ರಾಯಚೂರು: ನಿರೀಕ್ಷಿತ ಮಟ್ಟ ತಲುಪದ ಬಿತ್ತನೆ ಬೀಜ ಸಂಗ್ರಹ, ರೈತರಲ್ಲಿ ಆತಂಕ
ರಾಯಚೂರು, ಜೂನ್ 19: ರಾಯಚೂರು ಜಿಲ್ಲೆಗೆ ಮುಂಗಾರು ಹಂಗಾಮಿಗೆ ಅಗತ್ಯ ಇರುವ ವಿವಿಧ ಬಿತ್ತನೆ ಬೀಜಗಳ ಆರು ಸಾವಿರ ಕ್ವಿಂಟಾಲ್ ಬೇಡಿಕೆಗೆ ಸಿಕ್ಕಿದ್ದು ಕೇವಲ 14 ನೂರು ಕ್ವಿಂಟಾಲ್ ಎನ್ನುವ ಮಾಹಿತಿ ಲಭ್ಯ ಆಗಿದ್ದು ಸರ್ಕಾರಿ ಸಂಸ್ಥೆಗಳಲ್ಲಿ ದಾಸ್ತಾನು ಗಮನಿಸಿ ಖಾಸಗಿಯವರಿಗೆ ಪೂರೈಕೆ ಮಾಡುವ ಲೆಕ್ಕಾಚಾರದಲ್ಲಿ ಕೃಷಿ ಇಲಾಖೆ ಯೋಜಿಸಿದೆ.
ಇನ್ನೇನು ಮುಂಗಾರು ಹಂಗಾಮಿಗೆ ಜಿಲ್ಲೆಯ ರೈತರು ಭೂಮಿ ಹದ ಮಾಡಿಕೊಳ್ಳುವ ಧಾವಂತದಲ್ಲಿದ್ದಾರೆ. ಮಳೆಯ ಆಗಮನದ ನಿರೀಕ್ಷೆಯಲ್ಲಿರುವ ಖುಷ್ಕಿ ಮತ್ತು ನೀರಾವರಿ ಪ್ರದೇಶದ ಕೆಲವು ರೈತರ ಜಮೀನಿಗೆ ಅಗತ್ಯ ಇರುವ ವಿವಿಧ ಬೀಜಗಳನ್ನು ಖಾಸಗಿಯವರ ಮಾರಾಟಕ್ಕೆ ಹಾಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಹಾಯ ಧನದ ರೂಪದಲ್ಲಿ ನೀಡಲು ಕೃಷಿ ಇಲಾಖೆಗೆ ಸಜ್ಜಾಗಿದೆ.

ಸುಮಾರು 2 ಲಕ್ಷದ 51 ಸಾವಿರ ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಗುರಿ ಅಂದಾಜಿಸಿಕೊಂಡಿರುವ ಕೃಷಿ ಇಲಾಖೆ, ಅದಕ್ಕೆ ತಕ್ಕಂತೆ ಬೀಜದ ದಾಸ್ತಾನಿಗೂ ಮುಂದಾಗಿದ್ದು ಸಿಕ್ಕ ಸ್ಪಂದನೆ ನಿರಾಶಾದಾಯಕವಾಗಿದೆ. ಅಲ್ಲದೆ ಈಗಾಗಲೇ ಕೃಷಿ ಇಲಾಖೆ ರಾಯಚೂರು ಜಿಲ್ಲೆಯಲ್ಲಿ ಇರುವ 37 ರೈತ ಸಂಪರ್ಕಗಳಿಗೆ ಎಷ್ಟೆಷ್ಟು ಬೀಜ, ಯಾವ ಬೀಜದ ಅಗತ್ಯ ಇದೆ ಎನ್ನುವ ಲೆಕ್ಕಾಚಾರ ಹಾಕಿಕೊಂಡು ರಾಜ್ಯ ಮತ್ತು ರಾಷ್ಟ್ರೀಯ ಬೀಜ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ರಾಯಚೂರು ಜಿಲ್ಲಾ ಕೃಷಿ ಇಲಾಖೆಯಿಂದ ರಾಜ್ಯ ಮತ್ತು ರಾಷ್ಟ್ರೀಯ ಬೀಜ ನಿಗಮಗಳಿಗೆ ವಾಣಿಜ್ಯ ಬೆಳೆಗಳ ಹೊರತು ಪಡಿಸಿ ಉಳಿದ ಬೀಜಗಳ ಬೇಡಿಕೆ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ 3,869 ಕ್ವಿಂಟಾಲ್ ಭತ್ತದ ಬೇಡಿಕೆ ಸಲ್ಲಿಸಿದ್ದರೆ 2,144 ಕ್ವಿಂಟಾಲ್ ತೊಗರಿ, 28 ಕ್ವಿಂಟಾಲ್ ಹೆಸರು, 176 ಕ್ವಿಂಟಾಲ್ ಸಜ್ಜೆ , 50 ಕ್ವಿಂಟಾಲ್ ಮೆಕ್ಕೆಜೋಳ, 337 ಕ್ವಿಂಟಾಲ್ ಸೂರ್ಯಕಾಂತಿ ಸೇರಿ ಒಟ್ಟು 6,604 ಕ್ವಿಂಟಾಲ್ ಬೀಜದ ಗುರಿ ಇರಿಸಿಕೊಂಡಿದ್ದು ಪೂರೈಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೇ ಖಾಸಗಿಯಾಗಿ ಮಾರಾಟ ಮಾಡಲು 3,323 ಕ್ವಿಂಟಾಲ್ ಭತ್ತ, 1,741 ಕ್ವಿಂಟಾಲ್ ತೊಗರಿ, 21 ಕ್ವಿಂಟಾಲ್ ಹೆಸರು, 118 ಕ್ವಿಂಟಾಲ್ ಸಜ್ಜೆ , 228 ಕ್ವಿಂಟಾಲ್ ಸೂರ್ಯಕಾಂತಿ ಬೀಜಗಳ ಬೇಡಿಕೆಯ ಪ್ರಸ್ತಾವನೆ ರಾಜ್ಯ ಕೃಷಿ ಇಲಾಖೆ ಮೂಲಕ ನಿಗಮಗಳಿಗೆ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿದ್ದಾರೆ.
