ಎಲ್ಲೆಡೆ ಋಣಮುಕ್ತ ಕಾಯ್ದೆ ಅರ್ಜಿಗಾಗಿ ನೂಕು ನುಗ್ಗಲು!
ಚಾಮರಾಜನಗರ, ಆಗಸ್ಟ್ 28: ರಾಜ್ಯದಲ್ಲಿ ಆಡಳಿತ ನಡೆಸಿದ ಮೈತ್ರಿ ಸರ್ಕಾರದ ಕೊನೆಯ ಅವಧಿಯಲ್ಲಿ ಅನುಷ್ಠಾನಕ್ಕೆ ತಂದ ಋಣಮುಕ್ತ ಕಾಯ್ದೆಯ ಅರ್ಜಿ ಪಡೆಯಲು ಇದೀಗ ಸಾರ್ವಜನಿಕರು ತಾಲೂಕು ಕಚೇರಿ ಬಳಿ ಜಮಾಯಿಸಿ ಸರದಿ ಸಾಲಿನಲ್ಲಿ ನಿಲ್ಲುತ್ತಿರುವ ದೃಶ್ಯ ಎಲ್ಲೆಡೆ ಕಂಡುಬರುತ್ತಿದೆ.
ಈಗಾಗಲೇ ಖಾಸಗಿಯಾಗಿ ಸಾಲ ನೀಡಿದವರು ಈ ಕಾಯ್ದೆ ಅನುಷ್ಠಾನಕ್ಕೆ ಬಂದ ಬಳಿಕ ಆತಂಕಕ್ಕೀಡಾಗಿದ್ದಾರೆ. ಕೆಲವೆಡೆ ಗಿರವಿ ಅಂಗಡಿ ಮಾಲೀಕರು ಬೀದಿಗಿಳಿದು ಪ್ರತಿಭಟನೆಗೂ ಮುಂದಾಗಿದ್ದಾರೆ. ಇದೀಗ ಋಣಮುಕ್ತ ಕಾಯ್ದೆಯ ಅರ್ಜಿಯನ್ನು ತಾಲೂಕು ಕಚೇರಿಗಳಲ್ಲಿ ವಿತರಣೆ ಮಾಡುತ್ತಿರುವುದರಿಂದ ಜನ ಬೆಳಗ್ಗಿನಿಂದಲೇ ಕಚೇರಿಯತ್ತ ಸುಳಿಯುತ್ತಿದ್ದು, ಕೆಲವೆಡೆ ಜನ ಜಾತ್ರೆಯೇ ಕಂಡು ಬರುತ್ತಿದೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರದ ಪತನದ ಕೊನೆ ಗಳಿಗೆಯಲ್ಲಿ ಕರ್ನಾಟಕ ಋಣಮುಕ್ತ ಕಾಯ್ದೆ ರಾಷ್ಟ್ರಪತಿಗಳಿಂದ ಅಂಕಿತಗೊಂಡಿತ್ತು. ಈ ಬಗ್ಗೆ ಪತ್ರಿಕಾಗೋಷ್ಠಿ ಕರೆದು ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಯ್ದೆ ಕುರಿತಂತೆ ಮಾತನಾಡಿ ಇದರ ಅನುಕೂಲ ಪಡೆದುಕೊಳ್ಳುವಂತೆ ರಾಜ್ಯದ ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಈಗ ಈ ಸಂಬಂಧ ಅರ್ಜಿಗಳನ್ನು ನೀಡಲಾಗುತ್ತಿದೆ.

ಚಾಮರಾಜನಗರ ಜಿಲ್ಲೆಯ ಕೆಲವೆಡೆ ಜನರು ಕೂಲಿ ಕೆಲಸ ಕಾರ್ಯ ಬಿಟ್ಟು ಜಿಲ್ಲೆಯ ತಾಲೂಕು ಕಚೇರಿಯ ಮುಂದೆ ಸರದಿ ಸಾಲಿನಲ್ಲಿ ನಿಂತು ಅರ್ಜಿ ಪಡೆಯುತ್ತಿದ್ದಾರೆ. ಆದರೆ ಅರ್ಜಿ ನಮೂನೆ ವಿತರಿಸುವ ಸಿಬ್ಬಂದಿಗೆ ಮಾಹಿತಿ ಕೊರತೆಯಿಂದಾಗಿ ಸಾರ್ವಜನಿಕರಿಗೆ ಅರ್ಜಿ ನೀಡಲು ಪರಿತಪಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಸೌಲಭ್ಯ ಪಡೆಯಲು ಯಾರು ಅರ್ಹರು?: ಬಹಳಷ್ಟು ಮಂದಿಗೆ ಈ ಕಾಯಿದೆಯ ಬಗ್ಗೆ ಮಾಹಿತಿಯೇ ಇಲ್ಲ. ಹೀಗಾಗಿ ಕೊಳ್ಳೇಗಾಲ ಉಪವಿಭಾಗಾಧಿಕಾರಿ ನಿಖಿತಾಚಿನ್ನಸ್ವಾಮಿ ಅವರು ಸ್ಪಷ್ಟನೆ ನೀಡಿದ್ದು, ಅದು ಹೀಗಿದೆ. ಕರ್ನಾಟಕ ಋಣಮುಕ್ತ ಕಾಯ್ದೆ- 2018ರ 23-7-2019 ರಿಂದ ಜಾರಿಗೆ ಬಂದಿರುವ ಈ ಯೋಜನೆಗೆ ಫಲಾನುಭವಿಗಳ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ಮೀರದಿರುವ ಸಣ್ಣ ರೈತರು, ಭೂ ರಹಿತ ಕೃಷಿ ಕಾರ್ಮಿಕರು ಮತ್ತು ದುರ್ಬಲ ವರ್ಗದ ಜನರು ಒಂದು ವೇಳೆ ಖಾಸಗಿ ಲೇವಾದೇವಿದಾರರು ಹಾಗೂ ಗಿರವಿದಾರರಿಂದ ಸಾಲ ಪಡೆದಿದ್ದಲ್ಲಿ ಈ ಋಣಮುಕ್ತ ಕಾಯ್ದೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಫಲಾನುಭವಿಗಳು 90 ದಿನಗಳಲ್ಲಿ ನಮೂನೆ 2ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications