ಗೋರಾಕ್ಪುರ ಹೊಟೇಲ್ಗೆ ಪೊಲೀಸ್ ದಾಳಿ ವೇಳೆ ವ್ಯಾಪಾರಿ ಸಾವು: ನಿಜಕ್ಕೂ ನಡೆದಿದ್ದು ಏನು?
ಲಕ್ನೋ, ಸೆಪ್ಟೆಂಬರ್ 29: ಉತ್ತರ ಪ್ರದೇಶದ ಗೋರಾಕ್ಪುರದಲ್ಲಿ ಪೊಲೀಸರು ಸೋಮವಾರ ತಡರಾತ್ರಿ ಹೊಟೇಲ್ಗೆ ದಾಳಿ ನಡೆಸಿದ ಸಂದರ್ಭ ವ್ಯಾಪಾರಿಯೊಬ್ಬರು ಸಾವನ್ನಪ್ಪಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಗೋರಾಕ್ಪುರ ಪೊಲೀಸ್, "ಸಾವನ್ನಪ್ಪಿದ ವ್ಯಾಪಾರಿಯ ಪತ್ನಿ ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ಅನ್ನು ದಾಖಲು ಮಾಡಲಾಗಿದೆ," ಎಂದು ತಿಳಿಸಿದ್ದಾರೆ. ಇನ್ನು ಆರು ಪೊಲೀಸರ ವಿರುದ್ದ ಕೊಲೆ ಪ್ರಕರಣವನ್ನು ದಾಖಲು ಮಾಡಲಾಗಿದೆ ಎಂದು ಕೂಡಾ ಪೊಲೀಸರು ಖಚಿತ ಪಡಿಸಿದ್ದಾರೆ.
ಇನ್ನು "ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶದಂತೆ ಮೃತ ವ್ಯಾಪಾರಿ, ಉತ್ತರ ಪ್ರದೇಶದ ಕಾನ್ಪುರ ನಿವಾಸಿ ಮನೀಶ್ ಕುಮಾರ್ ಗುಪ್ತಾ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರವನ್ನು ನೀಡಲಾಗುತ್ತದೆ," ಎಂದು ಕೂಡಾ ತಿಳಿಸಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ವಿರುದ್ದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ. ಈ "ಎನ್ಕೌಂಟರ್ ಮಾಡುವ ಸಂಸ್ಕೃತಿಯು ಬಿಜೆಪಿಯಿಂದ ಆರಂಭ ಮಾಡಲಾಗಿದೆ," ಎಂದು ಆರೋಪ ಮಾಡಿದ್ದಾರೆ.

''ಬಿಜೆಪಿಯಿಂದ ಬಂದ ಎನ್ಕೌಂಟರ್ ಸಂಸ್ಕೃತಿ''
"ಗೋರಾಕ್ಪುರದಲ್ಲಿ ಪೊಲೀಸರ ಬರ್ಬರತೆಯು ಒಂದು ಯುವ ವ್ಯಾಪಾರಿಯ ಪ್ರಾಣವನ್ನು ಬಲಿ ಪಡೆದುಕೊಂಡಿದೆ. ಇದು ಬಹಳ ದುಖಃಕರ ವಿಚಾರ ಹಾಗೂ ಖಂಡನೆ ಮಾಡಬೇಕಾದ ವಿಚಾರವಾಗಿದೆ. ಉತ್ತರ ಪ್ರದೇಶ ರಾಜ್ಯದ ಬಿಜೆಪಿ ಸರ್ಕಾರವು ಎನ್ಕೌಂಟರ್ ಎಂಬ ಹಿಂಸಾತ್ಮಕ ಸಂಸ್ಕೃತಿಗೆ ಜನ್ಮ ನೀಡಿದೆ. ಇದು ಅದರ ದುಷ್ಪರಿಣಾಮವಾಗಿದೆ. ಈ ಹಿಂಸೆಯನ್ನು ಮಾಡಿದವರ ಮೇಲೆ ಕೊಲೆ ಪ್ರಕರಣ ದಾಖಲು ಮಾಡಬೇಕು ಹಾಗೂ ಈ ಹಿಂಸೆಗೆ ಕಾರಣವಾದವರು ರಾಜೀನಾಮೆ ನೀಡಬೇಕು," ಎಂದು ಅಖಿಲೇಶ್ ಯಾದವ್ ಆಗ್ರಹ ಮಾಡಿದ್ದಾರೆ.

