'ಅಷ್ಟು ದೊಡ್ಡ ವ್ಯಕ್ತೀನ ಏನೂ ಇಲ್ದೆ ಕರ್ಕೊಂಡ್ ಹೋಗೋಕಾಗಲ್ಲ..' ಕಿಚ್ಚ ಹೇಳಿದ್ದು ಯಾರ ಬಗ್ಗೆ?
ಸ್ಯಾಂಡಲ್ವುಡ್ ನಟರಾದ ಕಿಚ್ಚ ಸುದೀಪ್ ಹಾಗೂ ದರ್ಶನ್ ತೂಗುದೀಪ ಅವರು ಮೊದಲೆಲ್ಲ ಅನ್ಯೋನ್ಯವಾಗಿದ್ದವರು. ಕಾರಣಾಂತರಗಳಿಂದ ಇಬ್ಬರೂ ದೂರವಾಗಿ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದರು. ಸದ್ಯ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ತೂಗುದೀಪ ಜೈಲು ಸೇರಿದ್ದಾರೆ. ಈ ಬಗ್ಗೆ ನಟ ಕಿಚ್ಚ ಸುದೀಪ್ ಅವರು ಸಂದರ್ಶನವೊಂದರಲ್ಲಿ ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ದರ್ಶನ್ ಅವರು ಜೈಲು ಸೇರಿರುವ ಬಗ್ಗೆ ಮಾತನಾಡಿರುವ ಸುದೀಪ್, ಅಷ್ಟು ದೊಡ್ಡ ವ್ಯಕ್ತಿಯನ್ನು ನೀವು ಏನೂ ಇಲ್ಲದೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸುವರ್ಣ ನ್ಯೂಸ್ ವರದಿ ಮಾಡಿದೆ.

ಇನ್ನು ವಾಹಿನಿಯು ಹಂಚಿಕೊಂಡಿರುವ ಸಂದರ್ಶನದ ಪ್ರೋಮೋದಲ್ಲಿ ಸಂದರ್ಶಕರು ದರ್ಶನ್ ಅವರ ವಿಚಾರವನ್ನೇ ಉಲ್ಲೇಖ ಮಾಡಿ ಹಲವು ಪ್ರಶ್ನೆಗಳನ್ನು ಸುದೀಪ್ ಅವರಿಗೆ ಕೇಳಿದ್ದಾರೆ. ಇದಕ್ಕೆ ಸುದೀಪ್ ಅವರು ಉತ್ತರಿಸಿರುವ ಕೆಲವೇ ಮಾತುಗಳನ್ನಷ್ಟೇ ಪ್ರೋಮೋದಲ್ಲಿ ಹಂಚಿಕೊಳ್ಳಲಾಗಿದೆ.
ʼಅನವಶ್ಯಕ ಕಾರಣಗಳಿಂದ ಏನಾದರೂ ನಡೆದಾಗ ಅದರಿಂದ ದೂರ ಇರುವುದೇ ಒಳ್ಳೆಯದು. ನಾನು ಯಾರದ್ದೋ ಭುಜದ ಮೇಲೆ ಫೈರ್ ಮಾಡೋ ವ್ಯಕ್ತಿ ನಾನಲ್ಲ. ಕೆಲವರು ನನಗೆ ಸೂಟ್ ಆಗ್ತಾರೆ, ಇನ್ನೂ ಕೆಲವರು ನನಗೆ ಸೂಟ್ ಆಗಲ್ಲ ಅಷ್ಟೇ..ʼ ಎಂದೆಲ್ಲ ಸುದೀಪ್ ಮಾತನಾಡಿದ್ದಾರೆ.

ಈ ಕೊಲೆ ವಿಚಾರ ಹೊರಗೆ ಬಂದಾಗ ನಿಮಗೆ ಏನನ್ನಿಸಿತು? ಎಂಬ ಪ್ರಶ್ನೆಯನ್ನು ಸುದೀಪ್ ಅವರಿಗೆ ಕೇಳಲಾಗಿದ್ದು, ʼಅಷ್ಟು ದೊಡ್ಡ ವ್ಯಕ್ತಿಯನ್ನು ನೀವು ಏನೂ ಇಲ್ಲದೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಇದೆಲ್ಲ ಏನಿಕ್ಕೆ ಬೇಕಿತ್ತು?ʼ ಎಂದೆಲ್ಲ ಹೇಳಿದ್ದಾರೆ. ಸದ್ಯ ಈ ಪ್ರೋಮೋ ಕುತೂಹಲ ಮೂಡಿಸಿದ್ದು, ಇಂದು ಸಂಜೆ ಪ್ರಸಾರವಾಗಲಿರುವ ಈ ಸಂದರ್ಶನದಲ್ಲಿ ಸುದೀಪ್ ಅವರು ದರ್ಶನ್ ಕುರಿತಾಗಿ ಏನೆಲ್ಲ ಮಾತನಾಡಿರಬಹುದು? ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಮತ್ತೊಂದು ಪ್ರೋಮೋದಲ್ಲಿ ಕನ್ನಡ ಚಿತ್ರರಂಗಕ್ಕೆ ಒಬ್ಬರು ಬಿಗ್ಬಾಸ್ ಬೇಕಾ? ಎಂಬ ಪ್ರಶ್ನೆಯನ್ನು ಸುದೀಪ್ ಅವರಿಗೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ಸುದೀಪ್, ʼಶಿವಣ್ಣ ಇದ್ದಾರೆ, ರವಿಚಂದ್ರನ್ ಇದ್ದಾರೆ. ನಾವು ಇಂದಿಗೂ ಅವರ ಮಾತುಗಳನ್ನು ಕೇಳುತ್ತೇವೆ ಎಂದಿದ್ದಾರೆ.
ʼನಾವು ಸಿನಿಮಾದವರು, ಕೆಟ್ಟದಾಗಿ ಮಾತನಾಡಿಕೊಳ್ಳುವವರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಒಂದು ಸಿನಿಮಾ ನೋಡಲು ಒಂದು ಥಿಯೇಟರ್ಗೆ ನೂರಾರು ಮಂದಿ ಬರುತ್ತಾರೆ. ಅವರಲ್ಲಿ ಒಬ್ಬೊಬ್ಬರೂ ಒಂದೊಂದು ರೀತಿ ಮಾತನಾಡುತ್ತಾರೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳಬಾರದುʼ ಎಂದೂ ಮಾತನಾಡಿದ್ದಾರೆ.
ಇದೇ ಸಂದರ್ಶನದಲ್ಲಿ ಸುದೀಪ್ ತಮ್ಮ ಸಿನಿಮಾಗಳ ಕುರಿತಾಗಿಯೂ ಮಹತ್ವದ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಇತ್ತೀಚೆಗೆ ಕನ್ನಡದಲ್ಲಿ ಕಡಿಮೆ ಸಿನಿಮಾಗಳು ತೆರೆಗೆ ಬರುತ್ತಿರುವ ಕುರಿತಾಗಿಯೂ ಕಾರಣ ಬಿಚ್ಚಿಟ್ಟಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದ ನಟ ಸುದೀಪ್, ಮೃತ ರೇಣುಕಾಸ್ವಾಮಿ ಮತ್ತು ಆತನ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದಿದ್ದರು. ಮಾಧ್ಯಮಗಳಲ್ಲಿ ಏನು ಬರುತ್ತಿದೆಯೋ ಅಷ್ಟೇ ನನಗೂ ಗೊತ್ತಿರುವುದು. ಸತ್ಯವನ್ನು ಹೊರತರಲು ಮಾಧ್ಯಮಗಳು, ಪೊಲೀಸರು ಪ್ರಯತ್ನ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ ಈ ಪ್ರಕರಣದಲ್ಲಿ ಸತ್ಯ ಹೊರತರಲು ಆದೇಶಿಸಿದ್ದಾರೆ. ಸಾಮಾನ್ಯ ಮನುಷ್ಯನಾಗಿ ನಾನು ಯಾರ ಪರ, ವಿರುದ್ಧವೂ ಅಲ್ಲ, ಆದರೆ ಬಾಳಿ ಬದುಕಬೇಕಾದ ಹುಡುಗ ಸತ್ತಿದ್ದಾನಲ್ಲ ಆತನಿಗೆ ನ್ಯಾಯ ಸಿಗಬೇಕು, ಆತನ ಕುಟುಂಬಕ್ಕೆ, ಹುಟ್ಟುವ ಮಗುವಿಗೆ ನ್ಯಾಯ ಸಿಗಬೇಕು ಎಂದು ಸುದೀಪ್ ಹೇಳಿದ್ದರು.












Click it and Unblock the Notifications