ಎಚ್ಚರಿಕೆ ಗಂಟೆ: ಓಮಿಕ್ರಾನ್ ಹರಡುವಿಕೆ ಡೆಲ್ಟಾಗಿಂತ 3 ಪಟ್ಟು ಅಧಿಕ!
ನವದೆಹಲಿ, ಡಿಸೆಂಬರ್ 21: ಭಾರತದಲ್ಲಿ ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಮೂರನೇ ಅಲೆಯ ಭೀತಿಯನ್ನು ಹುಟ್ಟು ಹಾಕುತ್ತಿದೆ. ಎರಡನೇ ಅಲೆಯಲ್ಲಿ ಸಾವಿರಾರು ಜನರ ಪ್ರಾಣ ತೆಗೆದ ಡೆಲ್ಟಾ ರೂಪಾಂತರಕ್ಕಿಂತ ಓಮಿಕ್ರಾನ್ ಸೋಂಕಿನ ಹರಡುವಿಕೆ ವೇಗ ಮೂರು ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಓಮಿಕ್ರಾನ್ ರೂಪಾಂತರದ ವಿರುದ್ಧ ಹೋರಾಡುವುದಕ್ಕೆ ಸದಾ ಸನ್ನದ್ಧವಾಗಿರುವಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರ್ಕಾರಗಳಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೂಚನೆ ನೀಡಿದೆ.
ಕೊರೊನಾವೈರಸ್ ಸೋಂಕಿನ ಪರೀಕ್ಷೆ ಪ್ರಮಾಣ ಹೆಚ್ಚಿಸುವುದು, ಸಾರ್ವಜನಿಕವಾಗಿ ಜನರು ಸೇರದಂತೆ ಮುನ್ನೆಚ್ಚರಿಕೆ ವಹಿಸುವುದು, ಅಗತ್ಯವಾದಲ್ಲಿ ರಾತ್ರಿ ನಿಷೇಧಾಜ್ಞೆ ವಿಧಿಸುವುದು ಸೇರಿದಂತೆ ಓಮಿಕ್ರಾನ್ ಸೋಂಕು ಹರಡುವಿಕೆ ನಿಯಂತ್ರಿಸಲು ಎಲ್ಲ ರೀತಿ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ಈ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.

ಓಮಿಕ್ರಾನ್ ಕುರಿತು ರಾಜ್ಯಗಳಿಗೆ ಕೇಂದ್ರದ ಸಂದೇಶ:
* ಕೇಂದ್ರ ಆರೋಗ್ಯ ಸಚಿವಾಲಯದ ಪತ್ರದಲ್ಲಿ ತೆಗೆದುಕೊಂಡ ಕ್ರಮಗಳು ಸ್ಥಳೀಯ ಪ್ರದೇಶಗಳಲ್ಲಿ ಇರುವ ಪರಿಸ್ಥಿತಿಯನ್ನು ಆಧರಿಸಿ ಮಾರ್ಗಸೂಚಿಗಳನ್ನು ಹಾಕಲಾಗುತ್ತದೆ. ಅದನ್ನು ಪ್ರಾರಂಭಿಕ ಮಿತಿ ಎಂದು ಕರೆಯಲಾಗುತ್ತದೆ.
* ಕಳೆದ ಒಂದು ವಾರದಲ್ಲಿ ಪರೀಕ್ಷಿಸಿದ ಶೇ.10ರಷ್ಟು ಜನರಲ್ಲಿ ಕೊವಿಡ್-19 ಸೋಂಕು ಪತ್ತೆಯಾಗುತ್ತಿದೆ ಹಾಗೂ ಆಮ್ಲಜನಕ ಅಗತ್ಯವಿರುವ ತುರ್ತು ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುವವರ ಸಂಖ್ಯೆಯಲ್ಲಿ ಶೇ.40ರಷ್ಟು ಹೆಚ್ಚಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
* ಓಮಿಕ್ರಾನ್ ಸೋಂಕು ಹರಡುವಿಕೆಯ ಪ್ರಾರಂಭಿಕ ಹಂತದಲ್ಲಿ ಇರುವಾಗಲೇ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಳೀಯ ಆಡಳಿತವು ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.
* ಡೆಲ್ಟಾ ರೂಪಾಂತರ ವೈರಸ್ ಹಾಗೂ ಕೊವಿಡ್-19 ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ದೇಶದ ಹಲವು ಪ್ರದೇಶಗಳಲ್ಲಿ ಇಂದಿಗೂ ಪ್ರಸ್ತುತದಲ್ಲಿವೆ.
* ಓಮಿಕ್ರಾನ್ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ "ಹೆಚ್ಚಿನ ದೂರದೃಷ್ಟಿ, ದತ್ತಾಂಶ ವಿಶ್ಲೇಷಣೆ, ಕ್ರಿಯಾತ್ಮಕ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಕಟ್ಟುನಿಟ್ಟಾದ ಮತ್ತು ತ್ವರಿತ ಕ್ರಮಕ್ಕಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಕರೆ ನೀಡಿದೆ.
* ಕೊವಿಡ್-19 ಪರೀಕ್ಷೆ ಮತ್ತು ಕಣ್ಗಾವಲು ವಿಧಾನಗಳ ಸರಿಯಾಗಿ ಪಾಲಿಸುವುದು. ಮನೆ-ಮನೆಗಳಿಗೆ ತೆರಳಿ ಕೊವಿಡ್-19 ಸೋಂಕಿನ ಪರೀಕ್ಷೆ ನಡೆಸುವುದು ಹಾಗೂ ಸೋಂಕು ಪತ್ತೆಯಾದ ವ್ಯಕ್ತಿಯ ಮೂಲ ಹಾಗೂ ಆತನ ಜೊತೆಗೆ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸುವುದನ್ನು ಕೇಂದ್ರ ಸರ್ಕಾರ ಉಲ್ಲೇಖಿಸಿದೆ.
* ಜೀನೋಮ್ ಸೀಕ್ವೆನ್ಸಿಂಗ್ಗಾಗಿ ಕ್ಲಸ್ಟರ್ ಸೋಂಕಿನ ಮಾದರಿಗಳನ್ನು ತಕ್ಷಣವೇ INSACOG ಲ್ಯಾಬ್ಗಳಿಗೆ ಕಳುಹಿಸಬೇಕು.
* ರಾಜ್ಯಗಳಲ್ಲಿ ಶೇ.100ರಷ್ಟು ಜನರಿಗೆ ಕೊವಿಡ್-19 ಲಸಿಕೆಯನ್ನು ನೀಡುವ ನಿಟ್ಟಿನಲ್ಲಿ ಲಸಿಕೆ ವಿತರಣೆ ಅಭಿಯಾನದ ವೇಗವನ್ನು ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ.
* ಆಸ್ಪತ್ರೆಯ ಹಾಸಿಗೆಗಳು, ಆಂಬ್ಯುಲೆನ್ಸ್ಗಳು, ಆಮ್ಲಜನಕ ಉಪಕರಣಗಳು ಮತ್ತು ಔಷಧೋಪಚಾರ ಸೇರಿದಂತೆ ವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸಲು ತುರ್ತು ನಿಧಿಯನ್ನು ಬಳಸಬೇಕೆಂದು ಸೂಚಿಸಲಾಗಿದೆ.
* ಭಾರತದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 200ರ ಗಡಿ ದಾಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಮಹಾರಾಷ್ಟ್ರ ಮತ್ತು ದೆಹಲಿಯು ಹೊಸ ರೂಪಾಂತರದ ಅತಿ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ. ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ (54), ತೆಲಂಗಾಣ (20), ಕರ್ನಾಟಕ (19), ರಾಜಸ್ಥಾನ (18), ಕೇರಳ (15) ಮತ್ತು ಗುಜರಾತ್ (14) ನಂತರದ ಸ್ಥಾನದಲ್ಲಿವೆ. ಅವರಲ್ಲಿ 77 ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.












Click it and Unblock the Notifications