ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಸೂಪರ್ ಹಿಟ್ 'ಉಪ್ಪಿದಾದಾ MBBS' ಸಿನಿಮಾದಲ್ಲಿ ಡಾ.ಉಮಾ (ಚಿನ್ನು) ಪಾತ್ರದ ಮೂಲಕ ಕನ್ನಡಿಗರ ಮನಗೆದ್ದಿದ್ದ ಖ್ಯಾತ ನಟಿ ಉಮಾ ಶಂಕರಿ (Uma Shankari) ಅವರಿಗೆ ಸ್ತನ ಕ್ಯಾನ್ಸರ್ (Cancer) ಇರುವುದು ಪತ್ತೆಯಾಗಿದೆ. ಸದ್ಯ ಅವರು ಈ ಭೀಕರ ಕಾಯಿಲೆಯ ವಿರುದ್ಧ ಧೈರ್ಯದಿಂದ ಹೋರಾಡುತ್ತಿದ್ದು, ತಮ್ಮ ಚಿಕಿತ್ಸೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಭಾವುಕ ಪೋಸ್ಟ್ ಅಭಿಮಾನಿಗಳ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.
ಹಿರಿಯ ನಟಿ ಸುಮಿತ್ರಾ ಹಾಗೂ ಖ್ಯಾತ ದಿವಂಗತ ನಿರ್ದೇಶಕ ಡಿ.ರಾಜೇಂದ್ರ ಬಾಬು ಅವರ ಪುತ್ರಿಯಾಗಿರುವ ಉಮಾ ಶಂಕರಿ, ಮದುವೆಯ ನಂತರ ಚಿತ್ರರಂಗದಿಂದ ದೂರ ಉಳಿದಿದ್ದರು. ಇತ್ತೀಚೆಗೆ ತಮಗೆ ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಇರುವುದನ್ನು ಬಹಿರಂಗಪಡಿಸಿದ್ದ ಅವರು, ಈಗ ಎರಡನೇ ಸುತ್ತಿನ ಕೀಮೋಥೆರಪಿಗೆ ಒಳಗಾಗುತ್ತಿದ್ದಾರೆ.
ತಮ್ಮ ಆರೋಗ್ಯದ ಸ್ಥಿತಿ ಹಾಗೂ ಕಠಿಣ ದಿನಗಳ ಹೋರಾಟದ ಬಗ್ಗೆ ಉಮಾ ಶಂಕರಿ ಪೋಸ್ಟ್ ಹಂಚಿಕೊಂಡಿದ್ದಾರೆ. "ಕೀಮೋಥೆರಪಿ ಮತ್ತು ಇಮ್ಯೂನೋಥೆರಪಿಯ 2ನೇ ಸುತ್ತು ಆರಂಭವಾಗಿದೆ. ನಾನು ಪ್ರತಿಯೊಂದು ದಿನವನ್ನೂ ಒಂದೊಂದೇ ಹೆಜ್ಜೆಯಾಗಿ ಧೈರ್ಯದಿಂದ ಎದುರಿಸುತ್ತಿದ್ದೇನೆ. ನೋವಿನಿಂದ ಕೂಡಿರುವ ಭಾರವಾದ ದಿನಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಕಲಿಯುತ್ತಿದ್ದೇನೆ, ಹಾಗೆಯೇ ದೈಹಿಕವಾಗಿ ಚೇತರಿಸಿಕೊಂಡು ಗಟ್ಟಿಯಾಗಿ ಅನಿಸುವ ದಿನಗಳನ್ನು ಸಂತೋಷದಿಂದ ಆಚರಿಸುತ್ತಿದ್ದೇನೆ ಎಂದಿದ್ದಾರೆ. ಈ ಕಷ್ಟದ ಸಂದರ್ಭದಲ್ಲಿ ಯಾವಾಗಲೂ ನನ್ನ ಬೆನ್ನಿಗೆ ನಿಂತಿರುವ ನನ್ನ ಕುಟುಂಬಕ್ಕೆ ಹಾಗೂ ಅಪಾರ ಪ್ರೀತಿ, ಬೆಂಬಲ ನೀಡುತ್ತಿರುವ ನನ್ನ ಅಭಿಮಾನಿಗಳಿಗೆ ಧನ್ಯವಾದಗಳು. ನಾನು ಧೈರ್ಯದಿಂದ ಚಿಕಿತ್ಸೆಗೆ ಸ್ಪಂದಿಸುತ್ತಾ, ಗುಣಮುಖರಾಗುವತ್ತ ಸಂಪೂರ್ಣ ಗಮನವನ್ನು ಹರಿಸುತ್ತಿದ್ದೇನೆ. ಈ ಚೇತರಿಕೆಯ ಹಾದಿ ಪರಿಪೂರ್ಣವಾಗಿಲ್ಲದೆ ಇರಬಹುದು. ಆದರೆ ಇದು ನಿಜವಾದ ಹೆಜ್ಜೆ ಎಂದು ಬರೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ತಮಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾದಾಗ ಉಮಾ ಶಂಕರಿ ಅವರು ಮಾನಸಿಕವಾಗಿ ನೊಂದಿದ್ದರು. ಆರಂಭದಲ್ಲಿ ಈ ಕಠಿಣ ವಾಸ್ತವವನ್ನು ಒಪ್ಪಿಕೊಳ್ಳುವುದು ಅವರಿಗೆ ತುಂಬಾ ಕಷ್ಟವಾಗಿತ್ತು. "ನನಗೆ ಈ ಕಾಯಿಲೆ ಹೇಗೆ ಬಂತು? ಯಾಕೆ ಬಂತು?" ಎಂಬ ಸಾಲು ಸಾಲು ಪ್ರಶ್ನೆಗಳು ಅವರ ಮನಸ್ಸನ್ನು ಕೊರೆಯುತ್ತಿದ್ದವು ಎಂದು ಅವರು ಇತ್ತೀಚೆಗೆ ಹಂಚಿಕೊಂಡಿದ್ದರು. ನಟಿ ಉಮಾ ಶಂಕರಿ ಅವರ ಈ ಪೋಸ್ಟ್ ನೋಡಿ ಇಡೀ ದಕ್ಷಿಣ ಭಾರತದ ಚಿತ್ರರಂಗ ಆಘಾತ ವ್ಯಕ್ತಪಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಸಹನಟರು, ಸ್ನೇಹಿತರು ಹಾಗೂ ಅಭಿಮಾನಿಗಳು "ನೀವು ಅತ್ಯಂತ ಧೈರ್ಯಶಾಲಿ ಮಹಿಳೆ, ಶೀಘ್ರದಲ್ಲೇ ಈ ಕಾಯಿಲೆಯನ್ನು ಗೆದ್ದು ಆರೋಗ್ಯವಾಗಿ ಮರಳಿ ಬರುತ್ತೀರಿ" ಎಂದು ಧೈರ್ಯ ತುಂಬುತ್ತಿದ್ದಾರೆ. ಕನ್ನಡದ 'ಉಪ್ಪಿದಾದಾ MBBS', 'ಕಲ್ಲರಳಿ ಹೂವಾಗಿ' ಸೇರಿದಂತೆ ತಮಿಳು, ತೆಲುಗು ಹಾಗೂ ಮಲಯಾಳಂನ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ಉಮಾ ಶಂಕರಿ ಅವರು ಈ ಮಹಾಮಾರಿಯನ್ನು ಗೆದ್ದು ಬರಲಿ ಎಂಬುದು ಎಲ್ಲರ ಆಶಯ.ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಉಮಾ ಶಂಕರಿ ಬರೆದುಕೊಂಡಿದ್ದೇನು?