ಇತ್ತೀಚಿನ ದಿನಗಳಲ್ಲಿ ಡಿಗ್ರಿ, ಡಬಲ್ ಡಿಗ್ರಿ ಮಾಡಿ ಉದ್ಯೋಗ ಹುಡುಕಲು ಶುರು ಮಾಡವ ಯುವಜನರಿಗೆ ತಮ್ಮ ವಿದ್ಯೆಗೆ ತಕ್ಕ ಒಂದು ಉದ್ಯೋಗ ಪಡೆಯುವುದೇ ಒಂದು ದೊಡ್ಡ ತಲೆ ನೋವಾಗಿ ಹೋಗಿದೆ. ಅದರಲ್ಲೂ ಇಂದಿನ ಕಾರ್ಪೊರೇಟ್ ಕಂಪೆನಿಗಳು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನಾ ಸಂಪೂರ್ಣವಾಗಿ ತಂತ್ರಜ್ಞಾನದ ಮೇಲೆಯೇ ಅವಲಂಬಿತವಾಗಿದೆ. ಹೆಚ್ಚಿನ ಕಂಪನಿಗಳಿಗೆ ಬಂದಿರುವ ಸಾವಿರಾರು ಅರ್ಜಿಗಳನ್ನು ಫಿಲ್ಟರ್ ಮಾಡಲು ಎಐ ಆಧಾರಿತ ಸಾಫ್ಟ್ವೇರ್ಗಳನ್ನು ಬಳಸುತ್ತಿವೆ.
ಆದರೆ, ಇಂತಹ ತಂತ್ರಜ್ಞಾನಗಳು ಕೆಲವೊಮ್ಮೆ ಪ್ರತಿಭಾವಂತ ಹಾಗೂ ಅರ್ಹ ಅಭ್ಯರ್ಥಿಗಳನ್ನು ಕೇವಲ ರೆಸ್ಯೂಮ್ನಲ್ಲಿರುವ ಸಣ್ಣ ಸಣ್ಣ ತಪ್ಪಿಗೆ ತಿರಸ್ಕರಿಸಿಬಿಡುತ್ತವೆ. ಇಂತಹದ್ದೇ ಒಂದು ಘಟನೆ ದೆಹಲಿಯಲ್ಲಿ ಆಗಿದ್ದು, ಕಂಪ್ಯೂಟರ್ ಸಾಫ್ಟ್ವೇರ್ ತಿರಸ್ಕರಿಸಿದ್ದ ರೆಸ್ಯೂಮ್ವೊಂದು ಅಭ್ಯರ್ಥಿಯ ಇಡೀ ಬದುಕನ್ನೇ ಬದಲಾಯಿಸಿದೆ. ಇದಕ್ಕೆ ಸಂಬಂಧಿಸದಂತೆ ದೆಹಲಿ ಮೂಲದ ಉದ್ಯಮಿಯೊಬ್ಬರು ಹಂಚಿಕೊಂಡಿದ್ದು, ಸದ್ಯ ಕಾರ್ಪೊರೇಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
'ಹೈರಿಂಗ್ ಇನ್ಸೈಡ್' ಸಂಸ್ಥೆಯ ಸಂಸ್ಥಾಪಕರಾದ ಹರ್ಷಿತ್ ಶ್ರೀವಾಸ್ತವ ಅವರು ತಮ್ಮ ಲಿಂಕ್ಡ್ಇನ್ ಖಾತೆಯಲ್ಲಿ ಈ ಅನುಭವವನ್ನು ಬರೆದುಕೊಂಡಿದ್ದಾರೆ. ಅವರ ಕಂಪನಿಗೆ ಬಂದಿದ್ದ ಅಭ್ಯರ್ಥಿಯೊಬ್ಬರ ರೆಸ್ಯೂಮ್ ಅನ್ನು ಕಂಪನಿಯ ಆಪ್ಲಿಕೆಂಟ್ ಟ್ರ್ಯಾಕಿಂಗ್ ಸಿಸ್ಟಮ್ (ಎಟಿಎಸ್) ಸಾಫ್ಟ್ವೇರ್ ಆರಂಭದಲ್ಲೇ ತಿರಸ್ಕರಿಸಿತ್ತು. ಆದರೆ, ಆ ಅಭ್ಯರ್ಥಿಗೆ ಕೆಲಸದ ಅಗತ್ಯ ತುಂಬ ಇತ್ತು. ಹಾಗಾಗಿ ಆ ಅಭ್ಯರ್ಥಿಯು ಹೆದರದೆ, ಸಂಸ್ಥಾಪಕ ಹರ್ಷಿತ್ ಅವರಿಗೆ ನೇರವಾಗಿ ಒಂದು ಸಂದೇಶ ಕಳುಹಿಸಿದ್ದರು. "ದಯವಿಟ್ಟು ನನಗೆ ಸಹಾಯ ಮಾಡಿ. ನನ್ನ ಆರ್ಥಿಕ ಪರಿಸ್ಥಿತಿ ಚನ್ನಾಗಿಲ್ಲ. ನಾನು ತಕ್ಷಣವೇ ಕೆಲಸಕ್ಕೆ ಸೇರಿಕೊಳ್ಳಲು ಸಿದ್ಧನಿದ್ದೇನೆ" ಎಂದು ಆ ಅಭ್ಯರ್ಥಿ ಮೆಸೇಜ್ನಲ್ಲಿ ವಿನಂತಿಸಿಕೊಂಡಿದ್ದರು. ಈ ಸಂದೇಶ ಹರ್ಷಿತ್ ಅವರ ಗಮನ ಸೆಳೆಯಿತು. ಅಭ್ಯರ್ಥಿಯ ಸಂದೇಶವನ್ನು ನೋಡಿದ ಹರ್ಷಿತ್ ಕೇವಲ ಆ ಅಭ್ಯರ್ಥಿಯ ಮೇಲಿದ್ದ ಅನುಕಂಪದಿಂದ ಅವರ ಪ್ರೊಫೈಲ್ ನೋಡಲಿಲ್ಲ. ಬದಲಿಗೆ, ತಮ್ಮ ಕಂಪನಿಯ ಆಟೊಮೇಟೆಡ್ ನೇಮಕಾತಿಯಿಂದ ಯಾವುದಾದರೂ ಅರ್ಹ ಮತ್ತು ಪ್ರತಿಭಾವಂತ ಅಭ್ಯರ್ಥಿಯನ್ನು ತಪ್ಪಾಗಿ ಫಿಲ್ಟರ್ ಮಾಡಿ ಹೊರಹಾಕಿದೆಯೇ ಎಂಬುದನ್ನ ಪರಿಶೀಲಿಸಲು ನಿರ್ಧರಿಸಿದರು. ಅವರು ಸ್ವತಃ ಆ ರೆಸ್ಯೂಮ್ ಅನ್ನು ತೆಗೆದು ನೋಡಿದಾಗ, ಮೆಸೇಜ್ ಮಾಡಿದ್ದ ಆ ಅಭ್ಯರ್ಥಿಯು ಸಂದರ್ಶನಕ್ಕೆ ಅರ್ಹನಾಗಿದ್ದಾನೆ ಎಂಬುದು ತಿಳಿಯಿತು ತಕ್ಷಣ ಹರ್ಷಿತ್, ಆ ಅಭ್ಯರ್ಥಿಗೆ ಸಂದರ್ಶನಕ್ಕೆ ದಿನಾಂಕ ನಿಗದಿ ಮಾಡಿದರು. ಸಂದರ್ಶನದಲ್ಲಿ ಅಭ್ಯರ್ಥಿಯ ಕಾರ್ಯಕ್ಷಮತೆ ಮತ್ತು ಕೌಶಲ್ಯಗಳು ಅತ್ಯುತ್ತಮವಾಗಿದ್ದ ಕಾರಣ, ಕಂಪನಿಯು ಅವರಿಗೆ ಉದ್ಯೋಗದ ಆಫರ್ ನೀಡಲು ನಿರ್ಧರಿಸಿತು. ಕೆಲವು ದಿನಗಳ ನಂತರ ಹರ್ಷಿತ್ ಆ ಅಭ್ಯರ್ಥಿಗೆ ಕೇವಲ ಅಭಿನಂದನೆಗಳು ಎಂಬ ಒಂದು ಸಂದೇಶವನ್ನು ಕಳುಹಿಸಿದರು. ಉದ್ಯೋಗದ ಆದೇಶ ಪ್ರತಿ ಕೈ ಸೇರಿದಾಗ ಆ ಅಭ್ಯರ್ಥಿಗೆ ಆದ ಸಂತಸವನ್ನಾ ಹರ್ಷಿತ್ ನೆನಪಿಸಿಕೊಂಡಿದ್ದಾರೆ. "ಈ ಉದ್ಯೋಗಾವಕಾಶವು ನನ್ನ ಕುಟುಂಬವನ್ನು ದೊಡ್ಡ ಸಂಕಷ್ಟದಿಂದ ಪಾರು ಮಾಡಿದೆ. ಕಟ್ಟಲಾಗದೆ ಬಾಕಿ ಉಳಿದಿದ್ದ ಇಎಂಐಗಳು ಮತ್ತು ನನ್ನ ಪೋಷಕರ ವೈದ್ಯಕೀಯ ಖರ್ಜುಗಳನ್ನಾ ನಿಭಾಯಿಸಲು ಈ ಕೆಲಸ ನನಗೆ ಸಹಾಯವಾಗುತ್ತದೆ" ಎಂದು ಅಭ್ಯರ್ಥಿ ಭಾವುಕರಾಗಿ ನುಡಿದಿದ್ದರು. ಈ ಮಾತುಗಳು ಹರ್ಷಿತ್ ಅವರ ಮನಸ್ಸಿನಲ್ಲಿ ಆಳವಾಗಿ ಉಳಿದಿದೆ. ತಂತ್ರಜ್ಞಾನ ಕೇವಲ ಕೀವರ್ಡ್ಗಳನ್ನ ಹುಡುಕಬಲ್ಲದೇ ಹೊರತು, ಆ ರೆಸ್ಯೂಮ್ ಹಿಂದೆ ಇರುವ ವ್ಯಕ್ತಿಯ ಹೋರಾಟಗಳು ಮತ್ತು ಆತನ ಪರಿಸ್ಥಿತಿಗಳನ್ನ ಅರ್ಥಮಾಡಿಕೊಳ್ಳಲಾರದು. "ಟೆಕ್ನಾಲಜಿ ನಮ್ಮ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡಬೇಕೇ ಹೊರತು, ಮತ್ತೊಮ್ಮೆ ಪರಿಶೀಲಿಸುವ ಮಾನವೀಯ ಗುಣವನ್ನು ಕಸಿದುಕೊಳ್ಳಬಾರದು. ಪ್ರತಿಯೊಂದು ರೆಸ್ಯೂಮ್ ಕೇವಲ ಅನುಭವವನ್ನು ಮಾತ್ರವಲ್ಲ, ಕೆಲವೊಮ್ಮೆ ಇಡೀ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡಿರುತ್ತದೆ" ಎಂದು ಅವರು ಬರೆದಿದ್ದಾರೆ.ಎಟಿಎಸ್ ರೆಸ್ಯೂಮೆ ಆಯ್ಕೆ ಪ್ರಕ್ರಿಯೆ ಮರುಪರಿಶೀಲನೆ
ಮಾನವೀಯ ನೆರವು