ಇದುವರೆಗೆ ರಾಯಚೂರು ಜಿಲ್ಲೆಯಲ್ಲಿ ಕೃಷಿ ಇಲಾಖೆ ಸರ್ಕಾರದ ರೈತ ಸಂಪರ್ಕ ಕೇಂದ್ರಗಳ ಮೂಲಕ ಬೀಜಗಳ ಪೂರೈಕೆಗೆ ದಾಸ್ತನು ಮಾಡಿಕೊಂಡಿದ್ದು, ಕೇವಲ ಕೆಲವೇ ಕೆಲವು ಕ್ವಿಂಟಾಲ್ ಬೀಜಗಳು ಮಾತ್ರ ಎನ್ನುವುದು ಕೃಷಿ ಇಲಾಖೆಯೇ ಒದಗಿಸಿದ ಅಂಕಿ ಸಂಖ್ಯೆಗಳು ಸಾಕ್ಷೀಕರಿಸುತ್ತಿವೆ.

ಜಿಲ್ಲೆಯಲ್ಲಿ 3,869 ಕ್ವಿಂಟಾಲ್ ಭತ್ತದ ಬೇಡಿಕೆಗೆ ಕೇವಲ 685 ಕ್ವಿಂಟಾಲ್ ಮಾತ್ರ ದಾಸ್ತಾನು ಆಗಿದ್ದರೆ 2,144 ಕ್ವಿಂಟಾಲ್ ತೊಗರಿಗೆ 648 ಕ್ವಿಂಟಾಲ್, 28 ಕ್ವಿಂಟಾಲ್ ಹೆಸರು ಬೀಜಕ್ಕೆ 16 ಕ್ವಿಂಟಾಲ್, 176 ಕ್ವಿಂಟಾಲ್ ಸಜ್ಜೆಗೆ 2 ಕ್ವಿಂಟಾಲ್, 50 ಕ್ವಿಂಟಾಲ್ ಮೆಕ್ಕೆಜೋಳಕ್ಕೆ 11 ಕ್ವಿಂಟಾಲ್, 337 ಕ್ವಿಂಟಾಲ್ ಸೂರ್ಯಕಾಂತಿಗೆ 21 ಕ್ವಿಂಟಾಲ್ ಸೇರಿ ಒಟ್ಟು 6,604 ಕ್ವಿಂಟಾಲ್ ಬೀಜದ ಗುರಿ ಪೈಕಿ ಕೇವಲ 1436 ಕ್ವಿಂಟಾಲ್ ಬೀಜಗಳ ದಾಸ್ತನು ಆಗಿದೆ.
ಮುಂಗಾರು ಮಳೆ ವಿಳಂಬವಾಗುವ ಸಾಧ್ಯತೆ ಇರುವ ಕಾರಣದಿಂದಾಗಿ ಅದರಲ್ಲೂ ಒಣ ಬೇಸಾಯ ಮಳೆಯಾಶ್ರಿತವಾಗಿದ್ದು, ಬಹುತೇಕ ಬೀಜಗಳು ಒಣ ಪ್ರದೇಶಕ್ಕೆ ಅಗತ್ಯ ಇರುವುದರಿಂದ ದಾಸ್ತಾನು ಮುಂದಿನ ಒಂದು ವಾರದಲ್ಲಿ ಹೆಚ್ಚಳ ಆಗುವ ನಿರೀಕ್ಷೆಯನ್ನು ಕೃಷಿ ಇಲಾಖೆ ಇರಿಸಿಕೊಂಡಿದೆ.
