ಹಾಸನ: ಅಕ್ಟೋಬರ್ 26 ರಿಂದ ಫಲಪುಷ್ಪ ಪ್ರದರ್ಶನ, ವಿಶೇಷತೆಗಳು
ಹಾಸನ, ಅಕ್ಟೋಬರ್ 24: ಶ್ರೀ ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಾಸನದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಅಕ್ಟೋಬರ್ 26 ರಿಂದ 29ರ ತನಕ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯವನ್ನು ಮರಳು ಬಳಸಿ ಕಲಾತ್ಮಕ ರೂಪದಲ್ಲಿ ರಚಿಸಿ, ಪ್ರದರ್ಶಿಸಲಾಗುತ್ತದೆ. ಜಿಲ್ಲೆಯ ಜನರ ಜೀವನಾಡಿಯಾದ ಹೇಮಾವತಿ ಜಲಾಶಯದ ಪ್ರತಿಕೃತಿಯನ್ನು ವಿವಿಧ ಹೂವುಗಳಿಂದ ಸಿದ್ಧಪಡಿಸಲಾಗುತ್ತದೆ.
ಹಾಸನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ತೋಟಗಾರಿಕೆ ಇಲಾಖೆ, ಹೇಮಾವತಿ ತೋಟಗಾರಿಕೆ ಸಂಘ ಹಾಗೂ ಇತರೆ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಹಾಸನಾಂಬ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಫಲಪುಷ್ಪ ಪ್ರದರ್ಶನವನ್ನು ಹಾಸನ ನಗರದ ಸಿಲ್ವರ್ ಜುಬ್ಲಿ ಆರ್ಚರ್ಡ್ ಪಾರ್ಕ್ನಲ್ಲಿ ಆಯೋಜಿಸಲಾಗಿದೆ.

ಫಲಪುಷ್ಪ ಪ್ರದರ್ಶನದ ಅಂಗವಾಗಿ ಪ್ರತಿದಿನ ಸಂಜೆ 6.30 ರಿಂದ 8.30 ರವರೆಗೆ ವಿವಿಧ ಕಲಾ ತಂಡಗಳು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಫಲಪುಷ್ಪ ಪ್ರದರ್ಶನಕ್ಕೆ ವಯಸ್ಕರಿಗೆ 10 ರೂ. ಹಾಗೂ ಮಕ್ಕಳಿಗೆ 5 ರೂ. ರೂಗಳ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಫಲಪುಷ್ಪ ಪ್ರದರ್ಶನದ ವಿಶೇಷತೆಗಳು: ಹಾಸನ ಜಿಲ್ಲೆ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಒಳಗೊಂಡಿದೆ. ಶಿಲ್ಪಕಲೆಗಳ ತವರೂರಾಗಿದೆ. ಈ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳನ್ನು ವಿವಿಧ ಫಲಪುಷ್ಪಗಳಿಂದ ಅಲಂಕರಿಸಿ ಪ್ರದರ್ಶಿಸುವ ಮೂಲಕ ಹಾಸನದ ಇತಿಹಾಸದ ವೈಭವವನ್ನು ಮರುಕಳಿಸುವುದು ಈ ಬಾರಿಯ ಫಲಪುಷ್ಪ ಪ್ರದರ್ಶನದ ವಿಶೇಷತೆ.
12ನೇ ಶತಮಾನದಲ್ಲಿ ಹೊಯ್ಸಳ ರಾಜರು ಕಟ್ಟಿಸಿರುವ ನಕ್ಷತ್ರಾಕಾರದ ವೇದಿಕೆಯ ಮೇಲೆ ನಿಂತಿರುವ ಚೆನ್ನಕೇಶವ ದೇವಾಲಯವು ತನ್ನ ಸುಂದರ ಶಿಲ್ಪಕಲೆ, ಅದ್ಭುತ ವರ್ಣಚಿತ್ರಗಳು ಹಾಗೂ ಶಿಲಾಸೃಷ್ಟಿಗೆ ಜಗದ್ವಿಖ್ಯಾತವಾಗಿದ್ದು, ಈ ದೇವಾಲಯವನ್ನು ವಿವಿಧ ಬಗೆಯ ಹೂವುಗಳಿಂದ ತಯಾರಿಸಲಾಗಿದೆ.
ಹೊಯ್ಸಳ ಸಾಮ್ರಾಜ್ಯದ ಸಾಮರ್ಥ್ಯ, ಸಾಹಸ ಮತ್ತು ವಿಜಯದ ಸಂಕೇತವಾಗಿರುವ ಹೊಯ್ಸಳ ಲಾಂಛನ ಮತ್ತು ಕರ್ನಾಟಕದ ಶ್ರೀ ಶೈಲವೆಂದೇ ಹೆಸರುವಾಸಿಯಾಗಿರುವ ಶಿವನಿಗೆ ಸಮರ್ಪಿತವಾದ ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯವನ್ನು ಮರಳು ಬಳಸಿ ಕಲಾತ್ಮಕ ರೂಪದಲ್ಲಿ ನಿರ್ಮಾಣ ಮಾಡಲಾಗಿದೆ.
