ನವೆಂಬರ್ 6 ರಿಂದ 8ರ ತನಕ ಈ ಬಾರಿಯ ಕೃಷಿ ಮೇಳ
ಬೆಂಗಳೂರು, ಅಕ್ಟೋಬರ್ 11: ಕೋವಿಡ್ ಭೀತಿಯ ನಡುವೆಯೇ ಈ ಬಾರಿಯೂ ಕೃಷಿ ಮೇಳ ನಡೆಯಲಿದೆ. ರೈತರಿಗೆ ಸಹಾಯಕವಾಗುವ ಕೃಷಿ ಮೇಳವನ್ನು ನಡೆಸಲು ತೀರ್ಮಾನಿಸಲಾಗಿದ್ದು, ದಿನಾಂಕ ನಿಗದಿ ಮಾಡಲಾಗಿದೆ.
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನವೆಂಬರ್ 6 ರಿಂದ 8ರ ತನಕ ಈ ಬಾರಿಯ ಕೃಷಿ ಮೇಳ ನಡೆಯಲಿದೆ. ಕೋವಿಡ್ ಭೀತಿಯ ಪರಿಣಾಮ ಕೃಷಿ ಮೇಳವನ್ನು ಸರಳವಾಗಿ ನಡೆಸಲಾಗುತ್ತಿದೆ.
ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಉಪ ಕುಲಪತಿ ಡಾ. ರಾಜೇಂದ್ರ ಪ್ರಸಾದ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಈ ಬಾರಿ ಕೃಷಿ ಮೇಳ ನಡೆಯಲಿದೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಸರಳವಾಗಿ ಮೇಳವನ್ನು ನಡೆಸಲಾಗುತ್ತದೆ" ಎಂದು ಹೇಳಿದ್ದಾರೆ.

ನವೆಂಬರ್ 6, 7 ಮತ್ತು 8ರಂದು ಕೃಷಿ ಮೇಳ ನಡೆಯಲಿದೆ. ಮೇಳದಲ್ಲಿ ಭಾಗವಹಿಸುವ ರೈತರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕೋವಿಡ್ ಹರಡದಂತೆ ಇರುವ ನಿಯಮಗಳನ್ನು ಪಾಲನೆ ಮಾಡಬೇಕಿದೆ.
ಕೃಷಿ ಮೇಳದಲ್ಲಿ ಜಿಕೆವಿಕೆ ಅಭಿವೃದ್ಧಿ ಪಡಿಸಿರುವ ನೆಲಗಡಲೆ, ಅಲಸಂದೆ ಹಾಗೂ ಮಾವಿನ ಸುಧಾರಿತ ತಳಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಮೇಳದಲ್ಲಿ ಹೆಚ್ಚು ಜನಸಂದಣಿ ಆಗದಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಕೋವಿಡ್ ಕಾರಣದಿಂದಾಗಿ ಈ ಬಾರಿ 25 ರಿಂದ 30 ಮಳಿಗೆಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ರಾಜ್ಯಮಟ್ಟದ 6, ಜಿಲ್ಲಾ ಮಟ್ಟದ 20, ತಾಲೂಕು ಮಟ್ಟದ 120 ಪ್ರಗತಿಪರ ಮತ್ತು ಯುವ ರೈತರಿಗೆ ರೈತ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗುತ್ತದೆ.
ಸಾಮಾಜಿಕ ಜಾಲತಾಣಗಳ ಮೂಲಕವೂ ಕೃಷಿ ಮೇಳವನ್ನು ವೀಕ್ಷಣೆ ಮಾಡಲು ಅವಕಾಶ ನೀಡಲಾಗುತ್ತಿದೆ. ವಿವಿಧ ಗೋಷ್ಠಿಗಳ ವಿಚಾರಗಳು ನಡೆಯಲಿದ್ದು, ತಜ್ಞರು ರೈತರ ಪ್ರಶ್ನೆಗಳಿಗೆ ಆನ್ಲೈನ್ ಮೂಲಕವೇ ಉತ್ತರವನ್ನು ನೀಡಲಿದ್ದಾರೆ.












Click it and Unblock the Notifications