದಾರೆ. ಹಿರಿಯ ನಟ ವಿ ರವಿಚಂದ್ರನ್, ಮನೋರಂಜನ್ ರವಿಚಂದ್ರನ್, ಶಾಸಕ ಪ್ರದೀಪ್ ಈಶ್ವರ್, ಸಚಿವ ರಾಮಲಿಂಗಾರೆಡ್ಡಿ, ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ, ಹಿರಿಯ ನಟ ಜಗ್ಗೇಶ್, ಶಾಮನೂರು ಶಿವಶಂಕರಪ್ಪ ಸೇರಿ ಹಲವರನ್ನು ಭೇಟಿಯಾಗಿ ಮದುವೆಗೆ ಆಹ್ವಾನ ನೀಡಿದರು.
ಈಗಾಗಲೇ ಸಿನಿಗಣ್ಯರು, ರಾಜಕಾರಣಿಗಳು ಹಾಗೂ ಮಠಾಧೀಶರುಗಳಿಗೆ ಮದುವೆಯ ಆಹ್ವಾನ ಪತ್ರಿಕೆ ನೀಡಿದ್ದು ಇನ್ನೂ ಹಲವರಿಗೆ ಆಹ್ವಾನ ನೀಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, ನಟ ರಾಘವೇಂದ್ರ ರಾಜ್ಕುಮಾರ್, ಯುವ ರಾಜ್ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಸೇರಿದಂತೆ ಹಲವು ಸಿನಿಮಾ ಸೆಲೆಬ್ರಿಟಿಗಳಿಗೆ ಮದುವೆಯ ಆಮಂತ್ರಣ ಪತ್ರಿಕೆ ನೀಡಿದ್ದಾರೆ.
ನಟ ಧನಂಜಯ್ ಯಾವ ಗಾಡ್ಫಾದರ್ ಇಲ್ಲದೆ ಚಿತ್ರರಂಗಕ್ಕೆ ಬಂದು ಹೀರೋ ಆದವರು. ಆರಂಭದಲ್ಲಿ ನಾಯಕನಾಗಿ ಹಲವು ಚಿತ್ರ ಮಾಡಿದರೂ ಸಿಗದ ಯಶಸ್ಸು ಟಗರು ಸಿನಿಮಾದಲ್ಲಿ ಖಳನಟನಾಗಿ ಅಬ್ಬರಿಸಿದ ಬಳಿಕ ಸಿಕ್ಕಿತು. ಧನಂಜಯನಾಗಿದ್ದ ಅವರು ರಾತ್ರೋ ರಾತ್ರಿ ಡಾಲಿ ಧನಂಜಯ್ ಆಗಿ ಜನಪ್ರಿಯತೆ ಗಳಿಸಿದರು.
ಅದಾದ ಬಳಿಕ ಬಡವ ರಾಸ್ಕರ್ ಸಿನಿಮಾದಲ್ಲಿ ನಾಯಕನಾಗಿ ನಟಿಸಿ ಯಶಸ್ಸು ಪಡೆದುಕೊಂಡರು. ತೆಲುಗು ಸಿನಿಮಾಗಳಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡರು. ಇದೀಗ ತಮ್ಮದೇ ನಿರ್ಮಾಣ ಸಂಸ್ಥೆ ಡಾಲಿ ಪಿಕ್ಚರ್ಸ್ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದು, ಉತ್ತಮ ಸಿನಿಮಾಗಳ ನಿಮಾರ್ಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ನವೆಂಬರ್ 1ರಂದು ಧನಂಜಯ ತಮ್ಮ ಮದುವೆ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದ ಅವರು, ಬಾಳಸಂಗಾತಿಯನ್ನು ಅಭಿಮಾನಿಗಳಿಗೆ ಪರಚಯಿಸಿದ್ದರು. ಮೈಸೂರಿನವರಾದ ವೈದ್ಯೆ ಧನ್ಯತಾರನ್ನು ಮದುವೆಯಾಗುತ್ತಿರುವುದಾಗಿ ತಿಳಿಸಿದ್ದರು.
ಫೆಬ್ರವರಿ 15ರಂದು ಆರತಕ್ಷತೆ ನಡೆಯಲಿದ್ದು, ಫೆಬ್ರವರಿ 16ರಂದು ಮುಹೂರ್ತ ನಡೆಯಲಿದೆ. ಮೈಸೂರಿನ ಅಂಬಾವಿಲಾಸ ಅರಮನೆಯ ಮುಂಭಾಗದ ವಸ್ತು ಪ್ರದರ್ಶನ ಮೈದಾನದಲ್ಲಿ ಧನಂಜಯ-ಧನ್ಯತಾ ಹಸೆಮಣೆ ಏರಲಿದ್ದಾರೆ.












Click it and Unblock the Notifications