ಪೊಲೀಸರ ಹಾಗೂ ಮೃತ ಕುಟುಂಬದ ವಾದವೇನು?
ಪೊಲೀಸರು ಈ ಘಟನೆ ಆಕಸ್ಮಿಕವಾಗಿ ನಡೆದಿದೆ ಎಂದು ಹೇಳುತ್ತಿದ್ದು, ಆದರೆ ಮೃತ ವ್ಯಾಪಾರಿಯ ಪತ್ನಿಯು ತನ್ನ ಪತಿಯ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿದ್ದಾರೆ. ಪೊಲೀಸರು ವ್ಯಾಪಾರಿ ಹೊಟೇಲ್ ರೂಮ್ ಒಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ "ಹೊಟೇಲ್ನಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ತಂಗಿದ್ದಾರೆ ಎಂದು ಮಾಹಿತಿ ದೊರೆತ ಹಿನ್ನೆಲೆ ನಾವು ದಾಳಿ ನಡೆಸಿದ್ದೇವೆ," ಎಂದು ಕೂಡಾ ಪೊಲೀಸರು ಹೇಳಿದ್ದಾರೆ. ಸೋಮವಾರ ತಡ ರಾತ್ರಿ ಪೊಲೀಸರು ಹೊಟೇಲ್ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಮೃತ ವ್ಯಾಪಾರಿ ಮನೀಶ್ ಕುಮಾರ್ ಗುಪ್ತಾ ಹಾಗೂ ಬೇರೆ ಜಿಲ್ಲೆಗಳಿಗೆ ಸೇರಿದ ಇನ್ನಿಬ್ಬರು ಹೊಟೇಲ್ ರೂಮ್ನಲ್ಲಿ ತಂಗಿದ್ದರು. ಹೊಟೇಲ್ನಲ್ಲಿ ಜೊತೆಗಿದ್ದವರು, "ನಾವು ವ್ಯಾಪಾರ ಜೊತೆಯಾಗಿ ನಡೆಸುತ್ತೇವೆ. ನಮ್ಮ ಸ್ನೇಹಿತರೊಬ್ಬರನ್ನು ಭೇಟಿಯಾಗಲು ನಾವು ಗೋರಾಕ್ಪುರಕ್ಕೆ ಬಂದಿದ್ದೇವೆ," ಎಂದು ತಿಳಿಸಿದ್ದಾರೆ.

ಮೃತ ವ್ಯಾಪಾರಿಯ ಜೊತೆಗಿದ್ದವರು ಹೇಳುವುದು ಹೀಗೆ...
"ನಾವು ಮೂವರು ಹೊಟೇಲ್ನ ಒಂದು ಕೋಣೆಯಲ್ಲಿ ಮಲಗಿದ್ದೆವು. ರಾತ್ರಿ ಸುಮಾರು 12:30 ಗಂಟೆಗೆ ನಮ್ಮ ಕೋಣೆಯ ಬೆಲ್ ಕೇಳಿಸಿತು. ನಾನು ಬಾಗಿಲನ್ನು ತೆರೆದೆ. 5-7 ಪೊಲೀಸರು ಇದ್ದರು. ಹಾಗೆಯೇ ರಿಸೆಪ್ಷನ್ನಲ್ಲಿ ಇದ್ದ ಹುಡುಗನೂ ಜೊತೆಗಿದ್ದನು. ಕೋಣೆಯ ಒಳಗಡೆ ಅವರು ಬಂದರು. ನಮ್ಮ ಐಡಿಯನ್ನು ತೋರಿಸುವಂತೆ ಪೊಲೀಸರು ಹೇಳಿದರು. ನಾನು ನನ್ನ ಐಡಿಯನ್ನು ತೋರಿಸಿದೆ. ಬಳಿಕ ಮನೀಶ್ ಅನ್ನು ಎಬ್ಬಿಸಿದೆ. ಈ ತಡ ರಾತ್ರಿಯಲ್ಲಿ ನಮಗೆ ಯಾಕೆ ತೊಂದರೆ ಕೊಡುತ್ತಿದ್ದೀರಿ ಎಂದು ಮನೀಶ್ ಪೊಲೀಸರನ್ನು ಪ್ರಶ್ನಿಸಿದ. ಬಳಿಕ ಪೊಲೀಸರು ನಮಗೆ ಬೆದರಿಕೆ ಹಾಕಲು ಆರಂಭ ಮಾಡಿದರು," ಎಂದು ಹೊಟೇಲ್ನ ರೂಮ್ನಲ್ಲಿ ಜೊತೆಯಾಗಿ ಇದ್ದ ಹರ್ವಿಂತ್ ಸಿಂಗ್ ಎಂಬವರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಹಾಗೆಯೇ ತಾನು ಹರಿಯಾಣದ ಗುರುಗ್ರಾಮದಲ್ಲಿ ವಾಸವಿದ್ದೇನೆ ಎಂದು ಕೂಡಾ ಹೇಳಿದ್ದಾರೆ. "ಪೊಲೀಸರು ಕುಡಿದಂತೆ ಕಾಣಿಸುತ್ತಿದ್ದರು. ನನಗೆ ಓರ್ವ ಪೊಲೀಸ್ ಸಿಬ್ಬಂದಿ ಕೆನ್ನೆಗೆ ಬಾರಿಸಿದರು. ಕೆಲವು ಪೊಲೀಸರ ಬಳಿ ಗನ್ ಕೂಡಾ ಇತ್ತು. ನನ್ನನ್ನು ಪೊಲೀಸರು ಹೊರಗೆ ಕರೆದೊಯ್ದರು. ಬಳಿಕ ಮನೀಶ್ ಅನ್ನು ಕೂಡಾ ಪೊಲೀಸರು ಕೋಣೆಯಿಂದ ಹೊರಗೆ ಎಳೆದುಕೊಂಡು ಬರುವುದು ನನ್ನ ಗಮನಕ್ಕೆ ಬಂದಿದೆ. ಆತನ ಮುಖ ಪೂರ್ತಿ ರಕ್ತ ಕಾಣಿಸುತ್ತಿತ್ತು," ಎಂದು ಕೂಡಾ ಹರ್ವಿಂತ್ ಸಿಂಗ್ ಮಾಹಿತಿ ನೀಡಿದ್ದಾರೆ.