ನೀರಾವರಿ ಪ್ರದೇಶಗಳಲ್ಲಿ ಭತ್ತ, ತೊಗರಿ, ಬಿತ್ತನೆ ಕಡಿಮೆ ಪ್ರದೇಶ ಹೊಂದಿರುವುದು ಕೆಂಪು ಭೂಮಿಯಲ್ಲಿ ಮಾತ್ರ ಸಜ್ಜೆ ಬಿತ್ತನೆ ಪ್ರಮಾಣ ಹೆಚ್ಚಾಗುವುದರಿಂದ ಆ ಬೀಜಗಳು ಮಳೆಯಾಶ್ರಿತ ಪ್ರದೇಶಗಳಲ್ಲಿನ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಹೆಚ್ಚಳಕ್ಕೆ ಚಿಂತನೆ ಮಾಡಲಾಗಿದೆ. ಇನ್ನೂ ಖಾಸಗಿಯವರ ಮಾರಾಟಕ್ಕಾಗಿ ಬೀಜದ ಬೇಡಿಕೆಗೆ ಈಗಾಗಲೇ ಸಂಬಂಧಿಸಿದ ಇಲಾಖೆ, ಬೀಜ ನಿಗಮದ ಜೊತೆ ಮಾತುಕತೆ ನಡೆಸಿದ್ದು ಅವುಗಳ ದಾಸ್ತಾನು ಸಹ ಒಂದು ವಾರದಲ್ಲಿ ಹೆಚ್ಚಳವಾಗಬಹುದು ಎನ್ನುವ ವಿಶ್ವಾಸ ಕೃಷಿ ಇಲಾಖೆ ಅಧಿಕಾರಿಗಳಲ್ಲಿದೆ.
ಇಷ್ಟೊಂದು ದಾಸ್ತನು ಕಡಿಮೆ ಮಾಡಿಕೊಳ್ಳಲು ಜಿಲ್ಲೆಯಲ್ಲಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಿಗೆ ಅಗತ್ಯ ಇರುವ ಎಲ್ಲ ಬೀಜಗಳ ದಾಸ್ತಾನು ಮಾಡಿಕೊಳ್ಳಲು ಗೋದಾಮುಗಳಿಲ್ಲ. ಹೀಗಾಗಿ ವಿವಿಧ ಬಗೆಯ ಬೇಡಿಕೆಯ ಎಲ್ಲ ಬೀಜಗಳ ದಾಸ್ತಾನಿಗೆ ತೊಂದರೆಯಾಗುವುದರಿಂದ ರೈತ ಸಂಪರ್ಕ ಕೇಂದ್ರಗಳಲ್ಲಿನ ದಾಸ್ತಾನು ತಗ್ಗಿದಂತೆ ಅಷ್ಟೇ ಪ್ರಮಾಣದ ಬೀಜ ದಾಸ್ತಾನು ಮಾಡಿಕೊಳ್ಳುವ ಚಿಂತನೆ ಸಹಾಯಕ ಕೃಷಿ ಅಧಿಕಾರಿಗಳದ್ದಾಗಿದೆ. ಒಟ್ಟಾರೆ ಮುಂಗಾರು ಹಂಗಾಮಿಗೆ ಬೀಜಗಳ ದಾಸ್ತಾನು ನಿರೀಕ್ಷಿತ ಮಟ್ಟದಲ್ಲಿಲ್ಲದಿರುವುದು ರೈತರ ಆತಂಕಕ್ಕೆ ಕಾರಣವಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ದಾಸ್ತಾನು ಹೆಚ್ಚಳಕ್ಕೆ ಕೃಷಿ ಇಲಾಖೆ ಮುಂದಾಗಬೇಕಿದೆ.
ಈಗಾಗಲೇ ರಾಷ್ಟ್ರೀಯ ಮತ್ತು ರಾಜ್ಯ ಬೀಜ ನಿಗಮಕ್ಕೆ ಜಿಲ್ಲೆಗೆ ಭತ್ತ , ಸಜ್ಜೆ , ತೊಗರಿ , ಸೂರ್ಯಕಾಂತಿ , ಮೆಕ್ಕೆಜೋಳ ಸೇರಿ ಐದು ಬಗೆಯ ಬೀಜಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಒಂದಷ್ಟು ದಾಸ್ತಾನು ಮಾಡಿಕೊಂಡಿದ್ದು ಗೋದಾಮುಗಳ ಅಭಾವದಿಂದ ಹಂತ, ಹಂತವಾಗಿ ಉಳಿದ ದಾಸ್ತಾನು ಮಾಡಿಕೊಳ್ಳಲಾಗುವುದು. ರೈತರು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ರಾಯಚೂರು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಆರ್. ದೇವಿಕಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications