ಬೆಂಗಳೂರು, ನವೆಂಬರ್ 01: ಬೆಂಗಳೂರಿನಾದ್ಯಂತ ಮಂಗಳವಾರ 67ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ, ಸಂಭ್ರಮದಿಂದ ಆಚರಿಸಲಾಯಿತು. ನಗರದ ಪ್ರಮುಖ ಬೀದಿ, ಮೈದಾನಗಳಲ್ಲಿ, ಮರಗಳು, ಕಟ್ಟಡಗಳಲ್ಲಿ ಹಳದಿ-ಕೆಂಪು ಬಣ್ಣದ ನಾಡಧ್ವಜ ರಾರಾಜಿಸುತ್ತಿವೆ.
ಸರ್ಕಾರಿ, ಸರ್ಕಾರೇತರ ಕಚೇರಿಗಳಲ್ಲಿ, ಕನ್ನಡಪರ ಸಂಘ-ಸಂಸ್ಥೆಗಳು, ಸಂಘಟನೆಗಳು, ರಾಜಕೀಯ ಪಕ್ಷಗಳು, ಶಾಲಾ-ಕಾಲೇಜುಗಳಲ್ಲಿ ಮುಖ್ಯಸ್ಥರು ಧ್ವಜಾರೋಹಣ ನೆರವೇರಿಸಿದ ಕರ್ನಾಟಕ ಏಕೀಕರಣ, ಕನ್ನಡ ನಾಡಿಗೆ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸಿದರು. ಹಲವೆಡೆ ಸಿಹಿ ಹಂಚಿ ಕನ್ನಡಿಗರು ಸಂಭ್ರಮಿಸಿದ್ದು ಕಂಡು ಬಂತು.
ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಪ್ರೊ. ಲಿಂಗರಾಜ ಗಾಂಧಿಯವರು ಧ್ವಜಾರೋಹಣ ನೆರವೇರಿಸಿದರು. ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ಪರ ಸಂಘ, ಸಂಸ್ಥೆಗಳ ಸದಸ್ಯರು ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಿಸಿದರು. ಈ ವೇಳೆ ಅನೇಕ ಕಡೆಗಳಲ್ಲಿ ಕನ್ನಡ ಪರ ಗೀತೆಗಳು ಮೊಳಗಿದವು.
ನಗರದ ಬೃಹತ್ ಬೆಂಗಳೂರು ನಗರ ಪಾಲಿಕೆ (ಬಿಬಿಎಂಪಿ) ಕೇಂದ್ರ ಕಚೆರಿಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಧ್ವಜಾರೋಹಣ ನೆರವೇರಿಸಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಕನ್ನಡ ಸಂಘವು ಪ್ರಧಾನಮಂತ್ರಿ ರವರ ಕ್ಷಯ ಮುಕ್ತ ಭಾರತ ಅಭಿಯಾನದಡಿ 200 ಮಂದಿ ಕ್ಷಯ ರೋಗಿಗಳಿಗೆ ಆಹಾರದ ಕಿಟ್ಗಳನ್ನು ವಿತರಿಸಲಾಯಿತು. ಈ ಮೂಲಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬಿಬಿಎಂಪಿಯಲ್ಲಿ ಲಿಂಕ್ ವರ್ಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪಾರ್ವತಿ ಅವರು ಹೃದಯಾಘಾತದಿಂದ ಮೃತಪಟ್ಟ ಹಿನ್ನೆಲೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರ ಸಂಘವು ಮೃತರ ಕುಟುಂಬಕ್ಕೆ 1 ಲಕ್ಷ ರೂ. ಸಹಾಯಧನ ನೀಡಿತು. ಈ ವೇಳೆ ವಿಶೇಷ ಆಯುಕ್ತರಾದ ಡಾ. ಹರೀಶ್ ಕುಮಾರ್, ಪಿ.ಎನ್.ರವೀಂದ್ರ, ಎಸ್.ರಂಗಪ್ಪ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮಲ್ಲೇಶ್ವರಂನ 18ನೇ ಅಡ್ಡರಸ್ತೆಯ ಗೋಕಾಕ್ ಚಳವಳಿ ಸ್ಮರಣಾರ್ಥ ಉದ್ಯಾನದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ್ ಧ್ವಜಾರೋಹಣ ನೆರವೇರಿಸಿದರು. ಈ ಭಾಗದಲ್ಲಿ ಮನೆ ಮನೆಗಳ ಮೇಲೆ ಕನ್ನಡ ಧ್ವಜ ರಾರಾಜಿಸುವ ಮೂಲಕ 67ನೇ ಕನ್ನಡ ರಾಜ್ಯೋತ್ಸವಕ್ಕೆ ಮೆರಗು ನೀಡಿದವು.
ಈ ಸಂದರ್ಭದಲ್ಲಿ ಮಾತನಾಡಿದ ಅಶ್ವಥ್ ನಾರಾಯಣ್, ಕರ್ನಾಟಕವು ಆರೋಗ್ಯಕರ ಸ್ಪರ್ಧೆಗೆ ತನ್ನನ್ನು ತಾನು ತೆರೆದುಕೊಂಡು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಗೋಕಾಕ್ ಚಳುವಳಿಯ ಅನುಷ್ಠಾನಕ್ಕೆ ಕಾರಣಕರ್ತರಾದ ವರನಟ ರಾಜಕುಮಾರ್ ಅವರು ಕನ್ನಡಿಗರ ಪಾಲಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಅವರನ್ನು ನೋಡಿದಾಗಲೊಮ್ಮೆ ಹೊಸ ಆಲೋಚನೆಗಳು ಸ್ಫುರಿಸುತ್ತವೆ ಎಂದು ಹೇಳಿದರು. ಸರ್ಕಾರ ಕನ್ನಡದ ಬೆಳವಣಿಗೆಗೆ, ಕನ್ನಡಿಗರ ಹಿತ ಕಾಯಲು ಬದ್ಧವಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಕನ್ನಡದಂತಹ ಎಲ್ಲಾ ಪ್ರಾದೇಶಿಕ ಭಾಷೆಗಳಿಗೂ ಒತ್ತು ಕೊಡಲಾಗಿದೆ ಎಂದು ಹೇಳಿದರು.
ಬೆಂಗಳೂರಿನ ಕುಮಾರ ಪಾರ್ಕ್ನಲ್ಲಿರುವ ಆಮ್ ಆದ್ಮಿ ಪಾರ್ಟಿ (ಎಎಪಿ) ರಾಜ್ಯ ಕಚೇರಿಯಲ್ಲಿ 67ನೇ ಕನ್ನಡ ರಾಜ್ಯೋತ್ಸವದ ಆಚರಣೆ ನಡೆಯಿತು.
ಕನ್ನಡದ ಅಭಿವೃದ್ಧಿಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ವಹಿಸಿದೆ. ಇಲ್ಲಿನ ಕನ್ನಡ ಶಾಲೆಗಳ ಕಡೆಗಣನೆ ಆಗಿದ್ದು, ನಾಡಿನ ಗಡಿ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ನಿರಾಸಕ್ತಿ ವಹಿಸಿದೆ. ಸಾಲದೆಂಬಂತೆ ಕೇಂದ್ರ ಸರ್ಕಾರ ಹಿಂದಿ ಹೇರುತ್ತಿದೆ. ಕನ್ನಡಿಗರ ಸರ್ಕಾರಿ ಉದ್ಯೋಗಾವಕಾಶ ಅನ್ಯಭಾಷಿಗರ ಪಾಲಾಗುತ್ತಿರುವುದು ಸೇರಿದಂತೆ ಅನೇಕ ಸಮಸ್ಯೆಗಳು ಈ ನಾಡನ್ನು ಕಾಡುತ್ತಿವೆ. ಎಎಪಿ ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಸ್ಥಳೀಯ ಸಂಸ್ಕೃತಿಗೆ ಪೂರಕವಾಗುವಂತಹ ಆಡಳಿತ ನೀಡುವ ನೀತಿಯನ್ನು ಎಎಪಿ ಪಾಲಿಸಲಿದೆ ಎಂದು ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.