ಶಾಂತಿ, ಅಹಿಂಸೆ, ತ್ಯಾಗ ಮತ್ತು ಸರಳ ಜೀವನದ ಸಂದೇಶವನ್ನು ಸಾರುವ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದ ಮೇಲೆ ನಿಂತಿರುವ ವಿಶ್ವದ ಅತಿ ಎತ್ತರದ ಏಕಶಿಲಾ ಪ್ರತಿಮೆಯೆಂದೇ ಪ್ರಸಿದ್ದವಾಗಿರುವ ಗೊಮ್ಮಟೇಶ್ವರ ಪ್ರತಿಮೆಯನ್ನು ಪ್ರದರ್ಶಿಸಲಾಗಿದೆ.
ಮಾನವ ಕುಲದ ಕಲ್ಯಾಣಕ್ಕಾಗಿ ಜನಿಸಿ, ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ಪಸರಿಸಿ, ಆಸೆಯೇ ದು:ಖಕ್ಕೆ ಮೂಲವೆಂದು ತಿಳಿಸಿದ ಗೌತಮ ಬುದ್ದನ ಪ್ರತಿಮೆಯನ್ನು ಪ್ರದರ್ಶಿಸಿರುವುದು ಆಕರ್ಷಕವಾಗಿದೆ. ಹಾಸನದ ಬಾಹ್ಯಾಕಾಶ ಮುಖ್ಯ ನಿಯಂತ್ರಣಾ ಕಛೇರಿಯಿಂದ ಉಪಗ್ರಹಗಳ ಮಾದರಿಗಳನ್ನು ಪ್ರದರ್ಶಿಸಲಾಗುತ್ತದೆ.
ವಿವಿಧ ಹಣ್ಣು ಮತ್ತು ತರಕಾರಿಗಳನ್ನು ಬಳಸಿ ಬಗೆ ಬಗೆಯ ಪ್ರಾಣಿ ಪಕ್ಷಿಗಳನ್ನು ಕೆತ್ತನೆ ಮಾಡಲಾಗಿದೆ. ವಿವಿಧ ಬಗೆಯ ಲಕ್ಷಾಂತರ ಹೂಗಳಿಂದ ಅಲಂಕೃತಗೊಂಡಿರುವ ಮಂಜರಾಬಾದ್ ಕೋಟೆ, ಬೆಟ್ಟದಿಂದ ಬಟ್ಟಲಿಗೆ ಕಾಫಿಯ ಪಯಣ, ಸೆಲ್ಫಿ ಪಾಯಿಂಟ್ ಇನ್ನಿತರೆ ಪ್ರದರ್ಶಿಕೆಗಳು ಜನರ ಕಣ್ಮನ ಸೆಳೆಯಲಿವೆ.
ರೈತರು ಬೆಳೆದ ಉತ್ತಮ ಗುಣಮಟ್ಟದ ತೋಟಗಾರಿಕೆ ಉತ್ಪನ್ನಗಳ ಸ್ಪರ್ಧೆ ಹಾಗೂ ಪ್ರದರ್ಶನ ಏರ್ಪಡಿಸಿದ್ದು, ಉತ್ತಮ ತೋಟಗಾರಿಕೆ ಉತ್ಪನ್ನಗಳನ್ನು ಪ್ರದರ್ಶಿಸುವ ರೈತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲು ಉದ್ದೇಶಿಸಲಾಗಿದೆ.
ಸಾರ್ವಜನಿಕರು ತೋಟಗಾರಿಕೆಯಲ್ಲಿ ಆಸಕ್ತಿ ಬೆಳಸಿಕೊಳ್ಳುವ ನಿಟ್ಟಿನಿಂದ ಮನೆಯಂಗಳದಲ್ಲಿ ಅಲಂಕಾರಿಕ ತೋಟಗಳ ನಿರ್ವಹಣೆ, ಟೆರೇಸ್ ಗಾರ್ಡನಿಂಗ್, ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಗುತ್ತದೆ.
ಸಾರ್ವಜನಿಕರು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆಯನ್ನು ಹಾಗೂ ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳು ಪ್ರದರ್ಶನ/ ಮಾರಾಟ ಮಳಿಗೆಗಳನ್ನು ತೆರೆಯಲು ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರಿಗೆ ಹೊಸ ತಾಂತ್ರಿಕತೆಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸುತ್ತದೆ.












Click it and Unblock the Notifications