ಅನುಮಾನಾಸ್ಪದ ವ್ಯಕ್ತಿಗಳು ಇದ್ದಾರೆ ಎಂಬ ಮಾಹಿತಿ ಆಧಾರದಲ್ಲಿ ದಾಳಿ
ಇನ್ನು ಪೊಲೀಸರು ಮಾತ್ರ ನಮಗೆ ಅನುಮಾನಾಸ್ಪದ ವ್ಯಕ್ತಿಗಳು ಹೊಟೇಲ್ನಲ್ಲಿ ಇದ್ದಾರೆ ಎಂದು ಮಾಹಿತಿ ಲಭಿಸಿದ ಕಾರಣದಿಂದಾಗಿ ದಾಳಿ ನಡೆಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಗೋರಾಕ್ಪುರ ಪೊಲೀಸ್ ಮುಖ್ಯಸ್ಥ ವಿಪಿನ್ ಟಾಡಾ, "ಈ ವ್ಯಕ್ತಿಗಳು ಬೇರೆ ಬೇರೆ ನಗರಕ್ಕೆ ಸೇರಿದವರು ಆಗಿದ್ದರು. ಆದ್ದರಿಂದ ಪೊಲೀಸರ ತಂಡಕ್ಕೆ ಅನುಮಾನ ಉಂಟಾಗಿದೆ. ಆದ್ದರಿಂದ ಹೊಟೇಲ್ನ ಮ್ಯಾನೆಜರ್ ಜೊತೆಗೆ ಪೊಲೀಸರು ಆ ರೂಮ್ ಪರಿಶೀಲನೆಗೆ ತೆರಳಿದರು. ಆದರೆ ಈ ಸಂದರ್ಭದಲ್ಲಿ ಓರ್ವ ದುರದೃಷ್ಟಕರವಾಗಿ ರೂಮ್ನ ಒಳಗೆ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ. ನಮ್ಮ ತಂಡವು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದೆ," ಎಂದು ಹೇಳಿದ್ದಾರೆ.

"ಹತ್ತು ನಿಮಿಷ ಮುಂದಷ್ಟೆ ನನಗೆ ಕರೆ ಮಾಡಿ ಮಾತನಾಡಿದ್ದರು"
ಈ ನಡುವೆ ಪೊಲೀಸರು ತಡ ರಾತ್ರಿ ಹೊಟೇಲ್ಗಳ ಮೇಲೆ ದಾಳಿ ನಡೆಸುವುದು ಇಲ್ಲಿ ಸಾಮಾನ್ಯವಾಗಿ ನಡೆಯುತ್ತದೆಯೇ ಎಂಬುವುದು ದೃಢಪಟ್ಟಿಲ್ಲ. ಆದರೆ ಮೃತ ವ್ಯಕ್ತಿಯ ಪತ್ನಿ ಮಾತ್ರ, "ಪೊಲೀಸರ ಯಾವ ಹೇಳಿಕೆಯು ಸರಿಯಾಗಿಲ್ಲ. ನನ್ನ ಪತಿಯ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ," ಎಂದು ಆರೋಪ ಮಾಡಿದ್ದಾರೆ. "ನನ್ನ ಪತಿ ಸಾವನ್ನಪ್ಪುವ ಹತ್ತು ನಿಮಿಷ ಮುಂದಷ್ಟೇ ಕರೆ ಮಾಡಿ ಮಾತನಾಡಿದ್ದರು. ಪೊಲೀಸರು ಬಂದಿದ್ದಾರೆ ಎಂದು ಹೇಳಿ ಅವರು ನನ್ನ ಪೋನ್ ಕಟ್ ಮಾಡಿದರು. ಬಳಿಕ ನನ್ನ ಸಂಬಂಧಿಕರಿಗೆ ಕರೆ ಮಾಡಿ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಬೆದರಿಕೆಯನ್ನು ಹಾಕುತ್ತಿದ್ದಾರೆ. ಪೊಲೀಸ್ ಠಾಣೆಗೆ ಹೋಗುವಂತೆ ಹೇಳುತ್ತಿದ್ದಾರೆ ಎಂದಿದ್ದಾರೆ. ಈಗ ನನಗೆ ನನ್ನ ಪತಿ ಹೇಗೆ ಮೃತಪಟ್ಟರು ಎಂದು ಸ್ಪಷ್ಟಣೆ ಬೇಕು," ಎಂದು ಮೃತ ವ್ಯಾಪಾರಿಯ ಪತ್ನಿ ಮೀನಾಕ್ಷಿ ಗುಪ್ತಾ ಆಗ್ರಹಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications